Monday, March 18, 2013

ಅವನು ನೀಲ್.....



ತುಂಬ ದಿನಗಳ ಬಳಿಕ
ಸಮುದ್ರ ತೀರಕ್ಕೆ ಬಂದಿದ್ದೆ., ನಡು ಮಧ್ಯಾಹ್ನ
ತಲೆಮೇಲೆ ಬಿರುಬಿಸಿಲು
ಉಪ್ಪುನೀರಿನೊಂದಿಗೆ ಬೀಸುವ ಹಸಿಗಾಳಿ

ಅವನು ಎದುರಿಗೇ ಬಂದು ವಿಶ್ ಮಾಡಿದಾಗ
ತಡವರಿಸುವ ಹಾಗಾಯ್ತು
ನನ್ನ ನೀಲಿ ಸ್ಕಟರ್್ನ್ನು, ಕೆಳಗಿನ ಪಾದವನ್ನು
ಅಚಾನಕ್ ಅನ್ನುವ ಹಾಗೆ ನೋಡಿ
ನಾನೇನೋ ಹೇಳಲು ಹೊರಟಾಗ
ಎಚ್ಚರಾದವನ ಹಾಗೆ

ನೀಲ್..ಅವನ ಹೆಸರು
ತುಂಬ ಚೆಂದ ಅಂತಲ್ಲ,
ಒಂಥರಾ ಹ್ಯಾಂಡ್ಸಮ್
ಗೊತ್ತಾಗದ ಹಾಗೆ ಅವನ ಕಾಲ್ಬೆರಳು
ನೋಡುವುದು ನನಗಿಷ್ಟ

ನಮ್ಮಿಬ್ಬರ ನಡುವೆ ಅಂತರವಿತ್ತು
ಅವನ ಕೈ ಗೊತ್ತಿಲ್ಲದ ಹಾಗೆ ಸ್ಕಟರ್್ನ ಅಂಚು ಸೋಕುತ್ತಿತ್ತು
ತುಂಬ ದಿನಗಳ ನಂತರ ಸಿಕ್ಕಿದ್ದ
ಮಾತನಾಡಲು ಅಂತ ವಿಷಯ ಏನಿರಲಿಲ್ಲ

ಮರಳ ದಂಡೆಯಲ್ಲಿ ಚಪ್ಪಲಿಬಿಟ್ಟೆ.
ಪಾದದ ತುಂಬ ಬಿಳಿಬಿಳಿ ಮರಳು
ನೀಲ್ ಮಾತು ಕಡಿಮೆ ಮಾಡಿದ್ದ
 ಗಂಭೀರವಾಗಿದ್ದ..

ಹೇಗೆ ನಡೆಯುತ್ತಿದೆ ಸಂಸಾರ?
ಚೆನ್ನಾಗಿದೆಯಪ್ಪ
ನಿನ್ನ ಕಥೆ?
ಮತ್ತೊಂದು ಸಂಸಾರ

ಗೊತ್ತಾಗತ್ತೆ, ಡುಮ್ಮಿ!
ನೀನು ಹೊತ್ಕೊಂಡಿದಿಯಾ?
ನೀನು ಬಿಟ್ರೆ, ಅದಕ್ಕೂ ರೆಡಿ
ಬೇಡ ಮಾರಾಯ, ಸುಮ್ನೆ ನಡಿ..

ನಾವಿಬ್ಬರೂ ಮೊದಲಿನ ಹಾಗೆ
ಜೋರಾಗಿ ನಕ್ಕೆವು
 ತಲೆ ಮೇಲೆ ಮೊಟಕಿದ
ಕಟ್ಟಿದ ಕೂದಲು ಬಿಚ್ಚಿ ಹರಡಿದ

ನಾವು ಕಡಲುದ್ದ ನಡೆದೆವು..
ಅಲೆಗಳೊಂದಿಗೆ ಜಾರಿದೆವು

ಅದೆಷ್ಟೋ ಹೊತ್ತಾದ ಮೇಲೆ
ನಾನು ಮತ್ತೆ ಚಪ್ಪಲಿ ಮೆಟ್ಟಿದೆ
ಕಂದು ಸಾಕ್ಸ್ ಅವನ ಪಾದ ಮುಚ್ಚಿತು
ನಾವು ಹೊರಟುಹೋದೆವು



Tuesday, December 11, 2012

ದೂರ ಬೆಟ್ಟದ ಧಾಬಾ ಚಾಚಾ



`ಕ್ಯಾ ಚಾಹಿಯೆ ಬೇಟಿ?' ಪ್ರೀತಿ ಬೆರೆತ ದನಿಯೊಂದು ಪ್ರಶ್ನಿಸುತ್ತದೆ. `ರೋಟಿ, ಚಾವಲ್, ಸಬ್ಜಿ...?' ಖಾಲಿ ಹೊಟ್ಟೆ ಏನನ್ನೋ ಬಯಸುತ್ತದೆ. ಅಂಕುಡೊಂಕಾದ ಪೆಟ್ಟಿಗೆ ಬೆಂಚಿನಲ್ಲಿ `ಉಸ್ಸಬ್ಬಾ' ಅಂತ ಕೂತ ಕೂಡಲೇ ಬಿಸಿಬಿಸಿ ರೊಟ್ಟಿ ಸಬ್ಜಿ ಅನ್ನ ದಾಲ್ ಪ್ರತ್ಯಕ್ಷ.  ಹೊರಗಿನ ಹಿಮಗಾಳಿಯಿಂದ ಬಚ್ಚಿಟ್ಟು, ಬೆಚ್ಚನೆಯ ಕೋಣೆಯೊಳಗೆ ಕೂತು ಬಿಸಿಬಿಸಿ ಊಟ ಮಾಡುವಾಗ, ದೋಜರ್ಿ ದಂಪತಿಗಳ ಅಕ್ಕರೆಯ ಸತ್ಕಾರ ಮನಸ್ಸನ್ನೂ ಬೆಚ್ಚಗಾಗಿಸುತ್ತದೆ.

`ದೂರ ಬೆಟ್ಟದಲ್ಲಿ ಪುಟ್ಟ ಮನೆಯಿರಬೇಕು' ಎಂದು ಹಾಡಿಕೊಳ್ಳುವುದು ಸುಲಭ. ಅದರ ಕಷ್ಟ ಅರಿತವರಿಗೇ ಗೊತ್ತು. ವರ್ಷದ ಒಂಬತ್ತು ತಿಂಗಳು ಹೆಪ್ಪುಗಟ್ಟಿಸುವ ಹಿಮ, ಉಸಿರುಗಟ್ಟಿಸುವ ಗಾಳಿ, ನಡುಗಿಸುವ ಚಳಿ. ತುಸು ಬಿಸಿಲು ಜಾಸ್ತಿ ಬಿದ್ದರೆ ಸೊಕ್ಕಿ ಹರಿವ ನದಿ ಪಕ್ಕದಲ್ಲೇ. ತಮ್ಮ ನಿಗೂಢವನ್ನು ಬಿಟ್ಟುಕೊಡದ ಹಿಮಾಲಯ ಪರ್ವತಗಳು ಸುತ್ತಲೂ. ಜನಸಂಚಾರ ಬಿಡಿ, ಕ್ರಿಮಿಕೀಟಗಳೂ ಇಲ್ಲ. ಇಂಥ ಉಸಿರುಗಟ್ಟಿಸುವ ಕಟ್ಟೇಕಾಂತದಲ್ಲಿ ಜೀವನ ಸಾಗಿಸುವ ಇವರ ಪರಿ ಬೆರಗು ಮೂಡಿಸುತ್ತದೆ.

ಹಿಮಾಲಯದ ತಪ್ಪಲಿನ ಒಂದು ಪಾಶ್ರ್ವದ ಅತೀ ಎತ್ತರದ ಹಾಗೂ ಕೊನೆಯ ವಾಹನ ನಿಲ್ದಾಣ ಸ್ಪಿತಿ ಜಿಲ್ಲೆಯಲ್ಲಿ ಬರುತ್ತದೆ. ಹಿಮಾಚಲ ಪ್ರದೇಶದ ಲಾಹೋಲ್ ಮತ್ತು ಸ್ಪಿತಿ ಒಂದೇ ಸಾಮ್ಯದ ಅವಳಿ ಜಿಲ್ಲೆಗಳು. ಸ್ಪಿತಿಯ ಕೇಂದ್ರ ಸ್ಥಾನ ಕಾಜಾ. ಕಡಿಮೆ ಜನಸಂಖ್ಯೆಯಿರುವ ಈ ಜಿಲ್ಲೆಗಳಲ್ಲಿ ಜನಜೀವನ ಕಠಿಣವಾದದ್ದು. ಹಿಮ ಕಡಿಮೆ ಇರುವ ಸಮಯದಲ್ಲಿ ಗದ್ದೆಗಳಲ್ಲಿ ಬಟಾಣಿಕಾಳು, ಗೋಧಿ ಬೆಳೆಯುತ್ತಾ, ಉಳಿದ ಸಮಯದಲ್ಲಿ ಉಣ್ಣೆ, ತುಪ್ಪಳಗಳಿಂದ ಸ್ವೆಟರ್, ಶಾಲ್ ಹೆಣೆಯುತ್ತಾ ಬದುಕು ಕಂಡುಕೊಳ್ಳುತ್ತಾರೆ.

ಮುಖ್ಯ ನಗರ ಮನಾಲಿಗೂ ಕಾಜಾಕ್ಕೂ ತಪ್ಪದ ನಂಟು. ಆದರೆ ಮನಾಲಿಯಿಂದ ಸ್ಪಿತಿ ವ್ಯಾಲಿ ನಡುವಿನ ವಾಹನ ಮಾರ್ಗ ನಾಲ್ಕು ತಿಂಗಳಷ್ಟೆ ತೆರೆದಿರುತ್ತದೆ. ವರ್ಷದ ಉಳಿದೆಲ್ಲ ಸಮಯ ಹಿಮದಿಂದ ಮುಚ್ಚಿರುತ್ತದೆ. ಮೇ ತಿಂಗಳು ಬರುತ್ತಿದ್ದಂತೆ ರೋಡ್ ರಿಪೇರಿ ಆರಂಭವಾಗುತ್ತದೆ. ಜೂನ್ ಹೊತ್ತಿಗೆ ರೋಡ್ ವಾಹನ ಓಡಾಟಕ್ಕೆ ಸಜ್ಜಾದರೂ ಪರ್ವತಗಳಿಂದ ಕುಸಿಯುವ ಮಣ್ಣು, ಹಿಮಗಡ್ಡೆಗಳು, ನದೀಪ್ರವಾಹಗಳಿಂದಾಗಿ ನಾಲ್ಕೂ ತಿಂಗಳೂ ರೋಡ್ ರಿಪೇರಿ ನಡೆಯುತ್ತಲೇ ಇರುತ್ತದೆ. ರಸ್ತೆ ತೆರೆದುಕೊಳ್ಳುತ್ತಿದ್ದಂತೇ ಇಲ್ಲಿನ ಹಳ್ಳಿಗರೂ ಪ್ರವಾಸಿಗರನ್ನು ಸ್ವಾಗತಿಸಲು ಎದುರುನೋಡುತ್ತಿರುತ್ತಾರೆ. ಇದು ಅವರಿಗೆ ಒಂದಿಷ್ಟು ಹಣ, ನೆಮ್ಮದಿ ಕೊಡುವ ಕಾಲ.

ಮನಾಲಿಯಿಂದ ಬೆಳಗಿನ ಜಾವ ಐದಕ್ಕೆ ಸರಿಯಾಗಿ ಹೊರಡುವ ಎಚ್ಆರ್ಟಿಸಿ ಬಸ್, ಕಣ್ಣಕೊನೆ ಮುಟ್ಟದ ದೈತ್ಯ ಪರ್ವತಗಳಿಗೆ ಸುತ್ತು ಹೊಡೆಯುತ್ತಾ ಸಾಗುತ್ತದೆ. ರೋಹತಾಂಗ್ ಪಾಸ್ ಸೇರಿದಂತೆ ಹಲವೆಡೆ ನೀರ್ಗಲ್ಲುಗಳು, ದೈತ್ಯಬಂಡೆಗಳು, ರಸ್ತೆ ಮೇಲೇ ಹರಿಯುವ ಝರಿ, ಅಪಾಯಕಾರಿ ತಿರುವುಗಳ ಇಕ್ಕಟ್ಟಾದ ಹಾದಿಯಲ್ಲಿ ಸಂಚರಿಸಿ ಮಧ್ಯಾಹ್ನದ ಹೊತ್ತಿಗೆ ಸರಿಯಾಗಿ ಬತಾಲ್ನಲ್ಲಿ ನಿಲ್ಲುತ್ತದೆ. ಸುತ್ತಲೂ ಮುಗಿಲೆತ್ತರ ಚಾಚಿದ ಹಿಮಾಲಯ ಪರ್ವತಶ್ರೇಣಿ. ಪಕ್ಕದಲ್ಲೇ ಹರಿವ ಚಂದ್ರಾ ನದಿ. ಮುಂದೆ ಭಾಗಾ ನದಿ ಜತೆ ಸೇರಿ ಇದು `ಚಂದ್ರಭಾಗಾ'ವಾಗುತ್ತದೆ. ಮುಚ್ಚಿದ ಕಿಟಕಿಯಿಂದಾಗಿ ಬಸ್ನಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದ ಹಿಮಗಾಳಿ, ಇಳಿದಾಗ ಒಂದು ಕ್ಷಣ ನಡುಗಿಸಿಬಿಡುತ್ತದೆ. ಆಗ ಆಪದ್ಬಾಂಧವನಾಗಿ ಕಾಣುವುದು `ಚಂದ್ರಾ ಧಾಬಾ'.

ಚಳಿಗಾಳಿಯಿಂದ ಕಂಗೆಟ್ಟು ಒಳಹೊಕ್ಕವರನ್ನು ಅಕ್ಕರೆಯಿಂದ ಆದರಿಸುತ್ತಾರೆ ದೋಜರ್ಿ ದಂಪತಿ. ಈ ಧಾಬಾದ ಚಂದ್ರ ದೋಜರ್ಿಮಾ ಮತ್ತು ಬೋದ್ ದೋಜರ್ಿ ಕಳೆದ ಮೂವತ್ತಾರು ವರ್ಷಗಳಿಂದ ಇಲ್ಲಿ ಸಾವಿರಾರು ಪ್ರವಾಸಿಗರನ್ನು ಸತ್ಕರಿಸಿದ್ದಾರೆ. ಇದನ್ನು ದಾಟಿದರೆ ಮುಂದೆ ಸುಮಾರು 100 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಹೊಟೇಲಾಗಲಿ, ವಸತಿ ಪ್ರದೇಶಗಳಾಗಲಿ, ಪೆಟ್ರೋಲ್ ಬಂಕ್ಗಳಾಗಲಿ ಸಿಗುವುದಿಲ್ಲ. ಹಾಗಾಗಿ ಎಲ್ಲ ಪ್ರಯಾಣಿಕರು ಇಲ್ಲಿ ಹಸಿವು, ದಾಹ ತಣಿಸಿಕೊಂಡೇ ಮುಂದೆ ಹೋಗುತ್ತಾರೆ. ದಿನಂಪ್ರತಿ ಇಲ್ಲಿ ಓಡಾಡುವ ಬಸ್ನ ಪ್ರಯಾಣಿಕರಷ್ಟೇ ಅಲ್ಲ, ಕಾಜಾಕ್ಕೆ ಹೋಗುವ ಟ್ಯಾಕ್ಸಿ, ಬೈಕ್ಗಳಲ್ಲಿ ತೆರಳುವ ಪ್ರವಾಸಿಗರು, ಸ್ಥಳೀಯ ನಿವಾಸಿಗಳು, ಚಾರಣಿಗರು ಎಲ್ಲ ಇಲ್ಲಿ ಹೊಟ್ಟೆಗೊಂದಿಷ್ಟು ಹಾಕಿಯೇ ಮುಂದೆ ಹೋಗುತ್ತಾರೆ. ಹಾಗೆ ನೋಡಿದರೆ ಇಲ್ಲಿ ಪ್ರವಾಸಿಗರನ್ನು ಸುಲಿಯಲು ಸಾಕಷ್ಟು ಅವಕಾಶವಿದೆ. ಆದರೆ ಈ ದಂಪತಿಗಳು ಇದಕ್ಕೆ ಹೊರತಾದವರು. ತಮ್ಮ ಪ್ರಾಮಾಣಿಕತೆಯಿಂದಲೇ ಪ್ರವಾಸಿಗರ ಮನ ಗೆದ್ದವರು. ದೋಜರ್ಿಯಂತೂ ಮಾತು ಮಾತಿಗೂ ಹಾಸ್ಯ ಮಾಡುತ್ತಾ, ಇಡೀ ವಾತಾವರಣಕ್ಕೇ ತಿಳಿನಗೆಯ ಸ್ಪರ್ಶ ನೀಡುತ್ತಾರೆ.

ನಗರದಿಂದ ಸಾಕಷ್ಟು ದೂರದಲ್ಲಿರುವ ಈ ಸ್ಥಳಕ್ಕೆ ಆಹಾರ ಪದಾರ್ಥದ ಸಾಗಣೆಯೇ ಹರಸಾಹಸದ ಕೆಲಸ. ಮನಾಲಿ-ಕಜಾ ರಸ್ತೆ ವಾಹನ ಓಡಾಟಕ್ಕೆ ತೆರೆದುಕೊಳ್ಳುವುದಕ್ಕೂ ಮೊದಲೇ ಇವರು ಧಾನ್ಯ, ಅಕ್ಕಿ, ಬೇಳೆ ಸಂಗ್ರಹದಲ್ಲಿ ತೊಡಗುತ್ತಾರೆ. ಬಳಿಕ ಸಾಗಾಟ. ವಾಹನ ಓಡಾಟ ಆರಂಭವಾದದ್ದೇ ತಡ ಇವರ ಧಾಬಾವೂ ತೆರೆದುಕೊಳ್ಳುತ್ತದೆ. ಜೂನ್ನಿಂದ ಅಕ್ಟೋಬರ್ 20ರವರೆಗೆ ತೆರೆದಿರುತ್ತದೆ. ಪ್ರವಾಸಿಗರ ಆತಿಥ್ಯಕ್ಕೆ ಸಿದ್ಧರಾಗಿ ಸ್ವಾಗತದ ನಗೆ ಚೆಲ್ಲುತ್ತಾರೆ ಈ ದಂಪತಿ. ದಿನವೊಂದಕ್ಕೆ ನೂರಕ್ಕಿಂತಲೂ ಅಧಿಕ ಮಂದಿಗೆ ಆಹಾರ ನೀಡಿ ಸತ್ಕರಿಸುತ್ತಾರೆ. ತಮ್ಮ ಗುಡಿಸಲಿನ ಇನ್ನೊಂದು ಪಾಶ್ರ್ವದಲ್ಲಿರುವ ಬೆಚ್ಚನೆಯ ಕೋಣೆಗಳಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯನ್ನೂ ಮಾಡುತ್ತಾರೆ. ಇಲ್ಲಿ ದಿನವೊಂದಕ್ಕೆ 13 ಜನ ಉಳಿದುಕೊಳ್ಳುವಷ್ಟು ಜಾಗವಿದೆ. ಅವರಿಗೆ ಆಹಾರದಿಂದ ಹಿಡಿದು ಬಿಸಿನೀರಿನವರೆಗೆ ಎಲ್ಲ ವ್ಯವಸ್ಥೆಯನ್ನೂ ದೋಜರ್ಿ ಮಾಡಿಕೊಡುತ್ತಾರೆ.

ದೋಜರ್ಿ ಊರು ಮನಾಲಿ ಸಮೀಪದ ಹಳ್ಳಿ. ಮದುವೆಯ ಹೊಸತರಲ್ಲಿ ಹವಾಮಾನ ವೈಪರೀತ್ಯದಿಂದ ಹೊಟ್ಟೆಹೊರೆದುಕೊಳ್ಳುವುದೇ ಕಷ್ಟವಾಗಿತ್ತು. ಅತಿಯಾದ ಮಳೆಯಿಂದ ಬೆಳೆಯೂ ಕೈಕೊಟ್ಟಿತ್ತು. ಯಾಕೋ ಕೃಷಿಯಿಂದ ಮೇಲುಬೀಳುವ ಲಕ್ಷಣ ಕಾಣಿಸದಾಗ, ತಕ್ಷಣಕ್ಕೆ ಹೊಳೆದದ್ದು ಧಾಬಾ ಆರಂಭಿಸುವ ಯೋಚನೆ. ಅವರಿದ್ದ ಊರಲ್ಲಾಗಲೇ ಧಾಬಾ, ಹೊಟೇಲ್ಗಳು ಸಾಕಷ್ಟಿದ್ದವು. ಅವುಗಳೇ ನಷ್ಟದಲ್ಲಿ ನಡೆಯುತ್ತಿದ್ದವು. ಆದರೆ ಈ ಭಾಗದಿಂದ ಹಿಮಾಲಯ ಚಾರಣಕ್ಕೆ ತೆರಳುವ ಮಂದಿಗೆ ಆಗ ಮಧ್ಯದಲ್ಲೆಲ್ಲೂ ಆಹಾರ ಸಿಗುತ್ತಿರಲಿಲ್ಲ. ಕಾಜಾ, ಚಂದ್ರತಾಲ್ ಕಡೆ ಹೋಗುವ ಪ್ರಯಾಣಿಕರಿಗೂ ಇದೇ ಸಮಸ್ಯೆ. ಎಲ್ಲಕ್ಕೂ ಮಧ್ಯದಲ್ಲಿರುವ ಬತಾಲ್ನಲ್ಲಿ ಧಾಬಾ ತೆರೆದರೆ ತಮ್ಮ ಹೊಟ್ಟೆಪಾಡಿನ ಜತೆಗೆ ಯಾತ್ರಿಕರಿಗೆ ಅನುಕೂಲವಾಗಬಹುದು ಎಂಬ ಯೋಚನೆ ತಲೆಗೆ ಬಂದಿದ್ದೇ ತಡ, ದಂಪತಿಗಳು ಅದರ ಸಿದ್ಧತೆಯಲ್ಲಿ ತೊಡಗಿದರು. ಈಗಲಾದರೆ ಮೊದಲಿನಷ್ಟು ಹಿಮವಿರುವುದಿಲ್ಲ. ಅವರು ಧಾಬಾ ತೆರೆಯುವ ಹೊತ್ತಿಗೆ ಹಿಮದಿಂದ ರಕ್ಷಣೆ ಪಡೆಯುವುದೇ ದೊಡ್ಡ ಸವಾಲಾಗಿತ್ತು. ಆದರೂ ಹುಂಬ ಧೈರ್ಯದಿಂದ ಸಾಕಷ್ಟು ತಯಾರಿಯಿಲ್ಲದೇ, ಪತ್ನಿ ಚಂದ್ರಾ ಹೆಸರಿನಲ್ಲೇ ಧಾಬಾ ತೆರೆದರು. ಆರಂಭದಲ್ಲಿ ಬಹಳ ಕಷ್ಟವಾದರೂ ಬರುಬರುತ್ತಾ ದೋಜರ್ಿ ದಂಪತಿಗಳ ಆತ್ಮವಿಶ್ವಾಸ ಬೆಳೆಯಿತು.

ಚಂದ್ರ-ದೋಜರ್ಿ, ವರ್ಷದ ಐದು ತಿಂಗಳು ಬತಾಲ್ನಲ್ಲಿ ಕಳೆದು, ದಟ್ಟ ಹಿಮ ಬೀಳುವ ಸಮಯಕ್ಕೆ ಸರಿಯಾಗಿ ಊರಿಗೆ ಹಿಂತಿರುಗುತ್ತಾರೆ. ಆಗ ಸಿಗುವ ಸಮಯದಲ್ಲಿ ದೇಸಿ ಹಾರಗಳನ್ನು ತಯಾರಿಸುತ್ತಾರೆ. ಮತ್ತೂ ಸಮಯ ಸಿಕ್ಕರೆ ಇತರ ಸ್ಥಳೀಯರಂತೆ ಉಣ್ಣೆ ಶಾಲು, ಸ್ವೆಟ್ಟರ್ ಹಣೆಯುತ್ತಾರೆ. ಧಾಬಾ ತೆರೆದ ಮೇಲೆ ಹಾರಗಳನ್ನು ಪ್ರವಾಸಿಗರಿಗೆ ಮಾರುತ್ತಾರೆ.

ಕ್ಷಣ ಕ್ಷಣಕ್ಕೂ ಬದಲಾಗುವ ಹವಾಮಾನ, ಜೋರಾಗಿ ಬೀಳುವ ಮಳೆಗೆ ಕುಸಿಯುವ ಪರ್ವತದ ಮಣ್ಣು, ಕೊರೆಯುವ ತಣ್ಣನೆಯ ಗಾಳಿ... ಇಂತಹ ಹವಾಮಾನ ವೈರುಧ್ಯಗಳಿಂದ ತುಂಬಿದ ಬತಾಲ್ನಲ್ಲಿ ದಿನ ನೂಕುವುದೇ ಸವಾಲು. ಆದರೆ ವಯಸ್ಸು ಐವತ್ತು ದಾಟಿದರೂ ದೋಜರ್ಿ ದಂಪತಿಗಳ ಮನಸ್ಸು ಪರ್ವತದಷ್ಟೇ ಸ್ಥಿರ. ಚಳಿ, ಮಳೆ, ಗಾಳಿಗೆ ಅಳುಕಿದವರಲ್ಲ. ಆ ಕೊರೆಯುವ ಚಳಿಗೆ, ಹಿಮಪರ್ವತದಿಂದ ಇಳಿದು ಬರುವ ಮರಗಟ್ಟಿಸುವ ನೀರಿನಿಂದಲೇ ಅಡುಗೆ, ಪಾತ್ರೆ ತೊಳೆಯುವುದು ಮಾಡುತ್ತಾರೆ. ಎಲ್ಲವನ್ನೂ ಸಹಜವಾಗಿಯೇ ತೆಗೆದುಕೊಂಡು, ಕೆಲಸವನ್ನು ಬಹುವಾಗಿ ಪ್ರೀತಿಸುತ್ತಾರೆ. ಅಷ್ಟೆಲ್ಲ ಕಷ್ಟಪಟ್ಟರೂ ಪ್ರವಾಸಿಗರಲ್ಲಿ ಹಣಕ್ಕಾಗಿ ದುಂಬಾಲು ಬೀಳುವವರಲ್ಲ. ಸ್ವಲ್ಪ ಹಣ ಕಡಿಮೆ ಬಿದ್ದರೂ, `ಪರ್ವಾಗಿಲ್ಲ' ಅನ್ನುವ ಹಾಗೆ ನಕ್ಕು ಸುಮ್ಮನಾಗುವರು.

ಮನಾಲಿಯಿಂದ ಕಾಜಾಕ್ಕೆ ಹೋಗುವ ದಾರಿ ನಡುನಡುವೆ ಬೆರಳೆಣಿಯ ಧಾಬಾಗಳು ಕಾಣಸಿಗುತ್ತವೆ. ನೆರಿಗೆಗಟ್ಟಿದ ಮುಖದಲ್ಲಿ ಪ್ರೀತಿಯ ನಗೆ ಸೂಸುವ ಪುಟ್ಟ ಕಣ್ಣಿನ ಜನರು ಸತ್ಕರಿಸುತ್ತಾರೆ. ಮನೆಮಂದಿಯೇ ಇಲ್ಲಿ ಅಡುಗೆಯಿಂದ ಹಿಡಿದು ಕ್ಲೀನಿಂಗ್ ಕೆಲಸದವರೆಗೆ ಎಲ್ಲವನ್ನೂ ಮಾಡುತ್ತಾರೆ. ಒಬ್ಬೊಬ್ಬರದ್ದು ಒಂದೊಂದು ಕಥೆ. ಅಚಲವಾಗಿ ನಿಂತ ಹಿಮಬೆಟ್ಟಗಳೇ ಇವರಿಗೆ ಮಾದರಿ, ಬದುಕು ಎಲ್ಲವೂ...

ಚಿತ್ರ, ಲೇಖನ: ಪ್ರಿಯಾ ಕೆವರ್ಾಶೆ
              ಬೆಂಗಳೂರು
(ಪ್ರಜಾವಾಣಿ ಸಾಪ್ತಾಹಿಕದಲ್ಲಿ ಪ್ರಕಟ)

Friday, November 30, 2012

ನಾಟ್ಕ ಮಾಡ್ತಾರೆ- ಥಿಯೇಟರ್ನಲ್ಲಿ ಯಂಗ್ ಸ್ಟಾರ್ಸ್

                             


ಕಣ್ಬಿಟ್ಟರೆ ಅದೇ ಜಗತ್ತು, ಅದೇ ಬದುಕು, ಎಂದಿನಂತೆ ತನ್ನ ಪಾತ್ರವೂ ಹಾಗೇ ಏರಿಳಿತವಿಲ್ಲದೇ ಸಾಗುತ್ತದೆ. ಜಾಸ್ತಿಯೆಂದರೆ ವೀಡಿಯೋ ಗೇಮ್, ಫ್ರೆಂಡ್ಸ್, ಮಾಲ್, ಸಿನಿಮಾ ಅಷ್ಟೆ. ಟೆನ್ಶನ್, ವಕರ್್ಲೋಡ್, ಎಕ್ಸಾಂ, ಪ್ರಮೋಶನ್ ಅನ್ನುವ ಕಿರಿಕಿರಿ ಇದರಿಂದ ಕೊಂಚ ದೂರಾದಂತೆ ಅನಿಸಿದರೂ ಸಂಪೂರ್ಣ ರಿಲೀಫ್? ಉಫ್, ಅದು ಈ ಜನ್ಮದಲ್ಲಿ ಸಾಧ್ಯವಾಗಲ್ಲ ಅನಿಸಿ, ಮನಸ್ಸು ಮತ್ತಷ್ಟು ಉದ್ವಿಗ್ನವಾಗುತ್ತದೆ. ಯಾಕೋ ಇದೆಲ್ಲದರಿಂದ ಕ್ಷಣಕಾಲವಾದರೂ ಹೊರಬರಬೇಕೆಂದು ಹಳೇ ಗೆಳೆಯನ ಬೆನ್ನು ಹತ್ತಿಹೊರಟಾಗ ಅಲ್ಲಿ ಹಳೇ ನೆನಪುಗಳ ಫಲಕು. ಶಾಲೆ- ಓದಲಾರದೇ ಮತ್ತೊಬ್ಬ ಓದುವುದನ್ನು ನೋಡಲಾಗದೇ ಓದಿದ್ದು, ಓಡುವಾಗ ಬಿದ್ದು ಮಂಡಿ ಒಡೆದಾಗ ಮಿಸ್ ಹಾಕಿದ ಟಿಂಚರ್ನ ಉರಿಗೆ ಜೀವ ಹೋದಂತಾಗಿದ್ದು, ಸ್ಕೂಲ್ ಡೇಗೆ ಕನ್ನಡ ಮೇಷ್ಟ್ರು ನಾಟಕ ಮಾಡಿಸಿದ್ದು, ಅಲ್ಲಿ ತನಗೆ ಸಿಕ್ಕ ದುರ್ಯೋಧನನ ಪಾತ್ರ, ಡೈಲಾಗ್ ನಡುವೆಯೇ ಪ್ರೇಕ್ಷಕರ ನಡುವೆ ಕುಳಿತ ಅಮ್ಮನನ್ನು ಹುಡುಕಿದ್ದು ..ಹೀಗೆ. ನೆನಪುಗಳಿಂದ ಈಚೆ ಬಂದರೆ ಅದೇ ವರ್ತಮಾನ. ಹಳೆಯದೆಲ್ಲ ಮುಗಿದುಹೋದ ಮಂಕು.
     
`ನಿಂಗೆ ನಾಟಕದಲ್ಲಿ ಅಂದಿನ ಇಂಟ್ರೆಸ್ಟ್ ಈಗ್ಲೂ ಇದೆಯಾ?' ಗೆಳೆಯ ಕೇಳಿದರೆ ಪೆಕರನಂತೆ ಅವನ ಮುಖ ನೋಡಿದ. ಈಗಿನ ಬದುಕಿಗೂ ನಾಟಕಕ್ಕೂ ಎತ್ತಲಿನ ಸಂಬಂಧ. ಬೆಳಗಾದರೆ ತಲೆತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಇಪ್ಪತ್ತೈದರ ಪ್ರಾಯದಲ್ಲೇ ಮುರುಟಿ ಹೋಗಿರುವ ಮನಸ್ಸು. ಇದೆಲ್ಲದರಿಂದ ತೀವ್ರ ಬದಲಾವಣೆ ಬೇಕನಿಸಿದ ಕ್ಷಣ,`ಯಾವುದಾದ್ರೂ ನಾಟಕಕ್ಕೆ ಹೋಗೋಣ ಬಾರೋ' ಅಂದ. ಗೆಳೆಯನ ಮನಸ್ಥಿತಿಯೂ ಇವನಿಗಿಂತ ಹೊರತಾದದ್ದಲ್ಲ. ಅವನೂ ಇವನ ನಾಟಕದಲ್ಲಿ ಅಭಿಮನ್ಯು ಪಾಟರ್ು ಮಾಡಿದವ ತಾನೇ. ಆಧುನಿಕ ಥಿಯೇಟರ್ ಒಳಗೆ ಅಡಿಯಿಟ್ಟರು. ಅಲ್ಲಿ ಯಾವುದೋ ಹವ್ಯಾಸಿ ನಾಟಕ. ಏನೇನೋ ನಿರೀಕ್ಷೆಯಲ್ಲಿ ಬಂದಿದ್ದ ಗೆಳೆಯರಲ್ಲಿ ಗೊಂದಲ. ಮೊದಲರ್ಧವಂತೂ ಏನೂ ಅರ್ಥವಾಗಲಿಲ್ಲ. ಎದ್ದುಹೋಗಬೇಕೆಂದುಕೊಂಡವರು ಯಾವುದೋ ಎಳೆತಕ್ಕೊಳಗಾದವರಂತೆ ಕುಳಿತರು. ನಿಧಾನಕ್ಕೆ ನಾಟಕ ಮನಸ್ಸಿಗಿಳಿಯತೊಡಗಿತು. ಹಾಗೇ ಕತ್ತಲಲ್ಲಿ ಕೂತು ಒಂದೂವರೆ ಗಂಟೆ ನಾಟಕ ನೋಡಿ ಮುಗಿಸಿದರು. ಬೇರೆ ಜಗತ್ತಿಗೆ ಹೋಗಿಬಂದಂತನಿಸಿತು. ಥಿಯೇಟರ್ನಿಂದ ಹೊರಬಂದರೂ ನಾಟಕದ ಮೂಡ್ನಿಂದ ಹೊರಬರಲಾಗಲಿಲ್ಲ. ಮತ್ತೆ ಥಿಯೇಟರ್ ಭೇಟಿ ಜಾಸ್ತಿಯಾಯಿತು. ಇವರೊಂದಿಗೆ ಉಳಿದ ಗೆಳೆಯರೂ ಜೊತೆಯಾದರು. ಕೊನೆಗೆ ಇವರದೇ ಟೀಂ ಹುಟ್ಟಿಕೊಂಡಿತು.

 ರಂಗಭೂಮಿಯಿಂದ ಸಂಪೂರ್ಣ ಹೊರಗಿದ್ದ ಒಂದು ಪಂಗಡ ನಾಟಕಕ್ಕೆ ಹತ್ತಿರವಾದ ಬಗೆಯಿದು. ಅದೊಂದು ಕಾಲವಿತ್ತು. ಯುವಜನತೆಗೆ ಹಳ್ಳಿಯ ಏಕತಾನತೆಯ ಬದುಕು ಅನಿವಾರ್ಯವಾಗಿತ್ತು. ಆಗಾಗ ಊರಿಗೆ ಬರುತ್ತಿದ್ದ ಕಂಪೆನಿ ನಾಟಕಗಳು, ಟೆಂಟ್ ಸಿನಿಮಾಗಳಷ್ಟೇ ಮನರಂಜನಾ ಮಾಧ್ಯಮವಾಗಿತ್ತು. ವರ್ಷಕ್ಕೊಮ್ಮೆ ಊರಲ್ಲಿ ನಡೆಯುವ ನಾಟಕದಲ್ಲಿ ಪುಟ್ಟ ಪಾತ್ರ ಮಾಡಿದರೂ ಧನ್ಯತಾಭಾವ. ಈಗ ಹಾಗಲ್ಲ. ಯುವಕರ ಮುಂದೆ ಮನರಂಜನೆಗೆಂದೇ ನೂರಾರು ಆಪ್ಶನ್ಗಳಿವೆ. ಕಂಪ್ಯೂಟರ್ ಎಂಬ ಮಹಾನ್ ಮಾಂತ್ರಿಕನ ಮಂತ್ರದಂಡದಡಿ ಬಂಧಿಗಳಾಗದವರಿಲ್ಲ. ಮಾಲ್, ಮಲ್ಟಿಫ್ಲೆಕ್, ಮ್ಯಾಕ್ಡೊನಾಲ್ಡ್, ಪಿಜ್ಜಾ ಹಟ್ ಅಂತ ಟೈಂಪಾಸ್ಗೆ ನೂರಾರು ತಾಣಗಳು. ಆದರೂ ವೀಕೆಂಡ್ಗಳಲ್ಲಿ ಹಳ್ಳಿ ಕಡೆಗೆ, ಹಸಿರಿನ ಕಡೆಗೆ ಮುಖಮಾಡುವ ಮಂದಿ. ಆಹ್! ಇದೆಂಥಾ ಕಾಂಟ್ರಿಡಿಕ್ಷನ್. ರಂಗಭೂಮಿಗೆ ಯುವಕರ ದಂಡು ಲಗ್ಗೆ ಇಟ್ಟಿರುವುದೂ ಇಂತಹದ್ದೇ ಸನ್ನಿವೇಶದಲ್ಲಿ.

ಹತ್ತು ವರ್ಷದ ಹಿಂದಿಗಿಂತ ಇಂದಿನ ರಂಗಭೂಮಿಯ ಹರಿವು ಹೆಚ್ಚು ತೀವ್ರವಾಗಿದೆ. ಹವ್ಯಾಸಿ ರಂಗಭೂಮಿಯಂತೂ ಹೊಸತನದಿಂದ ಸಮೃದ್ಧವಾಗಿದೆ. ಯುವಕರು ಥಿಯೇಟರ್ನಲ್ಲಿ ಸಕ್ರಿಯರಾಗಿದ್ದಾರೆ. ಅವರದೇ ತಂಡಗಳು ಹುಟ್ಟಿಕೊಂಡಿವೆ.
`ಪ್ರಸಂಗ'`ರಂಗಸೌರಭ'`ರೂಪಾಂತರ'ದಂತಹ ತಂಡಗಳಲ್ಲಿ ಹೆಚ್ಚಿನವರೆಲ್ಲ ಹೊಸಬರೇ ಆದರೆ, `ರಂಗ ನಿರಂತರ' ದಂತಹ ಹಳೆಯ ತಂಡಗಳಲ್ಲೂ 30ಕ್ಕಿಂತ ಕಡಿಮೆ ವಯೋಮಾನದವರೇ ಮುಕ್ಕಾಲು ಪಾಲಿನಷ್ಟಿದ್ದಾರೆ. ಅವರಿಗೆ ಮಾಲ್, ಶಾಪಿಂಗ್ನಲ್ಲಿ ಸಿಗದ ಮನಶ್ಶಾಂತಿ ಇಲ್ಲಿ ಸಿಗುತ್ತದೆ. ಪಾತ್ರಗಳಲ್ಲಿ ತನ್ಮಯರಾಗುತ್ತಾ, ಅದನ್ನು ತಮ್ಮೊಳಗೆ ಆವಾಹಿಸಿಕೊಂಡು ತಾವೇ ಪಾತ್ರವಾಗುತ್ತಾ, ಕೆಲವೊಮ್ಮೆ ಪಾತ್ರದ ಹೊರನಿಂತು ಅದರ ಆಳ ಅಗಲ ಅರಿತು ಅಭಿನಯಿಸುವ ಚತುರತೆ ಇವರಲ್ಲಿದೆ.

ಸಾಮಾನ್ಯವಾಗಿ ರಂಗತಂಡವೊಂದು ತನ್ನ ಪ್ರಯೋಗವನ್ನು ಆರಂಭಿಸುವ ಮೊದಲು ಕೆಲವು ಹಂತಗಳಿರುತ್ತವೆ. ಆರಂಭದಲ್ಲಿ ಯುವಜನರಿಗಾಗಿಯೇ ತರಬೇತಿ ಶಿಬಿರ ನಡೆಸುತ್ತದೆ. ತಜ್ಞರು ರಂಗದ ವಿವಿಧ ಪಟ್ಟುಗಳನ್ನು ಕಲಿಸುತ್ತಾರೆ. ಅಳುಕು, ಹಿಂಜರಿಕೆಗಳನ್ನು ದೂರಮಾಡುವ ಆಟ, ಕಸರತ್ತುಗಳಿರುತ್ತವೆ. ಯುವತಿಯರ ಪ್ರತಿಭೆ ಹೊರತೆಗೆಯುವ ಕೆಲಸ ಇಲ್ಲಾಗುತ್ತದೆ. ಒಂದು ರೀತಿಯ ಪರ್ಸನಾಲಿಟಿ ಡೆವಲಂಪ್ಮೆಂಟ್ ಶಿಬಿರವೂ ಹೌದು. ತರಬೇತಿ ಪಕ್ಕಾ ಆದ ಬಳಿಕ `ಸ್ಕ್ರಿಪ್ಟ್ ರೀಡಿಂಗ್'. ಆ ಬಳಿಕ ಪಾತ್ರ ಹಂಚಿಕೆ, ಅಭಿನಯ..ಹೀಗೆ. ಇದು ಯುವ ಜನರನ್ನು ರಂಗಭೂಮಿಗೆ ಇನ್ನಷ್ಟು ಹತ್ತಿರವಾಗಿಸುವ ಪ್ರಕ್ರಿಯೆ. ಅಥವಾ ರಂಗಪ್ರವೇಶದ ಸಿದ್ಧತೆ. ಇದು ನಾಟಕದ ತನ್ಮಯತೆಗೂ ಸಹಕಾರಿ. ಹೀಗೆ ತರಬೇತಿ ಪಡೆಯುವ ಮಂದಿ ಪಾತ್ರಗಳನ್ನು ಮಾಡುತ್ತಾ, ಸುಪ್ತಮನಸ್ಸಿನ ಉದ್ವೇಗಗಳನ್ನು ಅರಿವಿಲ್ಲದಂತೆ ಇಲ್ಲಿ ಸೃಜನಾತ್ಮಕವಾಗಿ ಬಳಸಿಕೊಳ್ಳುತ್ತಾ ತಾವೂ ಬೆಳೆಯುತ್ತಾರೆ. ಒತ್ತಡ, ಕಿರಿಕಿರಿ, ಉದ್ವೇಗಗಳೆಲ್ಲ ಬೇರೆಯದೇ ರೂಪದಲ್ಲಿ ಹೊರಬರುತ್ತದೆ.

 ಇನ್ನು ಕೆಲಮಂದಿ ಜನಪ್ರಿಯವಾಗಿರುವ ಸೀರಿಯಲ್ಗಳಿಗೆ ಹೋಗುವ ಉದ್ದೇಶಕ್ಕೂ ರಂಗಭೂಮಿಯನ್ನು ಮೆಟ್ಟಿಲಾಗಿಸಿಕೊಳ್ಳುವುದುಂಟು. ನಾಟಕದಲ್ಲಿ ನಟನೆಯ ಪಾಠ ಕಲಿತು ಸೀರಿಯಲ್ ಲೋಕದಲ್ಲಿ ಮಿಂಚುವ ಕನಸು ಇವರದು. ಸಿನಿಮಾ ಹುಚ್ಚಿರುವವರೂ ಇಲ್ಲಿಗೆ ಬರುವುದುಂಟು. ಆದರೆ ಇಂಥವರು ರಂಗಭೂಮಿಯಲ್ಲಿ ಸ್ಥಿರವಾಗಿ ನಿಲ್ಲುತ್ತಾರೆಂದು ನಂಬುವ ಹಾಗಿಲ್ಲ.
ಇನ್ನು ಫ್ರೆಂಡ್ಸ್ ಬಲವಂತಕ್ಕೆಂದು ಥಿಯೇಟರ್ಗೆ ಬಂದವರು ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡು ರಂಗಭೂಮಿಯವರೇ ಆಗಿಹೋಗಿದ್ದಾರೆ. ಕರೆತಂದ ಗೆಳೆಯರು ರಂಗಬಿಟ್ಟು ಹೋದರೂ ಇವರು ರಂಗಭೂಮಿಗೆ ಅಂಟಿಕೊಂಡೇ ಇದ್ದಾರೆ. ಈ ಪ್ರಪಂಚಕ್ಕೆ ಕಾಲಿಟ್ಟ ಮೇಲಿಂದ ಇವರ ಅಳುಕು ಹಿಂಜರಿಕೆ ಜಾಗದಲ್ಲಿ ಆತ್ಮವಿಶ್ವಾಸದ ಛಾಪು ಮಾಡಿದೆ. ಮೊದಲೆಲ್ಲ ಸ್ಟೇಜ್ ಹತ್ತಿದರೆ ಕೈಕಾಲು ನಡುಗಿ ಬಾಯಿಪಸೆ ಆರಿದಂತಾಗಿ ತಡವರಿಸುತ್ತಿದ್ದವರು ಈಗ ಎಷ್ಟು ಪ್ರೇಕ್ಷಕರಿದ್ದರೂ ನಿಭರ್ಿಡೆಯಿಂದ ಮಾತಾಡಬಲ್ಲರು. ಸಿಟ್ಟು, ಉದ್ವೇಗ ಹೊತ್ತುಕೊಂಡೇ ಮನೆಗೆ ಹಿಂತಿರುಗುತ್ತಿದ್ದವರು ಈಗ ಖುಷಿಖುಷಿಯಿಂದ ನಗುತ್ತಾ ಹೋಗುತ್ತಾರೆ. ಈ ಬೆಳವಣಿಗೆ ಮನೆಯವರಿಗೂ ಅಚ್ಚರಿ ತಂದಿದೆ.

****************
ಬೈಟ್ :
ಭರತ್ ದಿವಾಕರ್ - ಯುವ ರಂಗಕಮರ್ಿ, `ಒಪೇರಾಹೌಸ್' ನಾಟಕ ನಿದರ್ೇಶಕ
ಈಗ ರಂಗಭೂಮಿ ಹೊಸಬರಿಂದಲೇ ತುಂಬಿ ಹೋಗಿದೆ. ನಮ್ಮ `ರಂಗಸೌರಭ' ತಂಡದಲ್ಲಿ ಶೇ.95ರಷ್ಟು ಮಂದಿ 25ರ ಕೆಳಗಿನವರು. ಇವರಿಗೆ ಅಭಿನಯ ಕಲಿಸುವುದು ಸುಲಭ. ಫೇಸ್ಬುಕ್ನಂತಹ ತಾಣಗಳಲ್ಲಿ ರಂಗಕ್ಕೆ ಸಂಬಂಧಪಟ್ಟ ವಿಷಯ ಹಾಕಿದರೆ ಸಾಕು, ನೆಟ್ವಕರ್ಿಂಗ್ ತನ್ನಿಂದ ತಾನೇ ಬೆಳೆಯತ್ತೆ. ನಾಟಕ ಪ್ರದರ್ಶನಕ್ಕೆ ಮೊದಲಿನ ಹಾಗೆ ಕಲಾಕ್ಷೇತ್ರಕ್ಕೇ ಜೋತುಬೀಳಬೇಕಿಲ್ಲ. ರಂಗಶಂಕರ, ಕೆ.ಎಚ್. ಕಲಾಸೌಧ ಸೇರಿದಂತೆ ಹತ್ತಾರು ಕಡೆ ಥಿಯೇಟರ್ ಆಕ್ಟಿವಿಟಿಗೆ ಅವಕಾಶ ಸಿಗುತ್ತದೆ. ಮೊದಲಿದ್ದ ರಿಸ್ಟ್ರಿಕ್ಟೆಡ್ ಆಡಿಯನ್ಸ್ ಈಗಿಲ್ಲ. ಎಲ್ಲ ವರ್ಗದ ಜನರೂ ನಾಟಕಕ್ಕೆ ಬರುತ್ತಾರೆ. ಇದರಿಂದ ಆಥರ್ಿಕವಾಗಿಯೂ ರಂಗಭೂಮಿ ಬೆಳೆಯುವುದು ಸಾಧ್ಯವಾಗಿದೆ.

ಪನ್ನಗ ವಿಠಲ್ - ನಾಟಕ, ಕಿರುತೆರೆ ಕಲಾವಿದೆ
ನನಗೆ ಸೀರಿಯಲ್ ಫೀಲ್ಡ್ನಲ್ಲಿ ಮೊದಲಿಂದಲೂ ಆಸಕ್ತಿ ಇತ್ತು. ಅಭಿನಯ ಕಲಿಯಲಿಕ್ಕೆಂದು ಥಿಯೇಟರ್ಗೆ ಬಂದೆ. ಇಲ್ಲಿ ಬಂದ ಮೇಲೆ ಬೇರೆಯದೇ ಲೋಕಕ್ಕೆ ಬಂದಂತಾಯ್ತು. ಟ್ರೈನಿಂಗ್ ನಿಂದ ಹಿಡಿದು ನಾಟಕ ಪ್ರದರ್ಶನದವರೆಗಿನ ಹಂತ ನನಗೊಂದು ಹೊಸ ವ್ಯಕ್ತಿತ್ವ ಕೊಟ್ಟಿತು. ರಂಗಭೂಮಿಗೆ ದೊಡ್ಡ ಸಲಾಂ .

ಶ್ರೀಪಾದ - ಯುವ ರಂಗಕಲಾವಿದ, ವೃತ್ತಿಯಲ್ಲಿ ಮೆಡಿಕಲ್ ರೆಪ್
ನಾನು ಥಿಯೇಟರ್ಗೆ ಮೊದಲ ಎಂಟ್ರಿ ಕೊಟ್ಟಿದ್ದು ಗೆಳೆಯರ ಮೂಲಕ. ಈಗ ಎಷ್ಟೇ ಕೆಲಸದ ಒತ್ತಡವಿದ್ದರೂ ಅದನ್ನು ಬದಿಗಿಟ್ಟು ರಂಗಕ್ರಿಯೆಯಲ್ಲಿ ಮಗ್ನನಾಗುತ್ತೇನೆ. ಇಲ್ಲಿ ಬಂದ ಮೇಲೆ ಹೊರಹೋಗುವುದೇ ಕಷ್ಟ. ಮತ್ತೊಂದು ವಿಷ್ಯ ಅಂದ್ರೆ ಇದು ನಾವು ಕಷ್ಟ ಪಟ್ಟು ಮಾಡೋದಲ್ಲ. ಇಷ್ಟಪಟ್ಟು ಮಾಡೋದು. ಇಲ್ಲಿ ದುಡ್ಡು ಬರಲ್ಲ. ನಾಟಕದಿಂದ ಹೊಟ್ಟೆಹೊರೆಯೋದು ಕನಸಿನ ಮಾತು. ಆದರೆ ಇಲ್ಲಿ ಸಿಗೋ ಖುಷಿ, ನೆಮ್ಮದಿ ನಂಗೆ ಬೇರೆಲ್ಲೂ ಸಿಕ್ಕಿಲ್ಲ.

(`ವಿಜಯವಾಣಿ' ನವೆಂಬರ್ 28ರ `ಮಸ್ತ್' ಪುರವಣಿಯಲ್ಲಿ ಪ್ರಕಟ)

Wednesday, August 10, 2011

ಕರ್ಣ



ಕರ್ಣ...ಈಗ ನೋಡಿದರೆ ಅವನು ಗೆಳೆಯನಂತಿದ್ದ ಅನಿಸುತ್ತದೆ. ನನಗಿಂತ ನಾಕೈದು ವರ್ಷ ದೊಡ್ಡವನಿರಬಹುದು. ಅಜ್ಜನ ಮನೆಗೆ ಕೆಲಸಕ್ಕೆ ಬರುತ್ತಿದ್ದ ಸಂಕಮ್ಮನ ಅಕ್ಕನ ಮಗ. ಬರಿಗಾಲು, ಲಾಡಿಹಾಕಿದ ಗಟ್ಟಿ ಚಡ್ಡಿ, ನೀರುಕಲೆಯಿದ್ದರೂ ಸ್ವಚ್ಛವಾಗಿದ್ದ ಬಟ್ಟೆ, ಉರುಟುರುಟು ಮುಖ...ಆ ಮುಖ ಈಗ ಸ್ಪಷ್ಟವಾಗುವುದಿಲ್ಲ.

ಅವನಿಗೆ `ಕರ್ಣ' ಅನ್ನುವ ಆ ಚೆಂದದ ಹೆಸರನ್ನು ಯಾರಿಟ್ಟರೋ. ಸ್ವಭಾವದಲ್ಲೂ ಸ್ವಲ್ಪ ಮಹಾಭಾರತದ ಕರ್ಣನನ್ನೇ ಹೋಲುತ್ತಿದ್ದ. ಅಷ್ಟು ಸಣ್ಣ ಹುಡುಗ ಕೆಲಸದಲ್ಲೂ ಚೂಟಿ. ಆ ಮಾರಾಯ ಸುಮ್ಮನಿದ್ದದ್ದು ನಾನು ನೋಡಿಲ್ಲ. ಏನೂ ಕೆಲಸವಿಲ್ಲದಿದ್ದರೆ ಉಗುರು ಕಚ್ಚುವ ಅಭ್ಯಾಸ. ಕಚ್ಚಿ ಕಚ್ಚಿ ಅವನ ಉಗುರು ಉದ್ದವೇ ಬರುತ್ತಿರಲಿಲ್ಲ. ಅಜ್ಜನ ಮನೆಯ ಎದುರಿಗಿದ್ದ ಪೇರಳೆ ಮರ ಅವನ ಪ್ರೀತಿಯ ಸ್ಥಳ. ದಿನಕ್ಕೊಮ್ಮೆಯಾದರೂ ಆ ಮರ ಹತ್ತದಿದ್ದರೆ ಅವನಿಗೆ ನಿದ್ದೆ ಬರುತ್ತಿರಲಿಲ್ಲ. ಎಷ್ಟು ತುದಿಯಲ್ಲಿ ಪೇರಳೆ ಹಣ್ಣು ಬಿಟ್ಟಿದ್ದರೂ ಕ್ಯಾರೇ ಇಲ್ಲ. ಸಪೂರದ ಗೆಲ್ಲಿನ ಮೇಲೆ ನಿಂತು ಪೇರಳೆಗೆ ಕೈಚಾಚುವಾಗ, ಬಿದ್ದೇಬಿಡುತ್ತಾನೆ ಅನಿಸುತ್ತಿತ್ತು. ಆದರೆ ಅವ ಅಷ್ಟೇ ಚಾಲಾಕಿನಿಂದ ಪೇರಳೆ ಕೊಯ್ದು ಕಿಸೆಗೆ ಹಾಕುತ್ತಿದ್ದ. ಕರ್ಣನನ್ಯಾರಾದರೂ ಹುಡುಕುತ್ತಿದ್ದರೆ, `ಪೇರಳೆ ಮರದಲ್ಲಿರಬಹುದು' ಎಂಬ ಉತ್ತರ ಮೊದಲು ಬರುತ್ತಿತ್ತು.

ಒಮ್ಮೆ ಹೀಗಾಯ್ತು. ಕರ್ಣ ಆಗಷ್ಟೇ ಹಂಡೆಗೆಲ್ಲ ನೀರು ತುಂಬಿಸಿ, ಎಂದಿನಂತೆ ಪೇರಳೆ ಮರದ ಗೆಲ್ಲೊಂದರಲ್ಲಿ ಕೂತು ಪೇರಳೆ ಅಗಿಯುತ್ತಿದ್ದ. ಮೂಲೆಮನೆ ಇಸುಬು ತೋಟದ ಕೆಲಸ ಮುಗಿಸಿ ಪೇರಳೆ ಮರದಡಿಯಿಂದಾಗಿ ಮನೆಗೆ ಹೋಗುತ್ತಿದ್ದ. ಏನಕ್ಕೋ ಒಮ್ಮೆ ಮೇಲೆ ನೋಡಿ ಕರ್ಣನತ್ತ ನೋಡಿ ನಕ್ಕು, ಪಕ್ಕ ನೋಡಿದವನು, `ಹಾವು ಹಾವು ..' ಅಂತ ಜೋರಾಗಿ ಬೊಬ್ಬೆಹೊಡೆದ. ಕರ್ಣ ಅತ್ತ ನೋಡುತ್ತಾನೆ. ದಪ್ಪದ ಕಪ್ಪು ಹಾವೊಂದು ಪಕ್ಕದ ಗೆಲ್ಲಿಗೇ ಸುತ್ತಿಕೊಂಡಿದೆ. ಆ ಕ್ಷಣ ಹೆದರಿ ಏನು ಮಾಡುವುದೆಂದು ಗೊತ್ತಾಗದೇ ಕೈಕಾಲು ನಡುಗತೊಡಗಿತು. ಕಣ್ಣುಕತ್ತಲೆ ಬಂದಂತಾಗಿ ಕೆಳಗೆ ಬಿದ್ದೇಬಿಟ್ಟ. ಪುಣ್ಯಕ್ಕೆ ಕಾಲು ಗಂಟು ತರಚಿದ್ದು ಬಿಟ್ಟರೆ ದೊಡ್ಡಪೆಟ್ಟೇನೂ ಆಗಲಿಲ್ಲ.

ಇನ್ನಾದರೂ ಆ ಮರ ಹತ್ತಬೇಡ ಮಾರಾಯ ಅಂತ ಅಜ್ಜ ಬುದ್ದಿ ಹೇಳಿದ್ದೇ ಬಂತು. ಕಾಲು ಸರಿಯಾಗುವ ಮೊದಲೇ ಮತ್ತೆ ಮರ ಹತ್ತಿದ್ದ. `ಅವನು ಹುಟ್ಟಾ ಮಂಗ' ಅಂತ ಅಜ್ಜ ಗೊಣಗುತ್ತಿದ್ದರು.

ಕರ್ಣನ ಅಮ್ಮನ ಹೆಸರು ಕಮಲ ಅಂತ. ನಾನವಳನ್ನು ನೋಡಿದ ನೆನಪಿಲ್ಲ. ಅವಳು ಕರ್ಣನನ್ನು ನೋಡಲು ಬರುತ್ತಿದ್ದದ್ದು ಕಡಿಮೆ. ಅವಳಿದ್ದದ್ದು ಕನ್ಯಾನದಲ್ಲಿ. ಅಜ್ಜನ ಮನೆ ಮೇಲಿದ್ದ ಪದವನ್ನು ದಾಟಿದರೆ ಸಿಗುವುದು ಕಳೆಂಜಿಮಲೆ ಕಾಡು. ಒಂದು ಕಾಲಕ್ಕೆ ಹೆಬ್ಬುಲಿಯಿದ್ದ ಕಾಡದು. ಈಗ ಬೋಳುಗುಡ್ಡ. ಫಾರೆಸ್ಟಿವರು ನೆಟ್ಟ ಒಂದಿಷ್ಟು ಗಾಳಿಗಿಡ, ಅಕೇಶಿಯಾ ಗಿಡಗಳನ್ನು ಬಿಟ್ಟರೆ,ಒಂದಿಷ್ಟು ಸಣ್ಣಪುಟ್ಟ ಮರಗಳಿವೆಯಷ್ಟೇ. ಕಳಂಜಿಮಲೆ ಕಾಡನ್ನು ಹತ್ತಿ ಇಳಿದರೆ ಆ ಬದಿಗಿರುವುದು ಕನ್ಯಾನ. ಸಣ್ಣ ಊರು. ಕರ್ಣ ತಿಂಗಳಿಗೊಮ್ಮೆ ಅಲ್ಲಿಗೆ ಹೋಗಿ ಬರುತ್ತಿದ್ದ. ಒಮ್ಮೊಮ್ಮೆ ಪೆಪ್ಪರಮೆಂಟು ತಂದುಕೊಡುತ್ತಿದ್ದ. ಇಲ್ಲವಾದರೆ ನೆಲ್ಲಿಕಾಯಿ. ಪೆಪ್ಪರಮೆಂಟನ್ನು ಚಪ್ಪರಿಸಿ ತಿನ್ನುತ್ತಿದ್ದ ನನಗೆ ನೆಲ್ಲಿಕಾಯಿ ಅಷ್ಟಕ್ಕಷ್ಟೇ. ಕರ್ಣ ಕೊಟ್ಟ ನೆಲ್ಲಿಕಾಯನ್ನು ಅಮ್ಮ, ಚಿಕ್ಕಮ್ಮ ಇಷ್ಟಪಟ್ಟು ತಿನ್ನುತ್ತಿದ್ದರು.

ಇಲ್ಲಿ ಕರ್ಣ ಇದ್ದದ್ದು ಸಂಕಮ್ಮನ ಮನೆಯಲ್ಲಿ. ತಗ್ಗಿನಲ್ಲಿದ್ದ ಅಜ್ಜನ ಮನೆಯಿಂದ ಮೇಲೆ ಹತ್ತಿ ಬ್ಯಾರಿಗಳ ಗದ್ದೆ ದಾಟಿದರೆ ಸಿಗುವ ಮೊದಲ ಮನೆ ಮಮ್ಮದೆ ಬ್ಯಾರಿಯದ್ದು. ಎರಡನೇ ಮನೆ ಸಂಕಮ್ಮಂದು. ಮಣ್ಣಿನ ಮನೆ. ಸೆಗಣಿ ಬಳಿದು ಚೆನ್ನಾಗಿ ಗುಡಿಸಿದ್ದ ಅಂಗಳದಲ್ಲಿ ಅಲ್ಲಲ್ಲಿ ಕೋಳಿ ಹಿಕ್ಕೆ. ಚಪ್ಪಲಿ ಇಲ್ಲದೆ ಹೋದರೆ ಅಂಟಿನಂತೆ ಕಾಲಿಗಂಟಿಕೊಳ್ಳುತ್ತಿತ್ತು. ಪಕ್ಕಕ್ಕೆ ತೆಂಗಿನ ಸಸಿ. ಆಗಾಗ ಹೂಬಿಡುತ್ತಿದ್ದ ಅರಸಿನ ಬಣ್ಣದ ಅಬ್ಬಲ್ಲಿಗೆ ಗಿಡ, ಮದರಂಗಿ ಗಿಡ. ಒಂದೆರಡು ಬಾರಿ ಕರ್ಣ ಅದರ ಎಲೆಕೊಯಿದು ಕೊಟ್ಟಿದ್ದ.

ನಮಗೆಲ್ಲ ಆಗ ಮದರಂಗಿ ಹಾಕಿಕೊಳ್ಳುವ ಹುಚ್ಚು. ಹಳ್ಳಿಯಾದ ಕಾರಣಕ್ಕೋ ಏನೋ, ಆಗೆಲ್ಲ ಮೆಹಂದಿ ಕೋನ್ಗಳ ಬಳಕೆ ನಮಗೆ ತಿಳಿದಿರಲಿಲ್ಲ. ಮದುರಂಗಿ ಗಿಡದ ಎಲೆ ಕೊಯ್ದು, ಅದಕ್ಕೆ ಟೀ ಡಿಕಾಕ್ಷನ್, ಕೆಂಪಿರುವೆ ಮತ್ತೂ ಏನೇನೆಲ್ಲ ಹಾಕಿ ಕಲ್ಲಿನಲ್ಲಿ ಅರೆಯುತ್ತಿದ್ದರು. ನಾವೆಲ್ಲ ಅರೆಯುವಷ್ಟು ದೊಡ್ಡವರಲ್ಲದ ಕಾರಣ ನಮಗೆ ಶಾಲೆಯಲ್ಲಿ ಬೇರೆ ಮಕ್ಕಳ ಕೈ ನೋಡಿ ಆಸೆ ಬಿಡುವುದಷ್ಟೇ ಆಗಿತ್ತು. ಆದರೂ ಕರ್ಣ ಕೊಟ್ಟ ಮದುರಂಗಿ ಎಲೆಯನ್ನು ಕೊಟ್ಟಿಗೆಯ ಹಿಂದಿದ್ದ ಕಲ್ಲಿನಲ್ಲಿ ಜಜ್ಜಿ ಕೈಗೆ ಹಾಕಿಕೊಳ್ಳುತ್ತಿದ್ದೆ. ಹೌದೋ ಅಲ್ಲವೋ ಎಂಬಂತೆ ನಸು ಹಳದಿ ರಂಗು ಬರುತ್ತಿತ್ತು. ಅಜ್ಜನ ಮನೆಯೊಳಗೆ ಅದಕ್ಕೆ ಪ್ರವೇಶ ಇರಲಿಲ್ಲ. ಮದರಂಗಿಯನ್ನು ಅಜ್ಜ, ಅಜ್ಜಿ ಎಲ್ಲ ಅಸ್ಪ್ರಶ್ಯವಾಗಿ ಕಾಣುತ್ತಿದ್ದರು.

ರಂಜಾನ್ ಹಬ್ಬದ ದಿನ ಮದರಂಗಿ ಕೊಯಿದು ಕೊಡಲು ಜುಬ್ಬಿ, ಯಾಸ್ಮಿನ್ ಕರ್ಣನಿಗೆ ದುಂಬಾಲು ಬೀಳುತ್ತಿದ್ದರು. ಜೋರು ಮಳೆಬಂದು ನಿಂತಾಗ ತುಸು ಎತ್ತರಕ್ಕೆ ವಿಶಾಲವಾಗಿ ಹಬ್ಬಿದ ಮದುರಂಗಿ ಗಿಡದಡಿ ನಾವು ಒಂದಿಷ್ಟು ಮಕ್ಕಳು ಓಡಿ ಹೋಗಿ ನಿಂತುಬಿಡುತ್ತಿದ್ದೆವು. ಆಗಾಗ ಬೀಸುವ ಗಾಳಿಗೆ ಎಲೆಗಳಿಂದ ನೀರು ಮೈಮೇಲೆ ಬಿದ್ದಾಗ ಕಚಗುಳಿಯಿಟ್ಟಂತೆ ನಗುತ್ತಿದ್ದೆವು. ಈ ಗಿಡದ ಪಕ್ಕದಲ್ಲೇ ಕೊಟ್ಟಿಗೆ. ಅಲ್ಲಿ ಬಟ್ಟಿ ಮುಚ್ಚಿದಲ್ಲಿಂದಲೇ ಕ್ಕೊಕ್ಕೋ ಎನ್ನುತ್ತಿದ್ದ ಕೋಳಿ.

ಇನ್ನು ಮಣ್ಣಿನ ಮನೆಯೊಳಗೆ ಹೋದರೆ ಎದುರಲ್ಲೇ ಅಡಿಕೆ ಮರದ ತಟ್ಟಿಯ ಮೇಲೆ ಹರಡಿದ್ದ ಕೊರಗಜ್ಜನ ಕೋಮಣ (ಲಂಗೋಟಿ). ಕೊರಗಜ್ಜ ಕರ್ಣನ ಅಜ್ಜ. ಅಜ್ಜನ ಮನೆಯಲ್ಲಿ ಭೂತದ ಕೋಲ ನಡೆಯುವಾಗ ಅವನಿಗೆ ಮೈಮೇಲೆ ದರ್ಶನ ಬರುತ್ತಿತ್ತು. ಕೋಮಣದ ಪಕ್ಕದಲ್ಲೇ ಕರ್ಣನ ಹರಿದ ಬಟ್ಟೆಗಳು. ನೆಲದಲ್ಲಿ ಬೀಡಿಎಲೆ ತಟ್ಟೆ. ಸಂಕಮ್ಮ ಬಿಡುವಿದ್ದಾಗಲೆಲ್ಲ ಸ್ಟೀಲಿನ ಉಗುರನ್ನು ಬಿಸಿ ಮಾಡಿ ಉಗುರಿಗೆ ಅಂಟಿಸಿ, ರಪ ರಪನೆ ಬೀಡಿ ಕಟ್ಟುತ್ತಿದ್ದಳು.

ಮಣ್ಣಿನ ಮನೆಯಾದ ಕಾರಣ ಕರ್ಣನ ಮನೆಯೊಳಗೆ ಕಾಲಿಟ್ಟರೆ ತಂಪು ತಂಪು. ಒಳಗಿಂದ ಕಮಟು ಪರಿಮಳ. ನಾನು ಅವರ ಮನೆಗೆ ಹೋದಾಗ ಸಂಕಮ್ಮ ಅಲ್ಲಿದ್ದರೆ ಸಾಂತಾಣಿ ಕೊಡುತ್ತಿದ್ದಳು. ಆ ಗಟ್ಟಿ ಬೇಳೆಯನ್ನು ಅಗಿಯಲು ಪ್ರಯತ್ನಿಸಿ ಆಗದೇ ಕೊನೆಗೆ ಚಾಕೊಲೇಟ್ನಂತೆ ಚೀಪುತ್ತಿದ್ದೆ. ಉಪ್ಪು ಸೇರಿಸಿದ್ದ ಕಾರಣ ಒಳ್ಳೆ ರುಚಿ ಇರುತ್ತಿತ್ತು. ಆಮೇಲೆ ಕರ್ಣನ ಜತೆ ಚೆನ್ನಮಣೆ ಆಡುತ್ತಿದ್ದೆ.

ಕರ್ಣ ಶಾಲೆಗೆ ಹೋದದ್ದು ನನಗೆ ನೆನಪಿಲ್ಲ. ಆದರೆ ನನಗೆ ಸರಿಯಾಗಿ ಬರೆಯಲು ಕಲಿಸಿದ ಅಮ್ಮನ ನಂತರದ ಗುರು ಅವನೇ. ನಾನು `ಇ' ಉಲ್ಟಾ ಬರೆಯುತ್ತಿದ್ದೆ. ಅಮ್ಮ ಎಷ್ಟು ಸಲ ಹೇಳಿಕೊಟ್ಟರೂ ಸರಿಯಾಗುತ್ತಿರಲಿಲ್ಲ. ಕೈಗಂಟಿನ ಮೇಲೆ ಹೊಡೆದರೂ ನನ್ನ `ಇ' ಉಲ್ಟವೇ. ಅದ್ಹೇಗೋ ಕರ್ಣ ಅದನ್ನು ಸರಿ ಮಾಡಿಬಿಟ್ಟ. ನಂಗೆ ಕಾಪಿ ಬರೆಯಲು ಹೇಳಿಕೊಟ್ಟದ್ದೂ ಸಹ. ಅಜ್ಜನ ಮನೆಯ ಹೊರಜಗುಲಿಯಲ್ಲಿ ಕುಳಿತು ಕಾಪಿ ಬರೆಸುತ್ತಿದ್ದ. ಕೆಲವೊಮ್ಮೆ ಅವನೇ ಬರೆದುಕೊಡುತ್ತಿದ್ದ. ಆಮೇಲೆ ನಾನು ಕಾಪಿ ಬರೆದುಕೊಡು ಅಂತ ಆಗಾಗ ಅವನಲ್ಲಿ ಗೋಗರೆಯುತ್ತಿದ್ದೆ. ಕದ್ದುಮುಚ್ಚಿ ಬರೆದುಕೊಡುತ್ತಿದ್ದ. ಒಂದು ಸಲ ಅಮ್ಮನಿಗೆ ಗೊತ್ತಾಗಿ ಅವರು ಬೈದ ಮೇಲಿಂದ ಏನು ಮಾಡಿದರೂ ಬರೆದುಕೊಡಲಿಲ್ಲ.

...`ನೋಡು, ಆ ಪದವಿನ ಈ ತುದಿಯಲ್ಲಿ ಗುಳಿಗ ಭೂತ ಉಂಟು. ನಡು ರಾತ್ರಿ ಗುಳಿಗನ ಸಂಚಾರ. ಆ ಹೊತ್ತಲ್ಲಿ ಅಲ್ಲಿಯಾಗಿ ಬಂದರೆ ಗುಳಿಗನ ಸೂಟೆ ಕಾಣ್ತದಂತೆ.' ಒಂದು ಸಂಜೆ ಹೊರಜಗುಲಿಯಲ್ಲಿ ಕೂತು ಕರ್ಣ ಗುಳಿಗನ ಕತೆ ಹೇಳುತ್ತಿದ್ದ.
`ಆ ಭೂತ ಯಾರಿಗೂ ಹೆದರುವುದಿಲ್ಲ. ಮೊನ್ನೆ ರಾತ್ರಿ ಅಜ್ಜ ಕುಡ್ತಮೊಗೇರಿಂದ ಬರುವಾಗ ಲೇಟಾಗಿತ್ತು. ಕೈಯಲ್ಲಿ ಟಾಚರ್್ ಕೂಡಾ ಇರ್ಲಿಲ್ಲ. ಪದವಿನ ಹತ್ತಿರ ಬರುವಾಗ ಗುಡ್ಡದ ಕಡೆಯಿಂದ ಕೆಂಪು ಲೈಟಿನ ಹಾಗೆ ಎಂತದೋ ಕಂಡಿತಂತೆ. ಯಾವುದೋ ಜೀಪು ಆಗಿರಬಹುದು ಅಂತ ಅಜ್ಜ ಸುಮ್ಮನೇ ಹೋದರಂತೆ. ಯಾಕೋ ಡೌಟು ಬಂದು ಸ್ವಲ್ಪ ಮುಂದೆ ಹೋಗಿ ನೋಡಿದರೆ ಯಾರೋ ಎರಡೂ ಕೈಯಲ್ಲಿ ಕೆಂಪು ಲೈಟು ತಿರುಗಿಸಿದ್ದು ಕಂಡಿತಂತೆ. ಆಗ ಅಜ್ಜನಿಗೆ ಫಕ್ಕ ಇದು ಗುಳಿಗ ಸೂಟೆ ಬೀಸುವುದು ಅಂತ ಗೊತ್ತಾಯ್ತಂತೆ.'

`ಮತ್ತೆಂತಾಯ್ತು? ' ಕುತೂಹಲ ಬೆರೆತ ನನಗೆ ಆಗಲೇ ಗಡಗಡ ಶುರುವಾಗಿತ್ತು.
`ಮತ್ತೆಂತಾಗುವುದು ನನ್ನಜ್ಜ ಎದ್ದುಬಿದ್ದು ಓಡಿ ಬಂದರಂತೆ. ಮತ್ತೆರಡು ದಿನ ಅಜ್ಜನಿಗೆ ಜೋರು ಜ್ವರ. ಅಜ್ಜಿ ಹರಕೆ ಕಟ್ಟಿಕೊಂಡ ಮೇಲೇ ಜ್ವರ ನಿಂತದ್ದು.' ಅಂದು ನಿಲ್ಲಿಸಿದ.
`ಏ ಕರ್ಣ ಈ ಭೂತ ಜೋರಾ, ಪಾಪವಾ?'
`ಭೂತ ಪಾಪ ಇರುವುದುಂಟಾ? ಜೋರು ಅಂದರೆ ಜೋರು. ನೀನೆಲ್ಲಾದರೂ ಸೂಟೆ ನೋಡಿದರೆ, ಚಡ್ಡಿಯಲ್ಲೇ ಮೂತ್ರ, ಹೆ ಹೆ!'
`ಭೂತ ನಮ್ಗೆನಾದ್ರೂ ಮಾಡ್ತದಾ ಕರ್ಣ?'
...ಅಷ್ಟರಲ್ಲಿ ಅಜ್ಜ ಕರ್ಣನನ್ನು ಕರೆದದ್ದು ಕೇಳಿಸಿತು. ಒಂದೇ ಓಟದಲ್ಲಿ ಅಂಗಳದ ತುದಿಗೆ ಹೋಗಿ ವೀಳ್ಯದೆಲೆ ಕೊಯ್ಯತೊಡಗಿದ.

ಆದಿನ ರಾತ್ರಿ ಟಾಯ್ಲೆಟ್ಟಿಂದ ಅಡಿಗೆ ಮನೆಯವರೆಗೂ ಅಮ್ಮನ ಜತೆಗೇ ಓಡಾಡುತ್ತಿದ್ದೆ. ನಿದ್ದೆಯಲ್ಲೂ ಕಿರಿಚುತ್ತಿದ್ದೆನಂತೆ. ಆಮೇಲೆ ನಾನೆಷ್ಟು ಸಲ ಗುಳಿಗನ ಕಥೆ ಕೇಳಿದರೂ ಕರ್ಣ ಏನೇನೋ ಹೇಳಿ ವಿಷಯ ಹಾರಿಸುತ್ತಿದ್ದ. `ಮಗುವಿಗೆ ಏನೆಲ್ಲ ಹೇಳಿ ಹೆದರಿಸ್ತೀಯಾ' ಅಂತ ಅಜ್ಜ ಅವನನ್ನು ಕರೆದು ಬಯ್ದಿದ್ದರಂತೆ. ನನಗೆ ಆಮೇಲೆ ಸಂಕಮ್ಮ ಹೇಳಿದಾಗಲೇ ಈ ವಿಷಯ ಗೊತ್ತಾದದ್ದು.

ನಾವು ಕೆವರ್ಾಶೆಗೆ ಮೊದಲ ಬಾರಿ ಹೋದಾಗ ಅಲ್ಲಿಗೂ ಕರ್ಣ ಬಂದಿದ್ದ. ಒಂದೆರಡು ದಿನ ಇದ್ದು ಹೋಗಿದ್ದ. ನಾನಾಗ ನಾಲ್ಕನೇ ಕ್ಲಾಸ್. ಅಲ್ಲಿ ನಾವಿಬ್ಬರೂ ಹೊಳೆಗೆ ಈಜಾಡಲು ಹೋದರೆ ಅಮ್ಮ ಬಂದು ಬೈದ ಮೇಲೇ ಮನೆಗೆ ವಾಪಾಸಾಗುತ್ತಿದ್ದದ್ದು. ಕರ್ಣ ಈಜುತ್ತಿದ್ದ. ನಾನೂ ಅವನ ಹಾಗೇ ಈಜಲು ಪ್ರಯತ್ನಿಸಿ ಉಸಿರುಗಟ್ಟಿ ನೀರು ಕುಡಿದಿದ್ದೆ.

...ಈಗ ಕರ್ಣ ಎಲ್ಲಿದ್ದಾನೆ ಹೇಗಿದ್ದಾನೆ ಗೊತ್ತಿಲ್ಲ. ತುಂಬ ವರ್ಷದ ಹಿಂದೆಯೇ ಸಂಕಮ್ಮ ಮತ್ತು ಕರ್ಣ ಕನ್ಯಾನ ಹತ್ತಿರ ಎಲ್ಲೋ ಸಂಬಂಧಿಕರ ಮನೆಗೆ ಹೋಗಿದ್ದರು. ಮತ್ತೆ ವಾಪಾಸು ಬರಲಿಲ್ಲ. ಆಮೇಲೆ ಅವರ ಸುದ್ದಿಯೂ ಇರಲಿಲ್ಲ.

ಮೊನ್ನೆ ಮಳೆ ನೋಡಬೇಕೆಂದು ಅಜ್ಜನ ಮನೆಗೆ ಹೋಗಿದ್ದೆ. ಕಾರ್ಕಳದಿಂದಲೇ ಮಳೆ, ಮಳೆ..ಬಸ್ಸಿನಲ್ಲಿ ಸಿಕ್ಕಾಬಟ್ಟೆ ರಶ್ಶು. ವಿಟ್ಲದಲ್ಲಿ ಶಾಲೆ ಮಕ್ಕಳ ಗೌಜಿ. ಅವರ ಒದ್ದೆ ಯುನಿಫಾಮರ್್, ಚಂಡಿ ಕೊಡೆ ಮೈಮೇಲೆಲ್ಲ ಬಿದ್ದು ಕಿರಿಕಿರಿಯಾಗ್ತಿತ್ತು. ವಿಟ್ಲದಿಂದ ಸ್ವಲ್ಪ ಮುಂದೆ ಹಳ್ಳಿ ಹೆಣ್ಣುಮಗಳು ಪುಟಾಣಿ ಹುಡುಗಿಯೊಂದಿಗೆ ಬಸ್ಸು ಹತ್ತಿದಳು. ಆ ರಶ್ಶಿನಲ್ಲಿ ಬ್ರೇಕ್ ಹಾಕಿದಾಗ ಪುಟ್ಟ ಹುಡುಗಿ ಕೆಳಗೆ ಬೀಳದ್ದು ಪುಣ್ಯ.

ನನಗೆ ಸೀಟು ಸಿಕ್ಕಿದ ಕಾರಣ ಹುಡುಗಿಯನ್ನು ಪಕ್ಕಕ್ಕೆ ಕರೆದು ಹತ್ತಿರ ಕೂರಿಸಿಕೊಂಡೆ. ಯಾಕೋ ಪರಿಚಿತ ಮುಖ ಅನಿಸತೊಡಗಿತು. ನಾನು ನಕ್ಕಾಗ ಅದೂ ನಕ್ಕಿತು. ಏನು ಹೆಸರು ಅಂತ ಕೇಳಿದೆ. `ಪ್ರಿಯಾ' ಅಂದಿತು. ನನ್ನ ಹೆಸರೇ ಇಟ್ಟುಕೊಂಡಿದೆಯಲ್ಲಾ ಹುಡುಗಿ ಅಂದುಕೊಂಡೆ. ಪಕ್ಕ ನಿಂತಿದ್ದ ಅದರಮ್ಮನ ಹತ್ತಿರ `ಯಾವೂರು?' ಅಂತ ಕೇಳಿದೆ. `ಕನ್ಯಾನ' ಅಂದಳು. ಅದ್ಯಾಕೋ, ಇದ್ದಕ್ಕಿದ್ದ ಹಾಗೆ, `ಅಲ್ಲಿ ಕರ್ಣ ಅಂತ ಯಾರಾದರೂ ಗೊತ್ತಾ' ಅಂತ ಕೇಳಿದೆ. ಅವಳು ನಕ್ಕು `ಇವಳಪ್ಪನ ಹೆಸರೂ ಅದೇ' ಅಂದಳು !

Tuesday, August 2, 2011

ಮತ್ತೆ ಬರೆಯುತ್ತೇನೆ

ಒಂದು ಅರೆ ಮಂಪರಿನ ನಿದ್ದೆ. ಈಗ ಏಳಬೇಕೆನಿಸಿದೆ. ಮಲಗಿಕೊಂಡೇ ಕಣ್ಬಿಟ್ಟು ನೋಡುತ್ತಿದ್ದೇನೆ. ಅಯೋಮಯ ಜಗತ್ತು.
ಮೈಕೊಡವಿಕೊಂಡು ಏಳುವುದಷ್ಟೇ ನನ್ನ ಮುಂದಿರುವ ಗುರಿ.

.........ಮತ್ತೆ ಹೂ ಪೋಣಿಸಲು ಶುರುವಿಟ್ಟಿದ್ದೇನೆ.

Thursday, June 25, 2009

ಅಪ್ಪನ ಕೈ ಹಿಡಿದು..


‘ಈ ಕಾಡು ಯಾರದ್ದು?’

ಸರ್ಕಾರದ್ದು.

ಸರ್ಕಾರ ಅಂದ್ರೆ ಯಾರಪ್ಪ? ಅವ್ರು ತುಂಬಾ ಶ್ರೀಮಂತರಾ?

ಸರ್ಕಾರ ಅಂದ್ರೆ ಜನ ಅಲ್ಲ ಪುಟ್ಟಾ, ನಾವೆಲ್ಲ ಸೇರಿ ಸರ್ಕಾರ ಮಾಡುವುದು.

ಹೌದಾ? ಅದು ಹೇಗಿರ್‍ತದೆ? ತುಂಬಾ ದೊಡ್ಡದಾ?

ಊಹೂಂ, ಅದು ವಸ್ತು ಅಲ್ಲ, ಅದನ್ನು ನಿಂಗೆ ಹೇಗೆ ಹೇಳೂದಪ್ಪಾ, ನಾವೆಲ್ಲ ಸೇರಿ ಮಾಡಿದ ಒಂದು ವ್ಯವಸ್ಥೆ!
ಹಂಗಂದ್ರೆ?

ನೀನು ದೊಡ್ಡವಳಾದ ಮೇಲೆ ಅರ್ಥ ಆಗ್ತದೆ.

ನಾನು ಯಾವಾಗ ದೊಡ್ಡವಳಾಗುವುದು?

ಇನ್ನೊಂದು ಏಳೆಂಟು ವರ್ಷ ಆದ್ಮೇಲೆ.

ಆಗ ನೀನೆಷ್ಟು ದೊಡ್ಡ ಆಗಿರ್‍ತೀಯಾ ಅಪ್ಪಾ?

ನಾನಿನ್ನು ದೊಡ್ಡ ಆಗುವುದಿಲ್ಲ. ಮುದುಕ ಆಗುವುದು..ಹ ಹ್ಹ..ಹ್ಹಾ..

ಅಜ್ಜನ ಮನೆ ದಾಟಿದ ಕೂಡ್ಲೇ ಶುರುವಾಗುತ್ತಿದ್ದ ನನ್ನ ಪ್ರಶ್ನೆಗಳು ಮನೆ ಬಂದರೂ ಮುಗಿಯುತ್ತಿರಲಿಲ್ಲ.

....ನಾನು ಆಗ ಅಜ್ಜನ ಮನೆಯಲ್ಲಿ ಶಾಲೆಗೆ ಹೋಗ್ತಿದ್ದೆ. ಪ್ರತೀ ಶನಿವಾರ ಅಪ್ಪ ಬಂದು ನಮ್ಮ ಮನೆಗೆ ಕರಕೊಂಡು ಹೋಗ್ತಿದ್ರು. ಮಧ್ಯಾಹ್ನ ಶಾಲೆ ಬಿಟ್ಟು ಓಡುತ್ತಾ ಬರುವಾಗ ಅಜ್ಜನ ಮನೆಯಲ್ಲಿ ಅಪ್ಪ ಕಾಯುತ್ತಾ ಕೂತಿರುತ್ತಿದ್ದರು. ನಾನು ಕೈ ಕಾಲೂ ತೊಳೆಯದೇ ಅತ್ತೆ ಕೈಯಲ್ಲಿ ಬೈಸಿಕೊಳ್ಳುತ್ತಾ ಊಟ ಮಾಡಿ ಅಪ್ಪನ ಕೈ ಹಿಡಿದು ಮನೆಗೆ ಹೊರಡುತ್ತಿದ್ದೆ.

ಅಜ್ಜನ ಮನೆಯ ಹಿಂದಿನ ಕೊಟ್ಟಿಗೆಯನ್ನು ದಾಟಿ ಐತಪ್ಪನ ಮನೆ ಪಕ್ಕದ ಓಣಿ ಹತ್ತಿ, ನಡೆಯುತ್ತಿದ್ದೆವು. ಆಗೆಲ್ಲ, ತಿರು ತಿರುಗಿ ಮೂರು ಉಪ್ಪರಿಗೆಯ ದೊಡ್ಡ ಬೂತ ಬಂಗಲೆ ಹಾಗಿದ್ದ ಅಜ್ಜನ ಮನೆಯನ್ನು ನೋಡುತ್ತಾ ಹೋಗ್ತಾ ಇದ್ದೆ.

ಆ ಓಣಿ ದಾಟಿ ಸಾಗಿದ್ರೆ ಮುಂದೆ ದೊಡ್ಡ ಪದವು (ಕಾಡಿನ ಮಧ್ಯದ ಬಯಲು ಭೂಮಿ), ಅದನ್ನು ದಾಟಿದ ಕೂಡ್ಲೆ ಕಳಂಜಿಮಲೆ ಸಿಗುತ್ತಿತ್ತು. ಅಲ್ಲೆಲ್ಲ ಆಗ್ಲೇ ಕಾಡು ಕಡಿದು ಅದ್ರ ಬದಲಿಗೆ ಗಾಳಿ ಗಿಡಗಳನ್ನ ನೆಡುತ್ತಿದ್ದರು. ಅದು ಸರ್ಕಾರಿ ಭೂಮಿ. ನಂಗೆ ಆಗ ಪ್ರತಿಯೊಂದರ ಬಗೆಗೂ ಕುತೂಹಲ... ಪದೇ ಪದೇ ಪ್ರಶ್ನೆ ಕೇಳುತ್ತಿದ್ದೆ.

ಅಪ್ಪ ನನ್ನ ಬಾಲಿಶ ಪ್ರಶ್ನೆಗಳನ್ನ ಕೇಳಿ ಬೈಯುತ್ತಿರಲಿಲ್ಲ. ಕಾಡು ದಾರಿಯಲ್ಲಿ ನಡೆದೂ ನಡೆದೂ ಸುಸ್ತಾದಾಗ ಎತ್ತಿಕೊಂಡು ಹೋಗ್ತಿದ್ರು. ಅಲ್ಲಲ್ಲಿ ಹರಿಯುವ ನೀರ ಝರಿಯ ಹತ್ತಿರ ಕರೆದುಕೊಂಡು ಹೋಗಿ ನೀರು ಕುಡಿಸ್ತಿದ್ರು. ಮೂರು ಗಂಟೆಗೆ ಅಜ್ಜನ ಮನೆಯಿಂದ ಹೊರಟ್ರೆ ನಾಲ್ಕು ಗಂಟೆಗೆ ಕನ್ಯಾನ ಬಸ್ ಸ್ಟಾಂಡ್‌ನಲ್ಲಿರ್‍ತಿದ್ದೆವು.

ನಾಲ್ಕೂ ಹತ್ತಕ್ಕೆ ಬಾಯಾರು (ಕಾಸರಗೋಡು ಸಮೀಪದ ಪಟ್ಟಣ) ಮಾರ್ಗವಾಗಿ ಹೋಗುವ ಗವರ್ಮೆಂಟ್ ಬಸ್ ಹತ್ತುತ್ತಿದ್ದೆವು. ಬಸ್‌ಗೆ ಹತ್ತಿದ ಕೂಡ್ಲೇ ಅದೇನಾಗುತ್ತೋ, ಕಲಿತ ಮಗ್ಗಿ, ಪದ್ಯವನ್ನು ಜೋರಾಗಿ ಹೇಳ್ತಾ ಹೋಗ್ತಿದ್ದೆ. ಆಗ ಬಸ್‌ನಲ್ಲಿರುವವರೆಲ್ಲ ಹಿಂತಿರುಗಿ ನೋಡಿದಾಗ ಅಪ್ಪನಿಗೆ ಮುಜುಗರ. ನನ್ನ ಉತ್ಸಾಹ ಮತ್ತಷ್ಟು ಹೆಚ್ಚಾಗ್ತಾ ಇತ್ತು. ಕೊನೆಗೆ ಜಾಣೆ ಅಂತ ಬಸ್‌ನಲ್ಲಿದ್ದ ಒಂದಿಬ್ಬರು ಪ್ರಯಾಣಿಕರು ಬೆನ್ನು ತಟ್ಟಿದ್ರೆ ಭಾರೀ ಖುಷಿ.

ನಾವು ಕಾಯರ್‌ಕಟ್ಟೆಯಲ್ಲಿ ಇಳಿದಾಗ ಕತ್ತಲು ಜಾಸ್ತಿಯಾಗುತ್ತಿತ್ತು. ಮಾರಪ್ಪ, ಗ್ಯಾಸ್‌ಲೈಟ್ ಬೆಳಕಿನಲ್ಲಿ ಬಟ್ಟೆ ಹೊಲಿಯುತ್ತಾ ಅಪ್ಪನಿಗೆ ಅಡ್ಡ ಸಲಾಂ ಹಾಕುತ್ತಿದ್ದ. ಗೂಡಂಗಡಿಗಳಲ್ಲಿ ನೇಂದ್ರ ಬಾಳೆಹಣ್ಣು, ಬೋಟಿ ಪ್ಯಾಕೆಟ್ ನೇತಾಡ್ತಾ ಇರ್‍ತಿತ್ತು. ಬಳೀ ಮುಂಡುಟ್ಟು, ತಲೆಗೂ ಅದೇ ಬಣ್ಣದ ಮುಂಡಾಸು ಕಟ್ಟಿ ಆಗಾಗ ಮುಂಡನ್ನ ಎತ್ತಿ ಹಿಡಿಯುತ್ತಾ ನಡೆಯುವ ಮುಸ್ಲಿಮ ಗಂಡಸರು ನೇರ ಬಾಳೇ ಹಣ್ಣಿಗೇ ಕೈ ಹಾಕಿ ನಾಜೂಕಿಂದ ಸಿಪ್ಪೆ ಜಾರಿಸಿ ತಿನ್ನುತ್ತಿದ್ದರೆ ನಂಗೂ ಆಸೆ. ಅಪ್ಪನತ್ರ ಹೇಳಿದ್ರೆ, ಮನೆಯಲ್ಲಿದೆ, ಅಲ್ಲೇ ತಿನ್ನುವೆಯಂತೆ ಅಂತಿದ್ರು. ಆದ್ರೆ ಮನೆಯಲ್ಲಿ ಎಷ್ಟು ಬಾಳೆ ಹಣ್ಣು ತಿಂದ್ರೂ ನಂಗೆ ಅಂಗಡೀ ಬದಿ ನೇತಾಡ್ತಾ ಇರೋ ಆ ಬಾಳೇ ಹಣ್ಣಿನಷ್ಟು ರುಚಿ ಅನ್ನಿಸ್ತಿರಲಿಲ್ಲ. ಕೆಲ ಕ್ಷಣ ಮೌನವಾಗಿ ಅಪ್ಪನನ್ನ ಹಿಂಬಾಲಿಸುತ್ತಿದ್ದೆ. ಕಾಯರ್ ಕಟ್ಟೆ ಪೇಟೆ ದಾಟಿದ್ರೆ, ಕಾಯರ್‌ಕಟ್ಟೆ ಪದವು. ನಮ್ಮ ಮನೆಗೆ ಅದನ್ನಿಳಿದು ಹೋಗಬೇಕು. ಕತ್ತಲಲ್ಲಿ ಅಪ್ಪನ ಕೈ ಹಿಡಿದು ಜಾರೆ ಕಲ್ಲಿನಲ್ಲಿ ಜಾರುತ್ತಾ ನಡೆಯುತ್ತಿದ್ದೆ.

ಐದಾರು ಫರ್ಲಾಗ್ ಇಳಿಯುತ್ತಾ ಜಾರುತ್ತಾ ಹೋದಾಗ ನಮ್ಮ ಗೇರುಗುಡ್ಡೆ ಸಿಗುತ್ತಿತ್ತು. ಆ ಗುಡ್ಡೆ ಕೆಳಗೇ ನಮ್ಮ ಮನೆ.

ಗುಡ್ಡೆ ದಾರಿಯಲ್ಲಿ ಬರುತ್ತಿರುವಾಗ ದೂರದ ಟವರ್‌ನಲ್ಲಿ ಮಿಣಿ ಮಿಣಿ ಕೆಂಪು ಲೈಟ್ ಕಾಣ್ತಾ ಇತ್ತು. ಅದು ಕಾಸರಗೋಡಿನ ರೇಡಿಯೋ ಸ್ಟೇಶನ್ ಅಂತ ಅಪ್ಪ ಹಿಂದೆಯೇ ಹೇಳಿದ್ರು. ಆ ಟವರ್‌ನಿಂದ ದನಿಯನ್ನ ಸ್ವರವನ್ನ ಗಾಳಿಯಲ್ಲಿ ತೇಲಿ ಬಿಟ್ಟರೆ ಅದು ನಮ್ಮ ರೇಡಿಯೋದೊಳಗೆ ಸೇರಿಕೊಂಡು ನಮಗೆ ಕೇಳ್ತಿತ್ತು. ಅದನ್ನು ಹತ್ತಿರದಿಂದ ಕಂಡೇ ಬರಬೇಕು ಅನ್ನುವ ಹುಚ್ಚು ಕುತೂಹಲ. ಅದನ್ನ ತಡೆದುಕೊಂಡು ಅಪ್ಪನ ಕೈ ಹಿಡಿದು ನಡೆಯುತ್ತಿದ್ದೆ.

ಇನ್ನೇನು ಸ್ವಲ್ಪ ಮುಂದೆ ಕಲ್ಲಿನ ಮೆಟ್ಟಿಲು ಅದನ್ನು ಇಳಿದು ಹೋದ್ರೆ ಮನೆ. ನಾನು ಅಪ್ಪ ಮನೆಯೊಳಗೆ ಹೊಕ್ಕರೆ ಅಲ್ಲಿ ಮೌನ. ನಾನು ಜೋರಾಗಿ ಅಮ್ಮಾ ಅಂತ ಕರೆದ್ರೆ, ಶೂ...ಮಾತಾಡ್ಬೇಡ ಅಂತ ಸನ್ನೆ ಮಾಡ್ತಾ ಅಮ್ಮ ಬರ್‍ತಿದ್ಲು. ತಮ್ಮ ಮಲಗಿದಾನೆ ಅಂತ ಕಿವಿಯಲ್ಲಿ ಗುಟ್ಟಾಗಿ ಹೇಳಿ ಒಳಗೆ ಕರೆದುಕೊಂಡು ಹೋಗ್ತಿದ್ಲು.

ನನಗೀಗ ಇಪ್ಪತ್ತನಾಲ್ಕು ವರ್ಷ. ಈ ಚಿತ್ರ ನಂಗೆ ಐದಾರು ವರ್ಷ ಆಗಿದ್ದಾಗಿನದು. ಅಂದು ಅಪ್ಪ ಹೇಳಿದ ಹಾಗೆ ನಾನೀಗ ದೊಡ್ಡವಳಾಗಿದ್ದೇನೆ. ಅಪ್ಪ ಮಧ್ಯವಯಸ್ಸಿಗೆ ಬಂದಿದ್ದಾರೆ. ಅಪ್ಪ ನನ್ನನ್ನೀಗ ಪುಟ್ಟಾ ಅಂತ ಅಷ್ಟು ಪ್ರೀತಿಯಿಂದ ಕರೆಯಲ್ಲ. ಹಿಂದಿನಂತೆ ಸಿಕ್ಕಾಬಟ್ಟೆ ಪ್ರಶ್ನೆ ಕೇಳಿ ಅಪ್ಪನ ತಲೆ ತಿನ್ನೋದಿಲ್ಲ. ಹಿಂದಿನ ಅಪ್ಪಂಗೂ ಇಂದಿನ ಅಪ್ಪಂಗೂ ತುಂಬಾ ಡಿಫರೆನ್ಸ್ ಇದೆ ಅಂತ ಆಗಾಗ ಅನ್ಸತ್ತೆ. ಅಫ್‌ಕೋರ್ಸ್ ನಾನೂ ಅಂದಿನಂತಿಲ್ಲ.

ಆದ್ರೆ ಆಗಾಗ, ಹಾಗೇ ಅಪ್ಪನ ಕೈ ಹಿಡಿದು ಕಳಂಜಿಮಲೆ ಕಾಡು ಹಾದಿಯಲ್ಲಿ ನಡೆಯಬೇಕನಿಸತ್ತೆ. ಆಗ ನಾನು ದೊಡ್ಡೋಳಾಗೋ ಕನಸು...

...ಈಗ ಮತ್ತೆ...

Monday, March 9, 2009

ಮುದ್ದು ಬರೆದ ಮಳೆ ಸಾಲುಗಳ ನೆನಪು


ಯಾಕೋ ಆಗಸ ಬಿಕ್ಕುತಿದೆ


ಹುಣ್ಣಿಮೆ ಕಡಲೂ ಉಕ್ಕುತಿದೆ


ರೆಕ್ಕೆ ನೆನೆದ ಚಿತ್ತದ ಹಕ್ಕಿಯು


ಕನಸು ಕಾಳುಗಳ ಹೆಕ್ಕುತಿದೆ




-----****--------




ಗಾಳಿಯೂ ಆಡದ


ಬಿರುಮಳೆ ಧಾರೆಗೆ


ಕಲ್ಲೂ ಕರಗಿದೆ


ಮಾತೂ ಆಡದ ಪ್ರೀತಿಗೆ


ಮುನಿಸು ಎಲ್ಲೋ ಕರಗಿದೆ




----*****------



ತೊಟ ತೊಟ ತೊಟ್ಟಿಕ್ಕುತ ಡೈರಿಯ


ಪುಟ ಪುಟ ಒದ್ದೆಯಾಗಿಸಿ


ಬರೆದದ್ದ ಅಳಿಸಿ


ಬೀಗಿದವು ಮಳೆಹನಿಗಳು


ಹನಿಗಳ ಸ್ಪರ್ಶಕೆ ನೆಂದ


ಹಳೆ ನೆನಪ ಬೀಜಗಳು


ಚಿಗುರಿದವು!


----*****------


ಹೇಳು ಮಳೆಯೇ


ಸುರಿದು


ಷೋಡಶಿಯೊಬ್ಬಳ


ನೆನೆಸದಿದ್ದರೆ


ನೀ ಸುರಿದೇನು ಫಲ?


-----*****------



ಹಸಿರುಟ್ಟ ಪುಟ್ಟಬಿತ್ತಕ್ಕೆ


ಮಳೆಹನಿ ಸೇಕ


ಅಲ್ಲಯವರೆಗೂ ಶೋಕ


ನಂತರ ಮರಗಳೆಲ್ಲ ಅಶೋಕ