Wednesday, August 10, 2011

ಕರ್ಣ



ಕರ್ಣ...ಈಗ ನೋಡಿದರೆ ಅವನು ಗೆಳೆಯನಂತಿದ್ದ ಅನಿಸುತ್ತದೆ. ನನಗಿಂತ ನಾಕೈದು ವರ್ಷ ದೊಡ್ಡವನಿರಬಹುದು. ಅಜ್ಜನ ಮನೆಗೆ ಕೆಲಸಕ್ಕೆ ಬರುತ್ತಿದ್ದ ಸಂಕಮ್ಮನ ಅಕ್ಕನ ಮಗ. ಬರಿಗಾಲು, ಲಾಡಿಹಾಕಿದ ಗಟ್ಟಿ ಚಡ್ಡಿ, ನೀರುಕಲೆಯಿದ್ದರೂ ಸ್ವಚ್ಛವಾಗಿದ್ದ ಬಟ್ಟೆ, ಉರುಟುರುಟು ಮುಖ...ಆ ಮುಖ ಈಗ ಸ್ಪಷ್ಟವಾಗುವುದಿಲ್ಲ.

ಅವನಿಗೆ `ಕರ್ಣ' ಅನ್ನುವ ಆ ಚೆಂದದ ಹೆಸರನ್ನು ಯಾರಿಟ್ಟರೋ. ಸ್ವಭಾವದಲ್ಲೂ ಸ್ವಲ್ಪ ಮಹಾಭಾರತದ ಕರ್ಣನನ್ನೇ ಹೋಲುತ್ತಿದ್ದ. ಅಷ್ಟು ಸಣ್ಣ ಹುಡುಗ ಕೆಲಸದಲ್ಲೂ ಚೂಟಿ. ಆ ಮಾರಾಯ ಸುಮ್ಮನಿದ್ದದ್ದು ನಾನು ನೋಡಿಲ್ಲ. ಏನೂ ಕೆಲಸವಿಲ್ಲದಿದ್ದರೆ ಉಗುರು ಕಚ್ಚುವ ಅಭ್ಯಾಸ. ಕಚ್ಚಿ ಕಚ್ಚಿ ಅವನ ಉಗುರು ಉದ್ದವೇ ಬರುತ್ತಿರಲಿಲ್ಲ. ಅಜ್ಜನ ಮನೆಯ ಎದುರಿಗಿದ್ದ ಪೇರಳೆ ಮರ ಅವನ ಪ್ರೀತಿಯ ಸ್ಥಳ. ದಿನಕ್ಕೊಮ್ಮೆಯಾದರೂ ಆ ಮರ ಹತ್ತದಿದ್ದರೆ ಅವನಿಗೆ ನಿದ್ದೆ ಬರುತ್ತಿರಲಿಲ್ಲ. ಎಷ್ಟು ತುದಿಯಲ್ಲಿ ಪೇರಳೆ ಹಣ್ಣು ಬಿಟ್ಟಿದ್ದರೂ ಕ್ಯಾರೇ ಇಲ್ಲ. ಸಪೂರದ ಗೆಲ್ಲಿನ ಮೇಲೆ ನಿಂತು ಪೇರಳೆಗೆ ಕೈಚಾಚುವಾಗ, ಬಿದ್ದೇಬಿಡುತ್ತಾನೆ ಅನಿಸುತ್ತಿತ್ತು. ಆದರೆ ಅವ ಅಷ್ಟೇ ಚಾಲಾಕಿನಿಂದ ಪೇರಳೆ ಕೊಯ್ದು ಕಿಸೆಗೆ ಹಾಕುತ್ತಿದ್ದ. ಕರ್ಣನನ್ಯಾರಾದರೂ ಹುಡುಕುತ್ತಿದ್ದರೆ, `ಪೇರಳೆ ಮರದಲ್ಲಿರಬಹುದು' ಎಂಬ ಉತ್ತರ ಮೊದಲು ಬರುತ್ತಿತ್ತು.

ಒಮ್ಮೆ ಹೀಗಾಯ್ತು. ಕರ್ಣ ಆಗಷ್ಟೇ ಹಂಡೆಗೆಲ್ಲ ನೀರು ತುಂಬಿಸಿ, ಎಂದಿನಂತೆ ಪೇರಳೆ ಮರದ ಗೆಲ್ಲೊಂದರಲ್ಲಿ ಕೂತು ಪೇರಳೆ ಅಗಿಯುತ್ತಿದ್ದ. ಮೂಲೆಮನೆ ಇಸುಬು ತೋಟದ ಕೆಲಸ ಮುಗಿಸಿ ಪೇರಳೆ ಮರದಡಿಯಿಂದಾಗಿ ಮನೆಗೆ ಹೋಗುತ್ತಿದ್ದ. ಏನಕ್ಕೋ ಒಮ್ಮೆ ಮೇಲೆ ನೋಡಿ ಕರ್ಣನತ್ತ ನೋಡಿ ನಕ್ಕು, ಪಕ್ಕ ನೋಡಿದವನು, `ಹಾವು ಹಾವು ..' ಅಂತ ಜೋರಾಗಿ ಬೊಬ್ಬೆಹೊಡೆದ. ಕರ್ಣ ಅತ್ತ ನೋಡುತ್ತಾನೆ. ದಪ್ಪದ ಕಪ್ಪು ಹಾವೊಂದು ಪಕ್ಕದ ಗೆಲ್ಲಿಗೇ ಸುತ್ತಿಕೊಂಡಿದೆ. ಆ ಕ್ಷಣ ಹೆದರಿ ಏನು ಮಾಡುವುದೆಂದು ಗೊತ್ತಾಗದೇ ಕೈಕಾಲು ನಡುಗತೊಡಗಿತು. ಕಣ್ಣುಕತ್ತಲೆ ಬಂದಂತಾಗಿ ಕೆಳಗೆ ಬಿದ್ದೇಬಿಟ್ಟ. ಪುಣ್ಯಕ್ಕೆ ಕಾಲು ಗಂಟು ತರಚಿದ್ದು ಬಿಟ್ಟರೆ ದೊಡ್ಡಪೆಟ್ಟೇನೂ ಆಗಲಿಲ್ಲ.

ಇನ್ನಾದರೂ ಆ ಮರ ಹತ್ತಬೇಡ ಮಾರಾಯ ಅಂತ ಅಜ್ಜ ಬುದ್ದಿ ಹೇಳಿದ್ದೇ ಬಂತು. ಕಾಲು ಸರಿಯಾಗುವ ಮೊದಲೇ ಮತ್ತೆ ಮರ ಹತ್ತಿದ್ದ. `ಅವನು ಹುಟ್ಟಾ ಮಂಗ' ಅಂತ ಅಜ್ಜ ಗೊಣಗುತ್ತಿದ್ದರು.

ಕರ್ಣನ ಅಮ್ಮನ ಹೆಸರು ಕಮಲ ಅಂತ. ನಾನವಳನ್ನು ನೋಡಿದ ನೆನಪಿಲ್ಲ. ಅವಳು ಕರ್ಣನನ್ನು ನೋಡಲು ಬರುತ್ತಿದ್ದದ್ದು ಕಡಿಮೆ. ಅವಳಿದ್ದದ್ದು ಕನ್ಯಾನದಲ್ಲಿ. ಅಜ್ಜನ ಮನೆ ಮೇಲಿದ್ದ ಪದವನ್ನು ದಾಟಿದರೆ ಸಿಗುವುದು ಕಳೆಂಜಿಮಲೆ ಕಾಡು. ಒಂದು ಕಾಲಕ್ಕೆ ಹೆಬ್ಬುಲಿಯಿದ್ದ ಕಾಡದು. ಈಗ ಬೋಳುಗುಡ್ಡ. ಫಾರೆಸ್ಟಿವರು ನೆಟ್ಟ ಒಂದಿಷ್ಟು ಗಾಳಿಗಿಡ, ಅಕೇಶಿಯಾ ಗಿಡಗಳನ್ನು ಬಿಟ್ಟರೆ,ಒಂದಿಷ್ಟು ಸಣ್ಣಪುಟ್ಟ ಮರಗಳಿವೆಯಷ್ಟೇ. ಕಳಂಜಿಮಲೆ ಕಾಡನ್ನು ಹತ್ತಿ ಇಳಿದರೆ ಆ ಬದಿಗಿರುವುದು ಕನ್ಯಾನ. ಸಣ್ಣ ಊರು. ಕರ್ಣ ತಿಂಗಳಿಗೊಮ್ಮೆ ಅಲ್ಲಿಗೆ ಹೋಗಿ ಬರುತ್ತಿದ್ದ. ಒಮ್ಮೊಮ್ಮೆ ಪೆಪ್ಪರಮೆಂಟು ತಂದುಕೊಡುತ್ತಿದ್ದ. ಇಲ್ಲವಾದರೆ ನೆಲ್ಲಿಕಾಯಿ. ಪೆಪ್ಪರಮೆಂಟನ್ನು ಚಪ್ಪರಿಸಿ ತಿನ್ನುತ್ತಿದ್ದ ನನಗೆ ನೆಲ್ಲಿಕಾಯಿ ಅಷ್ಟಕ್ಕಷ್ಟೇ. ಕರ್ಣ ಕೊಟ್ಟ ನೆಲ್ಲಿಕಾಯನ್ನು ಅಮ್ಮ, ಚಿಕ್ಕಮ್ಮ ಇಷ್ಟಪಟ್ಟು ತಿನ್ನುತ್ತಿದ್ದರು.

ಇಲ್ಲಿ ಕರ್ಣ ಇದ್ದದ್ದು ಸಂಕಮ್ಮನ ಮನೆಯಲ್ಲಿ. ತಗ್ಗಿನಲ್ಲಿದ್ದ ಅಜ್ಜನ ಮನೆಯಿಂದ ಮೇಲೆ ಹತ್ತಿ ಬ್ಯಾರಿಗಳ ಗದ್ದೆ ದಾಟಿದರೆ ಸಿಗುವ ಮೊದಲ ಮನೆ ಮಮ್ಮದೆ ಬ್ಯಾರಿಯದ್ದು. ಎರಡನೇ ಮನೆ ಸಂಕಮ್ಮಂದು. ಮಣ್ಣಿನ ಮನೆ. ಸೆಗಣಿ ಬಳಿದು ಚೆನ್ನಾಗಿ ಗುಡಿಸಿದ್ದ ಅಂಗಳದಲ್ಲಿ ಅಲ್ಲಲ್ಲಿ ಕೋಳಿ ಹಿಕ್ಕೆ. ಚಪ್ಪಲಿ ಇಲ್ಲದೆ ಹೋದರೆ ಅಂಟಿನಂತೆ ಕಾಲಿಗಂಟಿಕೊಳ್ಳುತ್ತಿತ್ತು. ಪಕ್ಕಕ್ಕೆ ತೆಂಗಿನ ಸಸಿ. ಆಗಾಗ ಹೂಬಿಡುತ್ತಿದ್ದ ಅರಸಿನ ಬಣ್ಣದ ಅಬ್ಬಲ್ಲಿಗೆ ಗಿಡ, ಮದರಂಗಿ ಗಿಡ. ಒಂದೆರಡು ಬಾರಿ ಕರ್ಣ ಅದರ ಎಲೆಕೊಯಿದು ಕೊಟ್ಟಿದ್ದ.

ನಮಗೆಲ್ಲ ಆಗ ಮದರಂಗಿ ಹಾಕಿಕೊಳ್ಳುವ ಹುಚ್ಚು. ಹಳ್ಳಿಯಾದ ಕಾರಣಕ್ಕೋ ಏನೋ, ಆಗೆಲ್ಲ ಮೆಹಂದಿ ಕೋನ್ಗಳ ಬಳಕೆ ನಮಗೆ ತಿಳಿದಿರಲಿಲ್ಲ. ಮದುರಂಗಿ ಗಿಡದ ಎಲೆ ಕೊಯ್ದು, ಅದಕ್ಕೆ ಟೀ ಡಿಕಾಕ್ಷನ್, ಕೆಂಪಿರುವೆ ಮತ್ತೂ ಏನೇನೆಲ್ಲ ಹಾಕಿ ಕಲ್ಲಿನಲ್ಲಿ ಅರೆಯುತ್ತಿದ್ದರು. ನಾವೆಲ್ಲ ಅರೆಯುವಷ್ಟು ದೊಡ್ಡವರಲ್ಲದ ಕಾರಣ ನಮಗೆ ಶಾಲೆಯಲ್ಲಿ ಬೇರೆ ಮಕ್ಕಳ ಕೈ ನೋಡಿ ಆಸೆ ಬಿಡುವುದಷ್ಟೇ ಆಗಿತ್ತು. ಆದರೂ ಕರ್ಣ ಕೊಟ್ಟ ಮದುರಂಗಿ ಎಲೆಯನ್ನು ಕೊಟ್ಟಿಗೆಯ ಹಿಂದಿದ್ದ ಕಲ್ಲಿನಲ್ಲಿ ಜಜ್ಜಿ ಕೈಗೆ ಹಾಕಿಕೊಳ್ಳುತ್ತಿದ್ದೆ. ಹೌದೋ ಅಲ್ಲವೋ ಎಂಬಂತೆ ನಸು ಹಳದಿ ರಂಗು ಬರುತ್ತಿತ್ತು. ಅಜ್ಜನ ಮನೆಯೊಳಗೆ ಅದಕ್ಕೆ ಪ್ರವೇಶ ಇರಲಿಲ್ಲ. ಮದರಂಗಿಯನ್ನು ಅಜ್ಜ, ಅಜ್ಜಿ ಎಲ್ಲ ಅಸ್ಪ್ರಶ್ಯವಾಗಿ ಕಾಣುತ್ತಿದ್ದರು.

ರಂಜಾನ್ ಹಬ್ಬದ ದಿನ ಮದರಂಗಿ ಕೊಯಿದು ಕೊಡಲು ಜುಬ್ಬಿ, ಯಾಸ್ಮಿನ್ ಕರ್ಣನಿಗೆ ದುಂಬಾಲು ಬೀಳುತ್ತಿದ್ದರು. ಜೋರು ಮಳೆಬಂದು ನಿಂತಾಗ ತುಸು ಎತ್ತರಕ್ಕೆ ವಿಶಾಲವಾಗಿ ಹಬ್ಬಿದ ಮದುರಂಗಿ ಗಿಡದಡಿ ನಾವು ಒಂದಿಷ್ಟು ಮಕ್ಕಳು ಓಡಿ ಹೋಗಿ ನಿಂತುಬಿಡುತ್ತಿದ್ದೆವು. ಆಗಾಗ ಬೀಸುವ ಗಾಳಿಗೆ ಎಲೆಗಳಿಂದ ನೀರು ಮೈಮೇಲೆ ಬಿದ್ದಾಗ ಕಚಗುಳಿಯಿಟ್ಟಂತೆ ನಗುತ್ತಿದ್ದೆವು. ಈ ಗಿಡದ ಪಕ್ಕದಲ್ಲೇ ಕೊಟ್ಟಿಗೆ. ಅಲ್ಲಿ ಬಟ್ಟಿ ಮುಚ್ಚಿದಲ್ಲಿಂದಲೇ ಕ್ಕೊಕ್ಕೋ ಎನ್ನುತ್ತಿದ್ದ ಕೋಳಿ.

ಇನ್ನು ಮಣ್ಣಿನ ಮನೆಯೊಳಗೆ ಹೋದರೆ ಎದುರಲ್ಲೇ ಅಡಿಕೆ ಮರದ ತಟ್ಟಿಯ ಮೇಲೆ ಹರಡಿದ್ದ ಕೊರಗಜ್ಜನ ಕೋಮಣ (ಲಂಗೋಟಿ). ಕೊರಗಜ್ಜ ಕರ್ಣನ ಅಜ್ಜ. ಅಜ್ಜನ ಮನೆಯಲ್ಲಿ ಭೂತದ ಕೋಲ ನಡೆಯುವಾಗ ಅವನಿಗೆ ಮೈಮೇಲೆ ದರ್ಶನ ಬರುತ್ತಿತ್ತು. ಕೋಮಣದ ಪಕ್ಕದಲ್ಲೇ ಕರ್ಣನ ಹರಿದ ಬಟ್ಟೆಗಳು. ನೆಲದಲ್ಲಿ ಬೀಡಿಎಲೆ ತಟ್ಟೆ. ಸಂಕಮ್ಮ ಬಿಡುವಿದ್ದಾಗಲೆಲ್ಲ ಸ್ಟೀಲಿನ ಉಗುರನ್ನು ಬಿಸಿ ಮಾಡಿ ಉಗುರಿಗೆ ಅಂಟಿಸಿ, ರಪ ರಪನೆ ಬೀಡಿ ಕಟ್ಟುತ್ತಿದ್ದಳು.

ಮಣ್ಣಿನ ಮನೆಯಾದ ಕಾರಣ ಕರ್ಣನ ಮನೆಯೊಳಗೆ ಕಾಲಿಟ್ಟರೆ ತಂಪು ತಂಪು. ಒಳಗಿಂದ ಕಮಟು ಪರಿಮಳ. ನಾನು ಅವರ ಮನೆಗೆ ಹೋದಾಗ ಸಂಕಮ್ಮ ಅಲ್ಲಿದ್ದರೆ ಸಾಂತಾಣಿ ಕೊಡುತ್ತಿದ್ದಳು. ಆ ಗಟ್ಟಿ ಬೇಳೆಯನ್ನು ಅಗಿಯಲು ಪ್ರಯತ್ನಿಸಿ ಆಗದೇ ಕೊನೆಗೆ ಚಾಕೊಲೇಟ್ನಂತೆ ಚೀಪುತ್ತಿದ್ದೆ. ಉಪ್ಪು ಸೇರಿಸಿದ್ದ ಕಾರಣ ಒಳ್ಳೆ ರುಚಿ ಇರುತ್ತಿತ್ತು. ಆಮೇಲೆ ಕರ್ಣನ ಜತೆ ಚೆನ್ನಮಣೆ ಆಡುತ್ತಿದ್ದೆ.

ಕರ್ಣ ಶಾಲೆಗೆ ಹೋದದ್ದು ನನಗೆ ನೆನಪಿಲ್ಲ. ಆದರೆ ನನಗೆ ಸರಿಯಾಗಿ ಬರೆಯಲು ಕಲಿಸಿದ ಅಮ್ಮನ ನಂತರದ ಗುರು ಅವನೇ. ನಾನು `ಇ' ಉಲ್ಟಾ ಬರೆಯುತ್ತಿದ್ದೆ. ಅಮ್ಮ ಎಷ್ಟು ಸಲ ಹೇಳಿಕೊಟ್ಟರೂ ಸರಿಯಾಗುತ್ತಿರಲಿಲ್ಲ. ಕೈಗಂಟಿನ ಮೇಲೆ ಹೊಡೆದರೂ ನನ್ನ `ಇ' ಉಲ್ಟವೇ. ಅದ್ಹೇಗೋ ಕರ್ಣ ಅದನ್ನು ಸರಿ ಮಾಡಿಬಿಟ್ಟ. ನಂಗೆ ಕಾಪಿ ಬರೆಯಲು ಹೇಳಿಕೊಟ್ಟದ್ದೂ ಸಹ. ಅಜ್ಜನ ಮನೆಯ ಹೊರಜಗುಲಿಯಲ್ಲಿ ಕುಳಿತು ಕಾಪಿ ಬರೆಸುತ್ತಿದ್ದ. ಕೆಲವೊಮ್ಮೆ ಅವನೇ ಬರೆದುಕೊಡುತ್ತಿದ್ದ. ಆಮೇಲೆ ನಾನು ಕಾಪಿ ಬರೆದುಕೊಡು ಅಂತ ಆಗಾಗ ಅವನಲ್ಲಿ ಗೋಗರೆಯುತ್ತಿದ್ದೆ. ಕದ್ದುಮುಚ್ಚಿ ಬರೆದುಕೊಡುತ್ತಿದ್ದ. ಒಂದು ಸಲ ಅಮ್ಮನಿಗೆ ಗೊತ್ತಾಗಿ ಅವರು ಬೈದ ಮೇಲಿಂದ ಏನು ಮಾಡಿದರೂ ಬರೆದುಕೊಡಲಿಲ್ಲ.

...`ನೋಡು, ಆ ಪದವಿನ ಈ ತುದಿಯಲ್ಲಿ ಗುಳಿಗ ಭೂತ ಉಂಟು. ನಡು ರಾತ್ರಿ ಗುಳಿಗನ ಸಂಚಾರ. ಆ ಹೊತ್ತಲ್ಲಿ ಅಲ್ಲಿಯಾಗಿ ಬಂದರೆ ಗುಳಿಗನ ಸೂಟೆ ಕಾಣ್ತದಂತೆ.' ಒಂದು ಸಂಜೆ ಹೊರಜಗುಲಿಯಲ್ಲಿ ಕೂತು ಕರ್ಣ ಗುಳಿಗನ ಕತೆ ಹೇಳುತ್ತಿದ್ದ.
`ಆ ಭೂತ ಯಾರಿಗೂ ಹೆದರುವುದಿಲ್ಲ. ಮೊನ್ನೆ ರಾತ್ರಿ ಅಜ್ಜ ಕುಡ್ತಮೊಗೇರಿಂದ ಬರುವಾಗ ಲೇಟಾಗಿತ್ತು. ಕೈಯಲ್ಲಿ ಟಾಚರ್್ ಕೂಡಾ ಇರ್ಲಿಲ್ಲ. ಪದವಿನ ಹತ್ತಿರ ಬರುವಾಗ ಗುಡ್ಡದ ಕಡೆಯಿಂದ ಕೆಂಪು ಲೈಟಿನ ಹಾಗೆ ಎಂತದೋ ಕಂಡಿತಂತೆ. ಯಾವುದೋ ಜೀಪು ಆಗಿರಬಹುದು ಅಂತ ಅಜ್ಜ ಸುಮ್ಮನೇ ಹೋದರಂತೆ. ಯಾಕೋ ಡೌಟು ಬಂದು ಸ್ವಲ್ಪ ಮುಂದೆ ಹೋಗಿ ನೋಡಿದರೆ ಯಾರೋ ಎರಡೂ ಕೈಯಲ್ಲಿ ಕೆಂಪು ಲೈಟು ತಿರುಗಿಸಿದ್ದು ಕಂಡಿತಂತೆ. ಆಗ ಅಜ್ಜನಿಗೆ ಫಕ್ಕ ಇದು ಗುಳಿಗ ಸೂಟೆ ಬೀಸುವುದು ಅಂತ ಗೊತ್ತಾಯ್ತಂತೆ.'

`ಮತ್ತೆಂತಾಯ್ತು? ' ಕುತೂಹಲ ಬೆರೆತ ನನಗೆ ಆಗಲೇ ಗಡಗಡ ಶುರುವಾಗಿತ್ತು.
`ಮತ್ತೆಂತಾಗುವುದು ನನ್ನಜ್ಜ ಎದ್ದುಬಿದ್ದು ಓಡಿ ಬಂದರಂತೆ. ಮತ್ತೆರಡು ದಿನ ಅಜ್ಜನಿಗೆ ಜೋರು ಜ್ವರ. ಅಜ್ಜಿ ಹರಕೆ ಕಟ್ಟಿಕೊಂಡ ಮೇಲೇ ಜ್ವರ ನಿಂತದ್ದು.' ಅಂದು ನಿಲ್ಲಿಸಿದ.
`ಏ ಕರ್ಣ ಈ ಭೂತ ಜೋರಾ, ಪಾಪವಾ?'
`ಭೂತ ಪಾಪ ಇರುವುದುಂಟಾ? ಜೋರು ಅಂದರೆ ಜೋರು. ನೀನೆಲ್ಲಾದರೂ ಸೂಟೆ ನೋಡಿದರೆ, ಚಡ್ಡಿಯಲ್ಲೇ ಮೂತ್ರ, ಹೆ ಹೆ!'
`ಭೂತ ನಮ್ಗೆನಾದ್ರೂ ಮಾಡ್ತದಾ ಕರ್ಣ?'
...ಅಷ್ಟರಲ್ಲಿ ಅಜ್ಜ ಕರ್ಣನನ್ನು ಕರೆದದ್ದು ಕೇಳಿಸಿತು. ಒಂದೇ ಓಟದಲ್ಲಿ ಅಂಗಳದ ತುದಿಗೆ ಹೋಗಿ ವೀಳ್ಯದೆಲೆ ಕೊಯ್ಯತೊಡಗಿದ.

ಆದಿನ ರಾತ್ರಿ ಟಾಯ್ಲೆಟ್ಟಿಂದ ಅಡಿಗೆ ಮನೆಯವರೆಗೂ ಅಮ್ಮನ ಜತೆಗೇ ಓಡಾಡುತ್ತಿದ್ದೆ. ನಿದ್ದೆಯಲ್ಲೂ ಕಿರಿಚುತ್ತಿದ್ದೆನಂತೆ. ಆಮೇಲೆ ನಾನೆಷ್ಟು ಸಲ ಗುಳಿಗನ ಕಥೆ ಕೇಳಿದರೂ ಕರ್ಣ ಏನೇನೋ ಹೇಳಿ ವಿಷಯ ಹಾರಿಸುತ್ತಿದ್ದ. `ಮಗುವಿಗೆ ಏನೆಲ್ಲ ಹೇಳಿ ಹೆದರಿಸ್ತೀಯಾ' ಅಂತ ಅಜ್ಜ ಅವನನ್ನು ಕರೆದು ಬಯ್ದಿದ್ದರಂತೆ. ನನಗೆ ಆಮೇಲೆ ಸಂಕಮ್ಮ ಹೇಳಿದಾಗಲೇ ಈ ವಿಷಯ ಗೊತ್ತಾದದ್ದು.

ನಾವು ಕೆವರ್ಾಶೆಗೆ ಮೊದಲ ಬಾರಿ ಹೋದಾಗ ಅಲ್ಲಿಗೂ ಕರ್ಣ ಬಂದಿದ್ದ. ಒಂದೆರಡು ದಿನ ಇದ್ದು ಹೋಗಿದ್ದ. ನಾನಾಗ ನಾಲ್ಕನೇ ಕ್ಲಾಸ್. ಅಲ್ಲಿ ನಾವಿಬ್ಬರೂ ಹೊಳೆಗೆ ಈಜಾಡಲು ಹೋದರೆ ಅಮ್ಮ ಬಂದು ಬೈದ ಮೇಲೇ ಮನೆಗೆ ವಾಪಾಸಾಗುತ್ತಿದ್ದದ್ದು. ಕರ್ಣ ಈಜುತ್ತಿದ್ದ. ನಾನೂ ಅವನ ಹಾಗೇ ಈಜಲು ಪ್ರಯತ್ನಿಸಿ ಉಸಿರುಗಟ್ಟಿ ನೀರು ಕುಡಿದಿದ್ದೆ.

...ಈಗ ಕರ್ಣ ಎಲ್ಲಿದ್ದಾನೆ ಹೇಗಿದ್ದಾನೆ ಗೊತ್ತಿಲ್ಲ. ತುಂಬ ವರ್ಷದ ಹಿಂದೆಯೇ ಸಂಕಮ್ಮ ಮತ್ತು ಕರ್ಣ ಕನ್ಯಾನ ಹತ್ತಿರ ಎಲ್ಲೋ ಸಂಬಂಧಿಕರ ಮನೆಗೆ ಹೋಗಿದ್ದರು. ಮತ್ತೆ ವಾಪಾಸು ಬರಲಿಲ್ಲ. ಆಮೇಲೆ ಅವರ ಸುದ್ದಿಯೂ ಇರಲಿಲ್ಲ.

ಮೊನ್ನೆ ಮಳೆ ನೋಡಬೇಕೆಂದು ಅಜ್ಜನ ಮನೆಗೆ ಹೋಗಿದ್ದೆ. ಕಾರ್ಕಳದಿಂದಲೇ ಮಳೆ, ಮಳೆ..ಬಸ್ಸಿನಲ್ಲಿ ಸಿಕ್ಕಾಬಟ್ಟೆ ರಶ್ಶು. ವಿಟ್ಲದಲ್ಲಿ ಶಾಲೆ ಮಕ್ಕಳ ಗೌಜಿ. ಅವರ ಒದ್ದೆ ಯುನಿಫಾಮರ್್, ಚಂಡಿ ಕೊಡೆ ಮೈಮೇಲೆಲ್ಲ ಬಿದ್ದು ಕಿರಿಕಿರಿಯಾಗ್ತಿತ್ತು. ವಿಟ್ಲದಿಂದ ಸ್ವಲ್ಪ ಮುಂದೆ ಹಳ್ಳಿ ಹೆಣ್ಣುಮಗಳು ಪುಟಾಣಿ ಹುಡುಗಿಯೊಂದಿಗೆ ಬಸ್ಸು ಹತ್ತಿದಳು. ಆ ರಶ್ಶಿನಲ್ಲಿ ಬ್ರೇಕ್ ಹಾಕಿದಾಗ ಪುಟ್ಟ ಹುಡುಗಿ ಕೆಳಗೆ ಬೀಳದ್ದು ಪುಣ್ಯ.

ನನಗೆ ಸೀಟು ಸಿಕ್ಕಿದ ಕಾರಣ ಹುಡುಗಿಯನ್ನು ಪಕ್ಕಕ್ಕೆ ಕರೆದು ಹತ್ತಿರ ಕೂರಿಸಿಕೊಂಡೆ. ಯಾಕೋ ಪರಿಚಿತ ಮುಖ ಅನಿಸತೊಡಗಿತು. ನಾನು ನಕ್ಕಾಗ ಅದೂ ನಕ್ಕಿತು. ಏನು ಹೆಸರು ಅಂತ ಕೇಳಿದೆ. `ಪ್ರಿಯಾ' ಅಂದಿತು. ನನ್ನ ಹೆಸರೇ ಇಟ್ಟುಕೊಂಡಿದೆಯಲ್ಲಾ ಹುಡುಗಿ ಅಂದುಕೊಂಡೆ. ಪಕ್ಕ ನಿಂತಿದ್ದ ಅದರಮ್ಮನ ಹತ್ತಿರ `ಯಾವೂರು?' ಅಂತ ಕೇಳಿದೆ. `ಕನ್ಯಾನ' ಅಂದಳು. ಅದ್ಯಾಕೋ, ಇದ್ದಕ್ಕಿದ್ದ ಹಾಗೆ, `ಅಲ್ಲಿ ಕರ್ಣ ಅಂತ ಯಾರಾದರೂ ಗೊತ್ತಾ' ಅಂತ ಕೇಳಿದೆ. ಅವಳು ನಕ್ಕು `ಇವಳಪ್ಪನ ಹೆಸರೂ ಅದೇ' ಅಂದಳು !

Tuesday, August 2, 2011

ಮತ್ತೆ ಬರೆಯುತ್ತೇನೆ

ಒಂದು ಅರೆ ಮಂಪರಿನ ನಿದ್ದೆ. ಈಗ ಏಳಬೇಕೆನಿಸಿದೆ. ಮಲಗಿಕೊಂಡೇ ಕಣ್ಬಿಟ್ಟು ನೋಡುತ್ತಿದ್ದೇನೆ. ಅಯೋಮಯ ಜಗತ್ತು.
ಮೈಕೊಡವಿಕೊಂಡು ಏಳುವುದಷ್ಟೇ ನನ್ನ ಮುಂದಿರುವ ಗುರಿ.

.........ಮತ್ತೆ ಹೂ ಪೋಣಿಸಲು ಶುರುವಿಟ್ಟಿದ್ದೇನೆ.

Thursday, June 25, 2009

ಅಪ್ಪನ ಕೈ ಹಿಡಿದು..


‘ಈ ಕಾಡು ಯಾರದ್ದು?’

ಸರ್ಕಾರದ್ದು.

ಸರ್ಕಾರ ಅಂದ್ರೆ ಯಾರಪ್ಪ? ಅವ್ರು ತುಂಬಾ ಶ್ರೀಮಂತರಾ?

ಸರ್ಕಾರ ಅಂದ್ರೆ ಜನ ಅಲ್ಲ ಪುಟ್ಟಾ, ನಾವೆಲ್ಲ ಸೇರಿ ಸರ್ಕಾರ ಮಾಡುವುದು.

ಹೌದಾ? ಅದು ಹೇಗಿರ್‍ತದೆ? ತುಂಬಾ ದೊಡ್ಡದಾ?

ಊಹೂಂ, ಅದು ವಸ್ತು ಅಲ್ಲ, ಅದನ್ನು ನಿಂಗೆ ಹೇಗೆ ಹೇಳೂದಪ್ಪಾ, ನಾವೆಲ್ಲ ಸೇರಿ ಮಾಡಿದ ಒಂದು ವ್ಯವಸ್ಥೆ!
ಹಂಗಂದ್ರೆ?

ನೀನು ದೊಡ್ಡವಳಾದ ಮೇಲೆ ಅರ್ಥ ಆಗ್ತದೆ.

ನಾನು ಯಾವಾಗ ದೊಡ್ಡವಳಾಗುವುದು?

ಇನ್ನೊಂದು ಏಳೆಂಟು ವರ್ಷ ಆದ್ಮೇಲೆ.

ಆಗ ನೀನೆಷ್ಟು ದೊಡ್ಡ ಆಗಿರ್‍ತೀಯಾ ಅಪ್ಪಾ?

ನಾನಿನ್ನು ದೊಡ್ಡ ಆಗುವುದಿಲ್ಲ. ಮುದುಕ ಆಗುವುದು..ಹ ಹ್ಹ..ಹ್ಹಾ..

ಅಜ್ಜನ ಮನೆ ದಾಟಿದ ಕೂಡ್ಲೇ ಶುರುವಾಗುತ್ತಿದ್ದ ನನ್ನ ಪ್ರಶ್ನೆಗಳು ಮನೆ ಬಂದರೂ ಮುಗಿಯುತ್ತಿರಲಿಲ್ಲ.

....ನಾನು ಆಗ ಅಜ್ಜನ ಮನೆಯಲ್ಲಿ ಶಾಲೆಗೆ ಹೋಗ್ತಿದ್ದೆ. ಪ್ರತೀ ಶನಿವಾರ ಅಪ್ಪ ಬಂದು ನಮ್ಮ ಮನೆಗೆ ಕರಕೊಂಡು ಹೋಗ್ತಿದ್ರು. ಮಧ್ಯಾಹ್ನ ಶಾಲೆ ಬಿಟ್ಟು ಓಡುತ್ತಾ ಬರುವಾಗ ಅಜ್ಜನ ಮನೆಯಲ್ಲಿ ಅಪ್ಪ ಕಾಯುತ್ತಾ ಕೂತಿರುತ್ತಿದ್ದರು. ನಾನು ಕೈ ಕಾಲೂ ತೊಳೆಯದೇ ಅತ್ತೆ ಕೈಯಲ್ಲಿ ಬೈಸಿಕೊಳ್ಳುತ್ತಾ ಊಟ ಮಾಡಿ ಅಪ್ಪನ ಕೈ ಹಿಡಿದು ಮನೆಗೆ ಹೊರಡುತ್ತಿದ್ದೆ.

ಅಜ್ಜನ ಮನೆಯ ಹಿಂದಿನ ಕೊಟ್ಟಿಗೆಯನ್ನು ದಾಟಿ ಐತಪ್ಪನ ಮನೆ ಪಕ್ಕದ ಓಣಿ ಹತ್ತಿ, ನಡೆಯುತ್ತಿದ್ದೆವು. ಆಗೆಲ್ಲ, ತಿರು ತಿರುಗಿ ಮೂರು ಉಪ್ಪರಿಗೆಯ ದೊಡ್ಡ ಬೂತ ಬಂಗಲೆ ಹಾಗಿದ್ದ ಅಜ್ಜನ ಮನೆಯನ್ನು ನೋಡುತ್ತಾ ಹೋಗ್ತಾ ಇದ್ದೆ.

ಆ ಓಣಿ ದಾಟಿ ಸಾಗಿದ್ರೆ ಮುಂದೆ ದೊಡ್ಡ ಪದವು (ಕಾಡಿನ ಮಧ್ಯದ ಬಯಲು ಭೂಮಿ), ಅದನ್ನು ದಾಟಿದ ಕೂಡ್ಲೆ ಕಳಂಜಿಮಲೆ ಸಿಗುತ್ತಿತ್ತು. ಅಲ್ಲೆಲ್ಲ ಆಗ್ಲೇ ಕಾಡು ಕಡಿದು ಅದ್ರ ಬದಲಿಗೆ ಗಾಳಿ ಗಿಡಗಳನ್ನ ನೆಡುತ್ತಿದ್ದರು. ಅದು ಸರ್ಕಾರಿ ಭೂಮಿ. ನಂಗೆ ಆಗ ಪ್ರತಿಯೊಂದರ ಬಗೆಗೂ ಕುತೂಹಲ... ಪದೇ ಪದೇ ಪ್ರಶ್ನೆ ಕೇಳುತ್ತಿದ್ದೆ.

ಅಪ್ಪ ನನ್ನ ಬಾಲಿಶ ಪ್ರಶ್ನೆಗಳನ್ನ ಕೇಳಿ ಬೈಯುತ್ತಿರಲಿಲ್ಲ. ಕಾಡು ದಾರಿಯಲ್ಲಿ ನಡೆದೂ ನಡೆದೂ ಸುಸ್ತಾದಾಗ ಎತ್ತಿಕೊಂಡು ಹೋಗ್ತಿದ್ರು. ಅಲ್ಲಲ್ಲಿ ಹರಿಯುವ ನೀರ ಝರಿಯ ಹತ್ತಿರ ಕರೆದುಕೊಂಡು ಹೋಗಿ ನೀರು ಕುಡಿಸ್ತಿದ್ರು. ಮೂರು ಗಂಟೆಗೆ ಅಜ್ಜನ ಮನೆಯಿಂದ ಹೊರಟ್ರೆ ನಾಲ್ಕು ಗಂಟೆಗೆ ಕನ್ಯಾನ ಬಸ್ ಸ್ಟಾಂಡ್‌ನಲ್ಲಿರ್‍ತಿದ್ದೆವು.

ನಾಲ್ಕೂ ಹತ್ತಕ್ಕೆ ಬಾಯಾರು (ಕಾಸರಗೋಡು ಸಮೀಪದ ಪಟ್ಟಣ) ಮಾರ್ಗವಾಗಿ ಹೋಗುವ ಗವರ್ಮೆಂಟ್ ಬಸ್ ಹತ್ತುತ್ತಿದ್ದೆವು. ಬಸ್‌ಗೆ ಹತ್ತಿದ ಕೂಡ್ಲೇ ಅದೇನಾಗುತ್ತೋ, ಕಲಿತ ಮಗ್ಗಿ, ಪದ್ಯವನ್ನು ಜೋರಾಗಿ ಹೇಳ್ತಾ ಹೋಗ್ತಿದ್ದೆ. ಆಗ ಬಸ್‌ನಲ್ಲಿರುವವರೆಲ್ಲ ಹಿಂತಿರುಗಿ ನೋಡಿದಾಗ ಅಪ್ಪನಿಗೆ ಮುಜುಗರ. ನನ್ನ ಉತ್ಸಾಹ ಮತ್ತಷ್ಟು ಹೆಚ್ಚಾಗ್ತಾ ಇತ್ತು. ಕೊನೆಗೆ ಜಾಣೆ ಅಂತ ಬಸ್‌ನಲ್ಲಿದ್ದ ಒಂದಿಬ್ಬರು ಪ್ರಯಾಣಿಕರು ಬೆನ್ನು ತಟ್ಟಿದ್ರೆ ಭಾರೀ ಖುಷಿ.

ನಾವು ಕಾಯರ್‌ಕಟ್ಟೆಯಲ್ಲಿ ಇಳಿದಾಗ ಕತ್ತಲು ಜಾಸ್ತಿಯಾಗುತ್ತಿತ್ತು. ಮಾರಪ್ಪ, ಗ್ಯಾಸ್‌ಲೈಟ್ ಬೆಳಕಿನಲ್ಲಿ ಬಟ್ಟೆ ಹೊಲಿಯುತ್ತಾ ಅಪ್ಪನಿಗೆ ಅಡ್ಡ ಸಲಾಂ ಹಾಕುತ್ತಿದ್ದ. ಗೂಡಂಗಡಿಗಳಲ್ಲಿ ನೇಂದ್ರ ಬಾಳೆಹಣ್ಣು, ಬೋಟಿ ಪ್ಯಾಕೆಟ್ ನೇತಾಡ್ತಾ ಇರ್‍ತಿತ್ತು. ಬಳೀ ಮುಂಡುಟ್ಟು, ತಲೆಗೂ ಅದೇ ಬಣ್ಣದ ಮುಂಡಾಸು ಕಟ್ಟಿ ಆಗಾಗ ಮುಂಡನ್ನ ಎತ್ತಿ ಹಿಡಿಯುತ್ತಾ ನಡೆಯುವ ಮುಸ್ಲಿಮ ಗಂಡಸರು ನೇರ ಬಾಳೇ ಹಣ್ಣಿಗೇ ಕೈ ಹಾಕಿ ನಾಜೂಕಿಂದ ಸಿಪ್ಪೆ ಜಾರಿಸಿ ತಿನ್ನುತ್ತಿದ್ದರೆ ನಂಗೂ ಆಸೆ. ಅಪ್ಪನತ್ರ ಹೇಳಿದ್ರೆ, ಮನೆಯಲ್ಲಿದೆ, ಅಲ್ಲೇ ತಿನ್ನುವೆಯಂತೆ ಅಂತಿದ್ರು. ಆದ್ರೆ ಮನೆಯಲ್ಲಿ ಎಷ್ಟು ಬಾಳೆ ಹಣ್ಣು ತಿಂದ್ರೂ ನಂಗೆ ಅಂಗಡೀ ಬದಿ ನೇತಾಡ್ತಾ ಇರೋ ಆ ಬಾಳೇ ಹಣ್ಣಿನಷ್ಟು ರುಚಿ ಅನ್ನಿಸ್ತಿರಲಿಲ್ಲ. ಕೆಲ ಕ್ಷಣ ಮೌನವಾಗಿ ಅಪ್ಪನನ್ನ ಹಿಂಬಾಲಿಸುತ್ತಿದ್ದೆ. ಕಾಯರ್ ಕಟ್ಟೆ ಪೇಟೆ ದಾಟಿದ್ರೆ, ಕಾಯರ್‌ಕಟ್ಟೆ ಪದವು. ನಮ್ಮ ಮನೆಗೆ ಅದನ್ನಿಳಿದು ಹೋಗಬೇಕು. ಕತ್ತಲಲ್ಲಿ ಅಪ್ಪನ ಕೈ ಹಿಡಿದು ಜಾರೆ ಕಲ್ಲಿನಲ್ಲಿ ಜಾರುತ್ತಾ ನಡೆಯುತ್ತಿದ್ದೆ.

ಐದಾರು ಫರ್ಲಾಗ್ ಇಳಿಯುತ್ತಾ ಜಾರುತ್ತಾ ಹೋದಾಗ ನಮ್ಮ ಗೇರುಗುಡ್ಡೆ ಸಿಗುತ್ತಿತ್ತು. ಆ ಗುಡ್ಡೆ ಕೆಳಗೇ ನಮ್ಮ ಮನೆ.

ಗುಡ್ಡೆ ದಾರಿಯಲ್ಲಿ ಬರುತ್ತಿರುವಾಗ ದೂರದ ಟವರ್‌ನಲ್ಲಿ ಮಿಣಿ ಮಿಣಿ ಕೆಂಪು ಲೈಟ್ ಕಾಣ್ತಾ ಇತ್ತು. ಅದು ಕಾಸರಗೋಡಿನ ರೇಡಿಯೋ ಸ್ಟೇಶನ್ ಅಂತ ಅಪ್ಪ ಹಿಂದೆಯೇ ಹೇಳಿದ್ರು. ಆ ಟವರ್‌ನಿಂದ ದನಿಯನ್ನ ಸ್ವರವನ್ನ ಗಾಳಿಯಲ್ಲಿ ತೇಲಿ ಬಿಟ್ಟರೆ ಅದು ನಮ್ಮ ರೇಡಿಯೋದೊಳಗೆ ಸೇರಿಕೊಂಡು ನಮಗೆ ಕೇಳ್ತಿತ್ತು. ಅದನ್ನು ಹತ್ತಿರದಿಂದ ಕಂಡೇ ಬರಬೇಕು ಅನ್ನುವ ಹುಚ್ಚು ಕುತೂಹಲ. ಅದನ್ನ ತಡೆದುಕೊಂಡು ಅಪ್ಪನ ಕೈ ಹಿಡಿದು ನಡೆಯುತ್ತಿದ್ದೆ.

ಇನ್ನೇನು ಸ್ವಲ್ಪ ಮುಂದೆ ಕಲ್ಲಿನ ಮೆಟ್ಟಿಲು ಅದನ್ನು ಇಳಿದು ಹೋದ್ರೆ ಮನೆ. ನಾನು ಅಪ್ಪ ಮನೆಯೊಳಗೆ ಹೊಕ್ಕರೆ ಅಲ್ಲಿ ಮೌನ. ನಾನು ಜೋರಾಗಿ ಅಮ್ಮಾ ಅಂತ ಕರೆದ್ರೆ, ಶೂ...ಮಾತಾಡ್ಬೇಡ ಅಂತ ಸನ್ನೆ ಮಾಡ್ತಾ ಅಮ್ಮ ಬರ್‍ತಿದ್ಲು. ತಮ್ಮ ಮಲಗಿದಾನೆ ಅಂತ ಕಿವಿಯಲ್ಲಿ ಗುಟ್ಟಾಗಿ ಹೇಳಿ ಒಳಗೆ ಕರೆದುಕೊಂಡು ಹೋಗ್ತಿದ್ಲು.

ನನಗೀಗ ಇಪ್ಪತ್ತನಾಲ್ಕು ವರ್ಷ. ಈ ಚಿತ್ರ ನಂಗೆ ಐದಾರು ವರ್ಷ ಆಗಿದ್ದಾಗಿನದು. ಅಂದು ಅಪ್ಪ ಹೇಳಿದ ಹಾಗೆ ನಾನೀಗ ದೊಡ್ಡವಳಾಗಿದ್ದೇನೆ. ಅಪ್ಪ ಮಧ್ಯವಯಸ್ಸಿಗೆ ಬಂದಿದ್ದಾರೆ. ಅಪ್ಪ ನನ್ನನ್ನೀಗ ಪುಟ್ಟಾ ಅಂತ ಅಷ್ಟು ಪ್ರೀತಿಯಿಂದ ಕರೆಯಲ್ಲ. ಹಿಂದಿನಂತೆ ಸಿಕ್ಕಾಬಟ್ಟೆ ಪ್ರಶ್ನೆ ಕೇಳಿ ಅಪ್ಪನ ತಲೆ ತಿನ್ನೋದಿಲ್ಲ. ಹಿಂದಿನ ಅಪ್ಪಂಗೂ ಇಂದಿನ ಅಪ್ಪಂಗೂ ತುಂಬಾ ಡಿಫರೆನ್ಸ್ ಇದೆ ಅಂತ ಆಗಾಗ ಅನ್ಸತ್ತೆ. ಅಫ್‌ಕೋರ್ಸ್ ನಾನೂ ಅಂದಿನಂತಿಲ್ಲ.

ಆದ್ರೆ ಆಗಾಗ, ಹಾಗೇ ಅಪ್ಪನ ಕೈ ಹಿಡಿದು ಕಳಂಜಿಮಲೆ ಕಾಡು ಹಾದಿಯಲ್ಲಿ ನಡೆಯಬೇಕನಿಸತ್ತೆ. ಆಗ ನಾನು ದೊಡ್ಡೋಳಾಗೋ ಕನಸು...

...ಈಗ ಮತ್ತೆ...

Monday, March 9, 2009

ಮುದ್ದು ಬರೆದ ಮಳೆ ಸಾಲುಗಳ ನೆನಪು


ಯಾಕೋ ಆಗಸ ಬಿಕ್ಕುತಿದೆ


ಹುಣ್ಣಿಮೆ ಕಡಲೂ ಉಕ್ಕುತಿದೆ


ರೆಕ್ಕೆ ನೆನೆದ ಚಿತ್ತದ ಹಕ್ಕಿಯು


ಕನಸು ಕಾಳುಗಳ ಹೆಕ್ಕುತಿದೆ




-----****--------




ಗಾಳಿಯೂ ಆಡದ


ಬಿರುಮಳೆ ಧಾರೆಗೆ


ಕಲ್ಲೂ ಕರಗಿದೆ


ಮಾತೂ ಆಡದ ಪ್ರೀತಿಗೆ


ಮುನಿಸು ಎಲ್ಲೋ ಕರಗಿದೆ




----*****------



ತೊಟ ತೊಟ ತೊಟ್ಟಿಕ್ಕುತ ಡೈರಿಯ


ಪುಟ ಪುಟ ಒದ್ದೆಯಾಗಿಸಿ


ಬರೆದದ್ದ ಅಳಿಸಿ


ಬೀಗಿದವು ಮಳೆಹನಿಗಳು


ಹನಿಗಳ ಸ್ಪರ್ಶಕೆ ನೆಂದ


ಹಳೆ ನೆನಪ ಬೀಜಗಳು


ಚಿಗುರಿದವು!


----*****------


ಹೇಳು ಮಳೆಯೇ


ಸುರಿದು


ಷೋಡಶಿಯೊಬ್ಬಳ


ನೆನೆಸದಿದ್ದರೆ


ನೀ ಸುರಿದೇನು ಫಲ?


-----*****------



ಹಸಿರುಟ್ಟ ಪುಟ್ಟಬಿತ್ತಕ್ಕೆ


ಮಳೆಹನಿ ಸೇಕ


ಅಲ್ಲಯವರೆಗೂ ಶೋಕ


ನಂತರ ಮರಗಳೆಲ್ಲ ಅಶೋಕ






Thursday, February 12, 2009

ಸಾಹಿತ್ಯ ಜಾತ್ರಾ ವಿಶೇಷ !

ಚಿತ್ರದುರ್ಗದ ಸಾಹಿತ್ಯ ಸಮ್ಮೇಳನಕ್ಕೆ ಹೋಗಿ, ದೊಡ್ಡ ನಿಟ್ಟುಸಿರಿನೊಂದಿಗೆ ವಾಪಾಸು ಬಂದಿದ್ದೇನೆ. ಹೋಗುವಾಗ ಇದ್ದ ಉತ್ಸಾಹ ಬರುವಾಗ ಠುಸ್‌! ಒಂದು ಬಾರಿ ಸಮ್ಮೇಳನಕ್ಕೆ ಹೋದವಳು, ಸಮ್ಮೇಳನ ಮುಂದೂಡಿಕೆಯಾಗಿ ವಾಪಾಸು ಬರುವಾಗಲೇ ಅಂದುಕೊಂಡಿದ್ದೆ, ಯಾಕೋ ಎಡವಟ್ಟಾಗುತ್ತಿದೆ. ಅದು ಕೊನೆಯ ತನಕವೂ ಬೇತಾಳನ ಹಾಗೆ ಹಿಂಬಾಲಿಸುತ್ತಲೇ ಇತ್ತು.


ಮತ್ತೆ ಸಮ್ಮೇಳನ ಆರಂಭವಾದಾಗ, ಸೈಡ್‌ ಲೈಟ್ಸ್‌ ಅಂತ ಚಿತ್ರದುರ್ಗದ ವಿಶೇಷತೆಗಳನ್ನು ಸ್ಟೋರಿ ಮಾಡಬೇಕು ಅನ್ನುವ ಅಪ್ಪಣೆಯಾದ ಕಾರಣ, ಒಂದು ದಿನದ ಹಿಂದೆಯೇ ನಮ್ಮ ಸವಾರಿ ಚಿತ್ರದುರ್ಗದತ್ತ ದೌಡಾಯಿಸಿತ್ತು. ಅರ್ಧದಲ್ಲೇ ಗಾಡಿ ಕೆಟ್ಟು, ಲೈಟು ರಿಪೇರಿಯಾಗಿ ಚಿತ್ರದುರ್ಗ ತಲುಪಿದಾಗ ರಾತ್ರಿ ಎರಡು. ಹೋಗಿದ್ದೇನೋ ಹೋಗಾಯಿತು, ಮಲಗೋದೆಲ್ಲಿ? ಕೊನೆಗೂ ಮುರುಘಾ ಮಠದ ಕಡೆ ನಡೆದಾಗ, ಬಂದವರೆಲ್ಲ ಹುಡುಗರು ಅಂತ ಭಾವಿಸಿ ಒಂದು ಹಾಲ್‌ನಲ್ಲೇ ಒಂದಿಷ್ಟು ಹಾಸಿಗೆ ಹಾಕಿ ಮಲಗುವ ವ್ಯವಸ್ಥೆ ಮಾಡಿ ಮಠದೊಳಗೆಲ್ಲೋ ಹೋಗಿಬಿಟ್ಟರು.


ಆ ರಾತ್ರಿಯಲ್ಲಿ ಬೇರೆ ಯಾರನ್ನು ಕೇಳೋದು? ಕೊನೆಗೆ ನಮ್ಮ ಚಿತ್ರದುರ್ಗದ ರಿಪೋರ್ಟರ್‌ ಯಾರದೋ ಮನೆಯವರನ್ನು ಕಾಡಿ ಬೇಡಿ ಉಳಿದರ್ಧ ರಾತ್ರಿ ಕಳೆಯಲು ವ್ಯವಸ್ಥೆ ಮಾಡಿದರು. ಇನ್ನೇನು ನಿದ್ದೆ ಹತ್ತಿತು ಅನ್ನುವಷ್ಟರಲ್ಲಿ ಬೆಳಗೂ ಆಗಿತ್ತು. ಕಣ್ತೆರೆಯುವ ಮೊದಲೇ ಮೊಬೈಲ್‌ ಹೊಡೆದುಕೊಳ್ಳತೊಡಗಿತು. ಆಫೀಸ್‌ನಿಂದ ಫೋನ್‌. ಕೆರೆಮನೆ ಶಂಭು ಹೆಗಡೆ ತೀರ್‍ಕೊಂಡ್ರಂತೆ, ಅವರಿಗೆ ನೃತ್ಯ ಹೇಳಿಕೊಟ್ಟ ಮಾಯಾರಾವ್‌ ಮನೆ ಎಡ್ರೆಸ್‌ ಕೊಡಿ ಅಂತ ಆರ್ಡ್‌‌ರ್‍. ಕೊಡಲಿಕ್ಕೆ ನಂಗೆ ಗೊತ್ತಿದ್ರೆ ತಾನೇ? ಕೇಳಿ ಹೇಳ್ತೇನೆ ಅಂದೆ. ಕೂಡಲೇ ಕೆರೆಮನೆ ಶಂಭು ಹೆಗಡೆ ಫೈಲ್‌ ವಿಜುವಲ್‌ ಎಲ್ಲಿದೆ? ಅಂತ ಪ್ರಶ್ನೆ. ಅದಕ್ಕೂ ಸಮಜಾಯಿಶಿ ನೀಡಿಯಾಯಿತು. ಅಷ್ಟರಲ್ಲಿ ಮೊಬೈಲ್‌ ನೆಟ್‌ವರ್ಕ್ ಕಟ್‌ ಆಯ್ತು. ಟೆರೇಸ್‌ ಮೇಲಾದ್ರೂ ಸಿಗತ್ತಾ ಅಂತ ಹೋದ್ರೆ, ಅಲ್ಲಿ ಕಂಡ ದೃಶ್ಯ ವರ್ಣನಾತೀತ. ನಾನು ಅಲ್ಲಿ ಇಲ್ಲಿ ಓದಿಕೊಂಡಿದ್ದ ದೃಶ್ಯ ಕಣ್ಣು ಮುಂದೆಯೇ ಕಾಣಸಿಕ್ಕಿತ್ತು. ವಿಶಾಲವಾದ ಬಯಲಿನಲ್ಲಿ ಬಿಂದಿಗೆ ಹಿಡಿದ ಮಂದಿ ಅಲ್ಲಲ್ಲಿ ಕೂತು, ಅದ್ಯಾವುದೋ ಸುಖದ ಅಮಲಿನಲ್ಲಿ ಅರೆಗಣ್ಣಾಗಿದ್ದರು. ನಮಗೆ ತೀರಾ ಅಪರಿಚಿತವಾಗಿರುವ ಈ ಸನ್ನಿವೇಶವನ್ನು ಕಂಡು ಒಳಗೊಳಗೇ ನಗುತ್ತಾ ಮತ್ತೆ ಕೆಳಗೆ ಬಂದೆ.



ಆ ದಿನವಿಡೀ ಕೋಟೆ, ಚಂದವಳ್ಳಿ ತೋಟ ಶೂಟ್‌ ಮಾಡೋದ್ರಲ್ಲೇ ಕಳೆದು ಹೋಯಿತು. ಕೆಲ ರಾದ್ಧಾಂತಗಳು, ನಾಳಿನ ಕವರೇಜ್‌ ಪ್ಲಾನ್‌, ಅದು ಇದು ಅಂತ ಮಾತು ಮುಗಿಯೋ ಹೊತ್ತಿಗೆ ಗಂಟೆ ೧೨. ಹೊಟ್ಟೆಯೇನೋ ನಾಚಿಕೆ ಬಿಟ್ಟು ಚುರುಗುಟ್ಟುತ್ತಿತ್ತು. ಆದರೆ, ಅಷ್ಟೊತ್ತಿಗೆ, ಊಟಾನಾದ್ರೂ ಎಲ್ಲಿ ಸಿಗಬೇಕು? ದಾರಿಯಲ್ಲಿ ಯಾವುದೋ ಬಾರ್‌ ಆಂಡ್‌ ರೆಸ್ಟ್‌ರೆಂಟ್‌ ತೆರೆದಿತ್ತು. ನಮ್ಮ ಗ್ರೂಪ್‌ ಅಲ್ಲಿಗೆ ನುಗ್ಗಿದಾಗ ನಾನೂ ಹಿಂಬಾಲಿಸಿದೆ. ಊಟ ಮುಗಿಸಿ ನನಗೆ ಅಂತ ಬುಕ್‌ ಆಗಿರೋ ರೂಮ್‌ಗೆ ಬಂದ್ರೆ, ಆ ರೂಮನ್ನು ಆಗಲೇ ಆಕ್ರಮಿಸಿಕೊಂಡಾಗಿತ್ತು. ಜಪ್ಪಯ್ಯ ಅಂದ್ರೂ ಆ ಪುಣ್ಯಾತ್ಮ ರೂಂ ಬಿಟ್ಟು ಕೊಡ್ಲಿಲ್ಲ. ಬೇರೆ ಸ್ತ್ರೀ ಸಹೋದ್ಯೋಗಿಯೊಬ್ಬರಾದರೂ ಇದ್ದರೆ ಅವರೊಂದಿಗೆ ರೂಮು ಹಂಚಿಕೊಳ್ಳಬಹುದಿತ್ತು. ಆದರೆ, ದೇವರ ದಯದಿಂದ ಸ್ತ್ರೀ ಜೀವ ಅಂತ ಇದ್ದದ್ದು ನಾನು ಮಾತ್ರ. ಆ ಹೊತ್ತು ಮಧ್ಯ ರಾತ್ರಿ ೧.೩೦ ಗಂಟೆ. ಕೊನೆಗೆ ಹೊಟೇಲ್‌ನವರಿಗೇ ಕರುಣೆ ಉಕ್ಕಿ ಆ ರಾತ್ರಿಯ ಮಟ್ಟಿಗೆ ಒಂದು ಖಾಲಿ ರೂಂ ಸಿಕ್ಕಿತು. ಹೋಗಿ ಬಿದ್ದುಕೊಂಡೆ.


ಮತ್ತೆ ಬೆಳಗಿನ ದರ್ಶನ ಮಾಡಿಸಿದ್ದು ಅದೇ ಜಂಗಮ ದೂರವಾಣಿ. ‘ಪ್ರಿಯಾ, ಲೈನ್‌ ಹೋಲ್ಡ್‌ ಮಾಡಿದ್ದೀನಿ. ಈಗ ಫೋನೋ ಇದೆ. ರೆಡಿಯಾಗಿರು’ ಅಂದಿತು ಅತ್ತಲಿನ ದನಿ. ನಾನು ಬಾಯಿ ತೆರೆಯುವುದರೊಳಗೆ ಫೋನ್‌ ಹೋಲ್ಡ್‌ ಆಗಿತ್ತು. ಏಳು ಗಂಟೆಯ ನ್ಯೂಸ್‌ ಬುಲೆಟಿನ್‌ ಆರಂಭವಾಗಿತ್ತು. ಕೆಲವೇ ಕ್ಷಣಗಳಲ್ಲಿ ಲೈವ್‌ಗೆ ಫೋನ್‌ ಕನೆಕ್ಟ್‌ ಆಯಿತು. ನಾನು ಗಂಟಲು ಸರಿ ಮಾಡಿಕೊಳ್ಳಬೇಕೆಂದುಕೊಳ್ಳುವಾಗಲೇ ಅತ್ತಲಿಂದ ವಾರ್ತಾವಾಚಕಿ ಪ್ರಶ್ನೆ ಕೇಳಿಯಾಗಿತ್ತು, ಉಗುಳು ನುಂಗಿ, ಅದೇನೋ ಒದರಿ ಸುಮ್ಮನಾದೆ.


ಬಡ ಬಡನೆ ಹೊರಟು ನಿಂತಾಗ ಸಮ್ಮೇಳನದವರೇ ಆಯೋಜಿಸಿದ್ದ ಬಸ್‌ ಕಾಯುತ್ತಿತ್ತು. ಹತ್ತಿ ಕೂತೆ. ಬಸ್‌ ಹೊರಟಾಗ ಮತ್ತೆ ಫೋನೋ ಕನೆಕ್ಟ್. ‘ಸಮ್ಮೇಳನಕ್ಕೆ ಈಗಾಗಲೇ ಜನರ ಆಗಮನವಾಗಿದೆಯಾ? ತಿಂಡಿ ವ್ಯವಸ್ಥೆ ಹೇಗಿದೆ? ಸಾಹಿತಿಗಳ್ಯಾರಾದ್ರೂ ಮಾತಿಗೆ ಸಿಕ್ರಾ?’ ಅಂತ ಆಂಕರ್‌ ಕೇಳಿದಾಗ, ‘ದೂರದೂರಗಳ ಜನ ಈಗಾಗಲೇ ಆಗಮಿಸಿದ್ದಾರೆ. ಎಲ್ಲರಿಗೂ ತಿಂಡಿವ್ಯವಸ್ಥೆ ಇದೆ. ಕೆಲ ಸಾಹಿತಿಗಳು ಆಗಲೇ ಬಂದಿದ್ದಾರೆ’ ಅಂತಂದು ಸುಮ್ಮನಾದೆ. ಆದರೆ ಸಮ್ಮೇಳನ ನಡೆಯುವ ಕಡೆ ಹೋಗಿ ನೋಡಿದ್ರೆ, ಅಲ್ಲಿ ತಿಂಡಿ ಖಾಲಿಯಾಗಿತ್ತು, ಜನ ಸಿಟ್ಟಿಗೆದ್ದದ್ದರು. ಮತ್ತೊಂದೆಡೆ ಕಿಟ್‌ಗಾಗಿ ಹೋರಾಟ ನಡೆಯುತ್ತಿತ್ತು. ತಪ್ಪಿಯೂ ಒಬ್ಬ ಸಾಹಿತಿಯೂ ಸಮ್ಮೇಳನದತ್ತ ಮುಖಮಾಡಿರಲಿಲ್ಲ. ಮೈ ಪರಚಿಕೊಳ್ಳುವಂತಾಯಿತು. ಅಷ್ಟರಲ್ಲಿ ಮತ್ತೆ ಆಫೀಸ್‌ನಿಂದ ಫೋನ್. ಏನ್ರೀ ಅಲ್ಲೇನೋ ಗಟಾಲೆ ನಡೀತಿದೆಯಂತೆ, ನೀವ್‌ ಏನ್ರೀ ಮಾಡ್ತಿದ್ದೀರಾ? ಅಂತ ಆವಾಜ್‌. ಅವರನ್ನು ಕನ್ವಿನ್ಸ್‌ ಮಾಡುವಷ್ಟರಲ್ಲಿ ಸಾಕೋ ಸಾಕು. ಸಾಹಿತ್ಯ ಸಮ್ಮೇಳನ ಆರಂಭವಾಗುತ್ತಿರುವಂತೆ ಅಧ್ಯಕ್ಷರಿಗಿಂತ ಹೆಚ್ಚಿನ ಟೆನ್ಶನ್‌ ನಮಗೆ. ನಮಗೆ ಸಿಗದ ವಿಶ್ಯವಲ್‌ ಬೇರೆ ಚಾನೆಲ್‌ಗೆ ಸಿಕ್ಕಿಬಿಟ್ರೆ , ಅಂತ ಕ್ಷಣ ಕ್ಷಣಕ್ಕೂ ಕಾಡುವ ಆತಂಕ.


ಇನ್ನು ಲೈವ್‌ ಚಾಟ್‌(ನೇರ ಪ್ರಸಾರದಲ್ಲಿ ಮಾಹಿತಿ, ಸಂದರ್ಶನ...ಹೀಗೆ ನೇರ ಮುಖಾಮುಖಿ) ಕೊಡುವ ಸಂಭ್ರಮವೇ ಬೇರೆ. ಯಾರೋ ಗಣ್ಯ ವ್ಯಕ್ತಿಗಳನ್ನು ನಿಲ್ಲಿಸಿಕೊಂಡು ಅವರ ಜತೆ ಲೈವ್‌ನಲ್ಲಿ ಸಂದರ್ಶನ ನಡೆಸುತ್ತಿರುವಾಗಲೇ ನೆಟ್‌ವರ್ಕ್‌ ಪ್ರಾಬ್ಲಂನಿಂದ ಲೈನ್‌ ಕಟ್‌ ಆಗಿರತ್ತೆ. ಆ ವ್ಯಕ್ತಿ ಇನ್ನೂ ನೇರ ವಿಷಯಕ್ಕೇ ಬಂದಿರುವುದಿಲ್ಲ. ಆದ್ರೆ ಲೈನ್‌ ಕಟ್‌ ಆಗಿರುವುದು ಆತನ ಗಮನಕ್ಕೆ ಬಂದಿರುವುದಿಲ್ಲ. ಆ ಪುಣ್ಯಾತ್ಮರು ಹೇಳುತ್ತಲೇ ಇರುತ್ತಾರೆ. ನಾವೂ ಏನೂ ನಡೆದಿಲ್ಲ ಎಂಬಂತೆ ಅವರ ಭಾಷಣ ಕೇಳಿದಂತೆ ನಟಿಸುತ್ತಾ, ಅವರೇ ಮಾತು ಕೊನೆಗೊಳಿಸುವ ತನಕ ಕಾದು, ಅವರಿಗೊಂದು ಸಲಾಮು ಹೊಡೆದು,
ಓವರ್‌ ಟು ಸ್ಟುಡಿಯೋ ಅನ್ನುವ ಹೊತ್ತಿಗೆ ಬೆವರಿಳಿದಿರುತ್ತದೆ.


ಉಳಿದ ಹೊತ್ತಲ್ಲಿ ಗೋಷ್ಟಿಗಳನ್ನು ನೋಡಿಕೊಳ್ಳಬೇಕು, ನ್ಯೂಸ್‌, ಸ್ಟೋರಿ ಎಲ್ಲ ಕೊಡುತ್ತಾ ಅರೆಜೀವವಾಗುತ್ತದೆ, ಸ್ಥಿತಿ. ಇದೆಲ್ಲಕ್ಕಿಂತ ಉತ್ಸಾಹ ಕುಂದಿಸುವುದು ಸುಡು ಸುಡು ಬಿಸಿಲು. ಗಂಟಲಿಗೆ ತೊಟ್ಟು ನೀರು ಎರೆದುಕೊಳ್ಳೋಣ ಅಂದ್ರೆ, ಜೀವ ಹೋದ್ರೂ ಅಲ್ಲಿ ನೀರು ಸಿಗಲ್ಲ. ಮೇಲೆ ಸ್ಟಾಲ್‌ಗಳಿರುವ ಕಡೆಗೆ ಹೋಗಿ ದುಡ್ಡು ಕೊಟ್ಟು ನೀರು ಕೊಳ್ಳಬೇಕು. ಬೇರೇನಕ್ಕೋ ಅವಸರಕ್ಕಿಟ್ಟಿತೆಂದರೆ ದೇವರೇ ಗತಿ, ಯಾಕೆಂದರೆ, ಅಲ್ಲಿ ಟಾಯ್ಲೆಟ್ಟೂ ಇಲ್ಲ. ರೂಮಿಗಾದ್ರೂ ಹೋಗಿ ತೀರಿಸಿಕೊಳ್ಳೋಣ ಅಂದ್ರೆ, ಅದಕ್ಕೂ ಗತಿಯಿಲ್ಲ, ರಾತ್ರಿಯಾದರೆ ಲಗ್ಗೇಜು ಹಿಡಿದು ರೂಮಿಂದ ರೂಮಿಗೆ ಅಲೆತ.


ಅಹ್‌..ಇದು ಹೇಳಿ ಮುಗಿಯಲಿಕ್ಕಿಲ್ಲ ಬಿಡಿ, ನಾನು ರಿಪೋರ್ಟಟಿಂಗ್‌ಗೆ ಹೊರ ಜಿಲ್ಲೆಗಳಿಗೆ ಹೋಗೋದು ಇದೇ ಮೊದಲೇನಲ್ಲ, ಆದರೆ, ಈ ಅನುಭವ ಹೊಸತು. ಅನುಭವ ನಮ್ಮನ್ನು ಗಟ್ಟಿಗೊಳಿಸುತ್ತದಂತೆ, ಆದ್ರೆ, ಅಲ್ಲಿಗೆ ಹೋಗಿ ಬಂದ ನಾನಿನ್ನೂ ಚೇತರಿಸಿಕೊಂಡೇ ಇಲ್ಲ.

Friday, December 26, 2008

ನನ್ನ ತಮ್ಮ ಈಗ ಅಳುವುದಿಲ್ಲ

ನಮ್ಮ ತೋಟದ ಕೆಳಗೆ ಸ್ವರ್ಣಾ ನದಿ ಹರಿಯುತ್ತದೆ. ಇತ್ತೀಚೆಗೆ ತಮ್ಮ ಸಮಯ ಸಿಕ್ಕಾಗಲೆಲ್ಲ ನದಿಯಲ್ಲಿ ಈಜಾಡುತ್ತಿರುತ್ತಾನೆ. ಅವನಿಗೀಗ ಹದಿನೇಳು ವರ್ಷ. ಅವನ ಗೆಳೆಯರಾರೋ ಹೊಳೆಯಲಿ ಈಜಿದ್ರೆ ಉದ್ದ ಆಗ್ತಿ ಅಂತ ಹೇಳಿದ ಕಾರಣ, ಈಜಿನ ಹುಚ್ಚು ಹತ್ತಿಸಿಕೊಂಡಿದ್ದಾನೆ. ಅಷ್ಟೇ ಅಲ್ಲ ಅದರಿಂದ ಅಂವ ದಿನದಿಂದ ದಿನಕ್ಕೆ ಉದ್ದವಾಗುತ್ತಾ ಹೋಗಿದ್ದಾನಂತೆ. ( ಹಾಗಂತ ಅವನೇ ಹೇಳಿದ್ದು)


ನನ್ನ ತಮ್ಮ ತೀರಾ ಸಾಧಾರಣ ಹುಡುಗ. ಚಿಕ್ಕವನಿದ್ದಾಗ ತುಂಬ ಚಂದ ಇದಾನೆ ಅಂತ ಎಲ್ಲರ ಮುದ್ದಿನ ಮೂಟೆಯಾಗಿದ್ದ . ಸ್ವಲ್ಪ ದೊಡ್ಡವನಾದ ಮೇಲೆ ಇದೆಲ್ಲ ನಿಧಾನಕ್ಕೆ ಕರಗತೊಡಗಿತು. ಕಲಿಯುವುದರಲ್ಲಿ ಜಾಣ ಅಲ್ಲ. ಅವನಿಗಿಂತ ಮೊದಲು ಕಲಿತ ನಾನು ಸ್ವಲ್ಪ ಕ್ರಿಯೇಟಿವ್‌ ಆಗಿದ್ದ ಕಾರಣ, ಈ ಪುಟ್ಟು ಹುಡುಗ ಶಾಲೆಯಲ್ಲೂ ಟೀಚರ್ಸ್‌ ಮೂದಲಿಕೆಗೆ ತುತ್ತಾಗಿದ್ದ.
ಇಷ್ಟರಲ್ಲಾಗಲೇ ತಮ್ಮನ ಸ್ವರ ಒಡೆಯಲಾರಂಭಿಸಿತು. ಹರೆಯ ಹತ್ತಿರ ಬಂತು. ಸಿಕ್ಕಾಬಟ್ಟೆ ತಮಿಳು ಸಿನಿಮಾ ನೋಡುವ ಹುಚ್ಚು. ಅದರೆ ಜತೆಗೆ ತಾನು ಅವರ ಹಾಗಿಲ್ಲ ಅನ್ನುವ ಕೊರಗು. ಸಿನಿಮಾ ಹುಚ್ಚು ತಲೆಗೇರಿದಂತೆ ಡಿಪ್ರೆಶ್ಶನ್‌ ಕೂಡ ಏರತೊಡಗಿತು. ಸಂಪೂರ್ಣ ಅಸ್ವಸ್ಥ ಮನಃಸ್ಥಿತಿ. ಅಷ್ಟರಲ್ಲಾಗಲೇ ಎಸ್‌.ಎಸ್‌.ಎಲ್‌.ಸಿ. ಪಾಸಾಗಿತ್ತು. ಮುಂದೇನು ಅನ್ನುವ ಭೂತಾಕಾರದ ಪ್ರಶ್ನೆ. ಅಪ್ಪನಿಗೆ ಯಾರೋ ಮೆಕಾನಿಕಲ್‌ ಡಿಪ್ಲೋಮೊ ಮಾಡಿದ್ರೆ ಒಳ್ಳೆ ಸ್ಕೋಪ್‌ ಇದೆ ಅಂದ್ರಂತೆ. ಇವನಿಗೂ ಏನು ಮಾಡಬೇಕು ಅಂತ ಗೊತ್ತಾಗ್ಲಿಲ್ಲ. ಐವತ್ತು ಸಾವಿರ ಫೀಸ್‌ ಕಟ್ಟಿ ಕಾಲೇಜು ಸೇರಿಕೊಂಡ.




ಇವ ಅಷ್ಟರವರೆಗೆ ಓದಿದ್ದು ಕನ್ನಡ ಮೀಡಿಯಂನಲ್ಲಿ. ಅವನ ಕ್ಲಾಸಿನಲ್ಲಿರುವವರೆಲ್ಲ ಇಂಗ್ಲೀಶ್‌ ಮೀಡಿಯಂನಿಂದ ಬಂದವರು. ಜತೆಗೆ ಇವ ಹೋಗಿದ್ದು ಎಸ್‌.ಎಸ್‌.ಎಲ್‌.ಸಿ. ನಂತರ. ಆದರೆ ಕ್ಲಾಸಿನಲ್ಲಿರುವವರೆಲ್ಲ ಪಿಯೂಸಿ ಓದಿ ಬಂದವರು. ಅದರಲ್ಲೂ ತೀರಾ ಸಾಧಾರಣ ಬುದ್ಧಿಮತ್ತೆ ಹುಡುಗ. ಓದು ಹೇಗೆ ತಾನೇ ತಲೆಗೆ ಹತ್ತಬೇಕು? ಅರ್ಥಮಾಡಿಕೊಳ್ಳುವ ಮನಸ್ಸೂ ಇವನಿಗಿರಲಿಲ್ಲ.



ಮತ್ತೇನಾಗಲಿಲ್ಲ. ಡಿಪ್ಲೊಮಾ ಫಸ್ಟ್‌ ಸೆಮ್‌ನಲ್ಲಿ ೭ ಸಬ್ಜೆಕ್ಟ್‌ ಫೇಲ್‌ ಆದ. ಮನೇಲೇ ಕೂತ. ಕಂಪ್ಯೂಟರ್‌ ಕ್ಲಾಸಿಗೆ ಹೋಗ್ಲಿಕ್ಕೂಮನಸ್ಸಿಲ್ಲ, ಯಾಕೇಂದ್ರೆ ಇವನಿಗೆ ಇಂಗ್ಲಿಷ್‌ ಬರಲ್ಲ, ಅಲ್ಲಿ ಯಾರಾದ್ರೂ ಇಂಗ್ಲೀಶ್‌ ಮಾತಾಡಿ ಇನ್‌ಸಲ್ಟ್‌ ಮಾಡಿದ್ರೆ ಅಂತ....ಒಟ್ಟಾರೆ ಮೈ ಪರಚಿಕೊಳ್ಳೋ ಸ್ಥಿತಿ ಅಂತಾರಲ್ಲ ಹಾಗೆ. ಅಷ್ಟರಲ್ಲಾಗಲೇ ನನಗೆ ರಾಜಧಾನಿಯಲ್ಲಿ ಟಿ.ವಿ.ಚಾನೆಲ್‌ ನಲ್ಲಿ ಕೆಲಸ ಸಿಕ್ಕಿತ್ತು. ನಾನು ಬೆಂಗಳೂರಿನಲ್ಲಿದ್ದೆ.

ಸ್ವಲ್ಪವಾದ್ರೂ ಮನಸ್ಸು ಬಿಚ್ಚಿ ನನ್ನ ಹತ್ರ ಮಾತ್ರ ಮಾತನಾಡುತ್ತಿದ್ದ ತಮ್ಮ. ಆದ್ರೆ ನಂಗೆ ಮಾತಾಡ್ಲಿಕ್ಕೆ ಟೈಮೆಲ್ಲಿ? ನ್ಯೂಸ್‌, ಪ್ರೋಗ್ರಾಂ ಅಂತ ಕೆಲಸ ಹೊತ್ತು ಹೈರಾಣಾಗಿದ್ದೆ . ಈ ಪುಣ್ಯಾತ್ಮ ಕಾಲ್‌ ಮಾಡುವಾಗಲೆಲ್ಲ, ‘ಬಿಸಿ ಇದ್ದೆ, ಆಮೇಲೆ ಮಾಡು’ ಎಂಬ ಒಂದು ಲೈನ್‌ ಆನ್ಸರ್‌.


ಆದ್ರೆ ಆ ದಿನ ಫೋನ್‌ ಮಾಡಿದ ತಮ್ಮ ಸ್ವರ ಎಂದಿನಂತಿರಲಿಲ್ಲ. ಕುಸಿದು ಹೋದಂತಾಗಿತ್ತು. ಆಮೇಲೆ ಮಾಡು ಅಂತ ಹೇಳಲು ಹೋದವಳು ತಡೆದು, ಏನಾಯ್ತೋ ಅಂದೆ. ನಾನು ಸಾಯ್ತೀನಿ ಕಣೇ. ನಂಗೆ ಬದುಕಕ್ಕಾಗಲ್ಲ ಅನ್ನುವಷ್ಟರಲ್ಲಿ ಅಳು ಬಂದು ಬಿಡ್ತು. ನಾನು ಮತ್ತೇನೂ ಮಾತನಾಡಲಿಲ್ಲ. ನಾಳೆಯೇ ರಾತ್ರಿ ಹೊರಟು ನೀನಿಲ್ಲಿಗೆ ಬಾ. ಆಮೇಲೆ ನೋಡಿಕೊಳ್ಳೋಣ ಅಂದೆ.


ತಮ್ಮ ಆತ್ಮಹತ್ಯಾ ಪ್ರಯತ್ನವನ್ನು ಮುಂದೆ ಹಾಕಿ ಬಲು ಕಷ್ಟದಿಂದ ಬರಲೊಪ್ಪಿದ. ಬರಲಿಕ್ಕೇನೋ ಹೇಳಿಯಾಯಿತು. ಆದ್ರೆ ಬಂದ ಮೇಲೆ ಏನು ಮಾಡುವುದು. ಅದುವರೆಗೆ ಪುರುಸೊತ್ತಿಲ್ಲದ ಕೆಲಸದ ನಡುವೆ ಮರೆತೇ ಹೋದಂತಿದ್ದ ಗೆಳೆಯರನ್ನೆಲ್ಲ ಸಂಪರ್ಕಿಸಿದೆ. ನನ್ನ ಗೆಳತಿ ಹಿಂದೆ ಒಬ್ಬ ಸೈಕಾಲಜಿಸ್ಟ್‌ ಬಗ್ಗೆ ಹೇಳಿದ್ದಳು. ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದೆ.
ಬಲು ಕಷ್ಟದಲ್ಲಿ ಮಾತಿಗೆ ಸಿಕ್ಕ ಅವರು ತಮ್ಮನ ಮದುವೆಯ ತರಾತುರಿಯಲ್ಲಿದ್ದರು. ಒಬ್ಬನೇ ತಮ್ಮನ ಮದುವೆ ತಯಾರಿ ಬಿಟ್ಟು ನನ್ನ ತಮ್ಮನನ್ನು ರಿಪೇರಿ ಮಾಡ್ಲಿಕ್ಕೆ ಒಪ್ಪಿಕೊಂಡರು.

ಮರುದಿನ ಮುಂಜಾನೆ ಮನೆಗೆ ಬಂದಾಗ ತಮ್ಮನ ಕಣ್ಣ ಕೆಳಗೆ ಕಪ್ಪು ಕಲೆ. ಮುಖ ತಗ್ಗಿತ್ತು. ರೂಮೊಳಗೆ ಬಂದು ಕೂತ. ಮನಸ್ಸಿಲ್ಲದ ಮನಸ್ಸಿಂದ ತಿಂಡಿ ತಿಂದ, ಸ್ನಾನ ಮಾಡಿ ಬೆನ್ನು ಒರೆಸದೇ ಬಂದ.


ಮರುದಿನ ಅವನನ್ನು ಆ ಸೈಕಾಲಜಿಸ್ಟ್‌ ಬಳಿ ಕರೆದೊಯ್ದೆ. ಆಗಷ್ಟೇ ಮಿಂದು, ಒದ್ದೆ ಕೂದಲನ್ನು ಬೆನ್ನ ಮೇಲೆ ಹರಡಿದ ಮೂವತೈದರ ಚೆಲುವಾದ ಹೆಣ್ಮಗಳೊಬ್ಬಳು ನಮ್ಮನ್ನು ಮನೆಯೊಳಗೆ ಕರೆದೊಯ್ದರು. ಮನೆ ಮಹಡಿಯ ಮೇಲೆ ಕೂರಿಸಿ ತಿಂಡಿ ಬಗ್ಗೆ ವಿಚಾರಿಸಿ ಎಷ್ಟೇ ಹೇಳಿದರೂ ಕೇಳದೇ ತಿಂಡಿ ಕೊಟ್ಟು ಮಾತಿಗೆ ಕೂತರು. ನಮಗೆ ಆಶ್ಚರ್ಯ. ಸೈಕಾಲಜಿಸ್ಟ್‌ ಟಫ್‌ ಪರ್ಸನಾಲಿಟಿ ನಿರೀಕ್ಷಿಸಿದ್ದ ನಮಗೆ ಗೊಂದಲ, ತಬ್ಬಿಬ್ಬು.

ನನ್ನನ್ನು ಕೆಳಗೆ ಕೂರಲು ಹೇಳಿ, ತಮ್ಮನ ಜತೆಗೆ ಮಾತಿಗೆ ಹಚ್ಚಿದರು. ನಾನು ತಳ ಅಂತಸ್ತಿನ ರೂಮಿನಲ್ಲಿ ಕೂತು ಅರ್ಧ ಓದಿದ್ದ ದಾದಾಗಿರಿಯ ದಿನಗಳತ್ತ ಕಣ್ಣು ಹಾಯಿಸಿದೆ. ಏನೂ ತಲೆಗೆ ಹೋಗುತ್ತಿರಲಿಲ್ಲ. ಮೇಲಿನ ಮಾತುಗಳೂ ಕೇಳುತ್ತಿಲ್ಲ. ಸುಮ್ಮನೆ ಅಲ್ಲಿ ಇಲ್ಲಿ ಅಡ್ಡಾಡುತ್ತಾ ಮತ್ತೆ ಪುಸ್ತಕ ಹಿಡಿದೆ. ಹತ್ತು ಪುಟ ಓದಿ ಮುಗಿದಿರಬಹುದು.

ಮೇಲಿಂದ ಜೋರಾಗಿ ನಗುವ ಸದ್ದು. ತಡೆದು ಕಿವಿಕೊಟ್ಟೆ, ತಮ್ಮನದೇ ದನಿ. ಅವನನ್ನು ಆತ್ಮಹತ್ಯೆಯಿಂದ ಹೊರಗೆಳೆದು, ಸಮಾಧಾನಿಸಬೇಕು ಎಂದಷ್ಟೇ ಬಯಸ್ಸಿದ್ದ ನನಗೆ ಅವನ ಜೋರಾದ ನಗು ಕೇಳಿ ಆಶ್ಚರ್ಯ. ಒಳಗೊಳಗೇ ಸಮಾಧಾನ, ಮಂಕು ಬಡಿದಂತಾಗಿದ್ದ ಮನಸ್ಸು ತಹಬಂಧಿಗೆ ಬಂದಿತ್ತು. ಅಷ್ಟರಲ್ಲಾಗಲೇ ತಮ್ಮನ ಸ್ವರ ಏರಿತ್ತು, ಜೋರು ಜೋರಾಗಿ ಏನನ್ನೋ ವಿವರಿಸುತ್ತಿದ್ದ. ಅದೇನೆಂದು ಸ್ಪಷ್ಟವಾಗುತ್ತಿರಲಿಲ್ಲ.

ಸಧ್ಯ! ಅಂದುಕೊಂಡು ಓದನ್ನು ಮುಂದುವರಿಸಿದೆ. ಯಾಕೋ ಬೋರೆನಿಸತೊಡಗಿತು.
ಮೇಲಿಂದ ಅಸ್ಪಷ್ಟ ಮಾತು ಮುಂದುವರಿದಿತ್ತು. ಹೊರಬಂದು ರಸ್ತೆಯಲ್ಲೇ ಎರಡು ಸುತ್ತು ಹಾಕಿಬಂದೆ. ಇವರ ಮಾತು ನಿಂತಿರಲಿಲ್ಲ. ಅವರು ಮಾತಿಗೆ ತೊಡಗಿ ಆಗಲೇ ಮೂರು ಗಂಟೆಯಷ್ಟು ಹೊತ್ತಾಗಿತ್ತು.

ಅಲ್ಲೇ ಮಂಚಕ್ಕೊರಗಿದ್ದೆ. ತಮ್ಮ ಬಂದು ಎಚ್ಚರಿಸಿದಾಗಲೇ ಗೊತ್ತಾಗಿದ್ದು, ನಂಗೆ ನಿದ್ದೆ ಬಂದಿದೆ ಅಂತ. ನಗು ನಗುತ್ತಾ ಬಂದ ತಮ್ಮ, ಮೇಲೆ ಬಾ, ಅಕ್ಕ ಕರೀತಾರೆ ಅಂತಂದ. ಅವರಾಗಲೇ ಅವನಿಗೆ ಅಕ್ಕ ಆಗಿದ್ದರು, ಜತೆಗೆ ಬೆಸ್ಟ್‌ ಫ್ರೆಂಡೂ. ಆ ಕ್ಷಣಕ್ಕೆ ನಂಗೆ ಏನು ಹೇಳಬೇಕೋ ತಿಳಿಯಲಿಲ್ಲ. ತಮ್ಮನನ್ನು ಕರೆದುಕೊಂಡು ಹೊರಬಂದೆ. ಗೇಟಿನವರೆಗೆ ಬಂದು ಬಿಟ್ಟು ಹೋದರು.

ಅದೇ ದಿನ ರಾತ್ರಿ ಅವರಿಗೆ ಫೋನ್‌ ಮಾಡಿದಾಗ, ತಮ್ಮನ ಸಮಸ್ಯೆಯನ್ನು ವಿವರಿಸಿದರು. ತಮ್ಮನಿಗಾಗಿದ್ದು ಪ್ರೀತಿಯ ಕೊರತೆ. ಟೀಚರ್ಸ್‌ ಅವನನ್ನು ಎಷ್ಟು ಹಿಂಸಿಸಿದ್ದರೆಂದರೆ ಅವನಿಗೆ ಜೀವನವೇ ಬೇಡವಾಗುವಷ್ಟು. ಜತೆಗೆ ಮನೆಯಲ್ಲೂ ಇದೇ ಕಾರಣಕ್ಕೆ ಕಿರಿಕಿರಿ ಸುರುವಾದಾಗ ಅವನಿಗೆ ಓದಿನ ಮೇಲೇ ದ್ವೇಷ ಬಂದಿತ್ತು. ಜಗತ್ತೆಲ್ಲ ಅವನ ಶತ್ರುಗಳೇ ತುಂಬಿದಂತಾಗಿದ್ದರು. ಪ್ರತಿಭಟಿಸಲು ಬೇಕಾದ ಧೈರ್ಯವಿರಲಿಲ್ಲ. ಒಳಗೇ ನೋವು ತುಂಬಿ ಹೊರಬರಲಾಗದೇ ಅದರೊಂದಿಗೆ ಗಿಲ್ಟ್‌ ಸಹ ಸೇರಿ ಬದುಕೇ ಅಸಹನೀಯವಾಗತೊಡಗಿತ್ತು. ಆಗ ಅವನಿಗೆ ಕನಸು ಕಾಣುವ, ಭ್ರಮೆಯಲ್ಲೇ ಬದುಕುವ ಸ್ಥಿತಿ ಇಷ್ಟವಾಗತೊಡಗಿತು. ಈ ಸ್ಥಿತಿಗೆ ಎಷ್ಟರ ಮಟ್ಟಿಗೆ ಅಂಟಿಕೊಂಡ ಅಂದ್ರೆ, ಅದರಿಂದ ಹೊರಬರುವುದೂ ಸಮಸ್ಯೆಯಾಯಿತು. ಈ ಅಕ್ಕನ ಬಳಿ ತನ್ನ ನೋವನ್ನೆಲ್ಲ ಹೇಳಿ ಹಗುರಾದ ಮೇಲೆ ಅವನಿಗೂ ನಿರಾಳವೆನಿಸಿತು. ಜತೆಗೆ ಅವರ ಪ್ರೀತಿಯ ಮಾತು ಮತ್ತಷ್ಟು ಚೈತನ್ಯ ಮೂಡಿಸಿತು.

ಈಗ ಬದಲಾಗಿದಾನೆ, ತಾರೇ ಜಮೀನ್ ಪರ್‍ ನಲ್ಲಿ ಇಶಾನ್ಗೆ ಸಿಕ್ಕ ಅಮೀರ್‌ಖಾನ್‌ ಥರಾ ನನ್ನ ತಮ್ಮನಿಗೆ ಒಬ್ಬ ಹೊಸ ಅಕ್ಕ ಸಿಕ್ಕಿದ್ದಾರೆ. ಈ ಅಕ್ಕನಿಗಿಂತಲೂ ಹೆಚ್ಚು ಆ ಅಕ್ಕನನ್ನು ಕಂಡ್ರೇ ಅವನಿಗಿಷ್ಟ ಅಂದಾಗ ಸ್ವಲ್ಪ ಅಸೂಯೆಯಾಗುತ್ತದೆ. ಆದ್ರೂ ಮೊದಲು ಮೂಲೆಯಲ್ಲಿ ಕೂತು ಅಳುತ್ತಾ ರೇಗುತ್ತಾ ಇದ್ದ ತಮ್ಮನಿಗೆ ಈಗ ಹೊಳೆಯಲ್ಲಿ ಈಜೋದ್ರಿಂದ ಉದ್ದ ಆಗ್ತೀನಿ ಅನ್ನೋ ಕಾನ್ಫಿಡೆನ್ಸ್ ಬಂದಿದೆ. ಕಂಪ್ಯೂಟರ್‌ ಕ್ಲಾಸಿಗೆ ಸೇರ್‍ಕೊಂಡಿದಾನೆ. ಉಳಿದ ಟೈಂನಲ್ಲಿ ಅಪ್ಪನಿಗೆ ತೋಟದಲ್ಲಿ ಹೆಲ್ಪ್‌ ಮಾಡುತ್ತಾನೆ. ಆಗಾಗ ಹೊಸ ಅಕ್ಕನನ್ನು ಕಾಣಲು ಬೆಂಗಳೂರಿಗೆ ಬರುತ್ತಿರುತ್ತಾನೆ. ಈಗ ಅಂವ ಫೋನ್‌ ಮಾಡಿದ್ರೆ, ಅದೆಂಥಾ ತಲೆ ಹೋಗೋ ಕೆಲ್ಸ ಇದ್ರೂ ಬಿಟ್ಟು ಫೋನೆತ್ತುತ್ತೇನೆ. ಆದರೆ ಜೀವನೋತ್ಸಾಹ ತುಂಬ ಬೇಕಾದ ಶಿಕ್ಷಕರು ಜೀವ ತೆಗೆಯುವ ಸ್ಥಿತಿಗೆ ನೂಕಿದ್ದನ್ನು ಇನ್ನೂ ಜೀರ್ಣಿಸಲಾಗಿಲ್ಲ.

( ಇದನ್ನು ಬರಹ ರೂಪಕ್ಕಿಳಿಸಲು ತುಂಬ ಹೆಣಗಿದ್ದೇನೆ. ಒಂದೂವರೆ ತಿಂಗಳ ಹಿಂದೆ ಆರಂಭಿಸಿದ ಬರಹ ಇದು. ಬರವಣಿಗೆ ಅರ್ಧಕ್ಕೆ ಬರುವಾಗ ಇದು ಸರಿಯಾಗಿಲ್ಲ ಅಂತ ಅನಿಸಲು ಸುರು. ಆದ್ರೆ ಮುಗ್ಧ ಮಕ್ಕಳ ಮನಸ್ಸಿಗೆ ನೋವು ಮಾಡುವ ಶಿಕ್ಷಕರು ನಮ್ಮಲ್ಲಿ ಹೆಚ್ಚಾಗುತ್ತಿದ್ದಾರೆ, ಕಪಿಲಕ್ಕನಂತವರು ಕಡಿಮೆಯಾಗುತ್ತಿದ್ದಾರೆ ಅನ್ನುವುದು ಮಾತ್ರ ಸತ್ಯ ಅಂದುಕೊಂಡಿದ್ದೇನೆ, ಹೀಗಾಗದಿರಲಿ ಎಂಬ ತುಡಿತ ಇದ್ದೇ ಇದೆ.)

Tuesday, November 25, 2008

ನನ್ನ ಪ್ರೀತಿಯ ಕಂಗನಾ...



ಕತ್ತಲೆಯ ಪರದೆ ಸರಿದಾಗ ಕಣ್‌ ಕೋರೈಸುವ ಬೆಳಕು. ಅಲ್ಲೊಬ್ಬ ಸುಂದರಿ ಪ್ರತ್ಯಕ್ಷ. ನೀಳ ಕಾಯವನ್ನು ಬಳುಕಿಸುತ್ತಾ, ತುಂಬು ಗುಂಗುರು ಕೂದಲೊಳಗೇ ಮಾದಕ ಮುಖ ತೋರಿಸುತ್ತಾ ಮುಂದೆ ಬಂದು ಮಿಂಚು ನೋಟ ಬೀರಿ ಬೀರುತ್ತಾಳೆ. ಅಹ್‌, ಅದೆಂಥಾ ಚೂಪು, ನೇರ ದೃಷ್ಟಿ. ಕಂಗನಾ ರಾನಾವತ್ ಎಂಬ ಹುಚ್ಚು ಹುಡುಗಿ ಆ ಕ್ಷಣ ನಮ್ಮೊಳಗೆ ತುಂಬಿ ಹೋಗುತ್ತಾಳೆ. ‘ಫ್ಯಾಶನ್‌ ’ ಸಿನಿಮಾದಲ್ಲಿ ಫ್ಯಾಶನ್‌ ಪ್ರಪಂಚದ ಅಷ್ಟೂ ಅಧ್ವಾನಗಳನ್ನು ಮೈತುಂಬಿಕೊಂಡಂತೆ ಬರುವ ಪಾತ್ರ ಕಂಗನಾದು. ಚಿತ್ರದಲ್ಲಿ ಆಕೆ ಸೊನಾಲಿ. ಫ್ಯಾಶನ್‌ ಜಗತ್ತಿನ ದುರಂತಗಳಿಗೆ, ನೋವುಗಳಿಗೆ ಮುಖವಾಣಿಯಾಗುತ್ತಾ ಹೋಗುವ ಪಾತ್ರ ಆಕೆಯದು.

ಈ ಚಿತ್ರದ ನಾಯಕಿ ಮೇಘನಾ ಫ್ಯಾಶನ್‌ ಲೋಕಕ್ಕೆ ಹೆಜ್ಜೆ ಇಡುವ ಹೊತ್ತಿಗೆ, ಸೋನಾಲಿ(ಕಂಗನಾ) ಪ್ರತಿಷ್ಠಿತ ಬ್ರಾಂಡ್‌ನ ರೂಪದರ್ಶಿ. ಆ ಹೊತ್ತಿಗೆ ಈಕೆ ಬಲು ಎತ್ತರಕ್ಕೇರಿದ ಫ್ಯಾಶನ್‌ ಲೋಕದ ಅಧಿನಾಯಕಿಯಂತೆ ಅಹಂಕಾರದಿಂದ ಕನಲಿ ಮೈಮರೆಯುತ್ತಾಳೆ ಸೊನಾಲಿ. ಸದಾ ಡ್ರಕ್ಸ್‌ನಿಂದ ಅಮಲೇರಿದ ಕಣ್ಣುಗಳಲ್ಲಿ ಜಗತ್ತನ್ನು ನೋಡುತ್ತಾಳೆ.

ಇದಕ್ಕೂ ಮೊದಲಿನ ಒಂದು ದೃಶ್ಯ ಫ್ಯಾಶನ್‌ ಜಗತ್ತಿನ ಅಂತರಾಳಕ್ಕೆ ಕನ್ನಡಿ ಹಿಡಿಯುತ್ತದೆ. ಅದು ಮುಂಬಯಿನ ಪ್ರತಿಷ್ಟಿತ ಪಾರ್ಟಿ. ಅಲ್ಲಿ ಒಂದು ಕಡೆ ಪಾನ ಪಾರ್ಟಿ ರಂಗೇರುತ್ತಿದ್ದರೆ, ಇನ್ನೊಂದೆಡೆ ಮಾನಿನಿಯರ ಕೇಕೆಯೂ ಮುಗಿಲುಮುಟ್ಟುತ್ತದೆ. ದೊಡ್ಡ ಕಡಾಯಿಯಲ್ಲಿ ಕೊಳೆತ ದ್ರಾಕ್ಷಿ ತುಳಿ ತುಳಿಯುತ್ತಾ ಮಕ್ಕಳಾಟದಂತೆ ಅದರಲ್ಲಿ ಖುಷಿ ಪಡುತ್ತಿರುತ್ತಾರೆ ಈ ಮಂದಿ... ಮೂಲೆಯಲ್ಲಿ ಶೋಕಿಗೆಂದು ಕೈಯಲ್ಲಿ ವೈನ್‌ ತುಂಬಿದ ಗ್ಲಾಸ್‌ ಹಿಡಿದ ಹಿರಿಯ ಮಹಿಳೆಯೊಬ್ಬಳು ಅರ್ಥಗರ್ಭಿತವಾಗಿ ಅತ್ತ ನೋಡುತ್ತಾಳೆ. ಅದು
ಫ್ಯಾಶನ್ ಪ್ರಪಂಚವನ್ನು ಸಾಕ್ಷೀಕರಿಸುವ ಮಾರ್ಮಿಕ ದೃಶ್ಯ. ಆ ಜಗತ್ತಿನ ಮಂದಿಗೆ ತಾಜಾ ದ್ರಾಕ್ಷಿ ಬೇಡ. ಆದರೆ ದ್ರಾಕ್ಷಿಯನ್ನು ಕೊಳೆಸಿ ತುಳಿದು ವೈನ್‌ನ ರೂಪದಲ್ಲಿ ಜರಡಿಗೆ ಹಾಕಿದರೆ ಅದನ್ನು ಚಪ್ಪರಿಸಲು ಅದೆಷ್ಟು ಮಂದಿ...

ಇದನ್ನು ಸತ್ಯರೂಪದಲ್ಲಿ ಸಂಕೇತಿಸುವುದೇ ಸೊನಾಲಿ. ಜಗತ್ತೇ ತನ್ನ ಕೈಯಬುಗರಿ ಎಂದುಕೊಂಡಿದ್ದ ಸೊನಾಲಿಗೆ ಈ ಭ್ರಮೆ ಅರಿವಿಗೆ ಬರುವುದು ಕೆಲಸದಿಂದ ಹೊರತಳ್ಳಲ್ಪಟ್ಟಾಗಲೇ. ಅದುವರೆಗೆ ಕೋರೈಸುವ ಫ್ಯಾಶನ್‌ ಜಗತ್ತಿನ ಕತ್ತಲಮೂಲೆಯಲ್ಲಿ ಅವಿತಿದ್ದ ವಾಸ್ತವ ಇದ್ದಕ್ಕಿದ್ದ ಹಾಗೆ ಕಣ್ಮುಂದೆ ಬಂದಾಗ ಆಕೆ ತತ್ತರಿಸಿ ಹೋಗುತ್ತಾಳೆ. ಅವಳ ಸ್ಥಾನಕ್ಕೆ ಆ ಕಂಪೆನಿಯ ಮುಖವಾಣಿಯಾಗಿ ಬರುವವಳು ನಾಯಕಿ ಮೇಘನಾ ಮಾಥುರ್‌. ಮುಂದೆ ಈ ಸೊನಾಲಿ ದುರಂತ ನಾಯಕಿ ಅಥವಾ ಫ್ಯಾಶನ್‌ ಲೋಕದ ಕಮರಿದ ಹೂವು.

ಫ್ಯಾಶನ್‌ ಲೋಕದ ಹಲವು ದುರಂತಗಳಿಗೆ ಆಕೆ ಸಾಕ್ಷಿಯಾಗುತ್ತಾಳೆ. ಕೆಲ ವರ್ಷಗಳ ಹಿಂದೆ ಫ್ಯಾಶನ್‌ ಶೋವೊಂದರಲ್ಲಿ ಇದ್ದಕ್ಕಿದ್ದ ಹಾಗೆ ಬಟ್ಟೆ ಕಳಚಿಬಿದ್ದ ರೂಪದರ್ಶಿಯನ್ನು ಈಕೆ ಚಿತ್ರದಲ್ಲಿ ಪ್ರತಿನಿಧಿಸುತ್ತಾಳೆ. ಸುತ್ತಿ ಬರುವ ಅವಮಾನಗಳಲ್ಲಿ ದೊಡ್ಡ ಅಲೆ ಇದು. ಈ ಅಲೆ ಆಕೆಯನ್ನು ಕೊಚ್ಚಿಕೊಂಡೇ ಹೋಗುತ್ತದೆ. ಪ್ರವಾಹದ ವಿರುದ್ಧ ಈಜಲಾಗದ ಆಕೆ ಸರ್ವಸ್ವವನ್ನೂ ಕಳೆದುಕೊಂಡು ಹುಚ್ಚಿಯಾಗಿ ಬೀದಿಗೆ ಬೀಳುತ್ತಾಳೆ.
ಆಗ ಇತ್ತೀಚೆಗೆ ಮಾದಕ ವ್ಯಸನಿ ರೂಪದರ್ಶಿಯೊಬ್ಬಳು ಹುಚ್ಚಿಯಾಗಿ ಬೀದಿಯಲ್ಲಿ ಅಲೆದಾಡುತ್ತಿದ್ದ ಸುದ್ದಿಯಲ್ಲಿ ಕಥೆ ಕೇಂದ್ರೀಕೃತವಾಗುತ್ತದೆ. ಘಟನೆ, ಘಟನೆಗಳ ಮೂಲಕ ವಾಸ್ತವಕ್ಕೆ ಹತ್ತಿರವಾಗಿ, ಮನಸ್ಸಿನಾಳದಲ್ಲಿ ಊರಿ ಬಿಡುತ್ತದೆ ಈ ದೃಶ್ಯ.

ಬಹುಶಃ ಈಕೆಯ ಹಣೆಯಲ್ಲಿ ದುರಂತವೇ ಬರೆದಿರಬೇಕು. ಇದರ ನಡುವೆ ಈಕೆ ಕಳೆದುಕೊಂಡದ್ದನ್ನು ತಾನು ಮೈದುಂಬಿಕೊಳ್ಳುತ್ತಾ, ಕೊನೆಗೆ ಈಕೆಯಂತೇ ಹತಾಶೆಯ ಪ್ರಪಾತಕ್ಕೆ ಬೀಳುತ್ತಾಳೆ ಈ ಚಿತ್ರದ ನಾಯಕಿ ಮೇಘನಾ. ಆದರೆ ಒಂದು ಹಂತದಲ್ಲಿ ನಾಯಕಿ ಎಚ್ಚೆತ್ತ ಕಾರಣ ಪರಿಣಾಮ ಸ್ವಲ್ಪ ಹಗುರಾಗುತ್ತದೆ. ಬಳಿಕ ನಾಯಕಿ ತನ್ನ ಪಾಪಪ್ರಜ್ಞೆಯ ಪ್ರತಿರೂಪದಂತಿರುವ ಬಲು ಎಚ್ಚರಿಕೆಯಿಂದ ಕಾಯುತ್ತಾಳೆ.ಆದರೆ, ಹೇಳಿ ಕೇಳಿ ದುರ್ಭರ ಅಂತ್ಯ ಮೊದಲೇ ನಿರ್ಧರಿತವಾದ ಕಾರಣ ಅದಕ್ಕೆ ಪ್ರತಿಯಾಡದೇ ಶರಣಾಗಿ ಬಿಡುತ್ತಾಳೆ ಸೊನಾಲಿ.

ಮಧು ಭಂಡಾಕರ್‌ ಎಂಬ ಪ್ರತಿಭಾವಂತ ನಿರ್ದೇಶಕನ ಕೈಯಲ್ಲಿ ಅಕ್ಷರಶಃ ಸೊನಾಲಿಯೇ ಆಗಿಬಿಡುತ್ತಾಳೆ ಕಂಗನಾ. ಆ ಕೆಚ್ಚು, ವ್ಯಂಗ್ಯ, ಮಾದಕತೆ, ಕೊನೆಗೆ ದೈನ್ಯ...ಇದರ ಜತೆಗೆ ಪಾತ್ರವನ್ನು ಆವಾಹಿಸಿಕೊಂಡು ರೂಪದರ್ಶಿಗಳ ಮೂರ್ತರೂಪವೇ ಆಗಿಬಿಡುತ್ತಾಳೆ ಕಂಗನಾ. ಗುಂಗುರು ಕೂದಲಿನಡಿ ಮಿನುಗುವ ಆಕೆಯ ಬೆಕ್ಕಿನ ಕಣ್ಣು ಫ್ಯಾಶನ್‌ ಜಗತ್ತಿನ ನಗ್ನಸತ್ಯವನ್ನು ಸಾರಿ ಸಾರಿ ಹೇಳುವಂತಿದೆ.