Friday, December 26, 2008

ನನ್ನ ತಮ್ಮ ಈಗ ಅಳುವುದಿಲ್ಲ

ನಮ್ಮ ತೋಟದ ಕೆಳಗೆ ಸ್ವರ್ಣಾ ನದಿ ಹರಿಯುತ್ತದೆ. ಇತ್ತೀಚೆಗೆ ತಮ್ಮ ಸಮಯ ಸಿಕ್ಕಾಗಲೆಲ್ಲ ನದಿಯಲ್ಲಿ ಈಜಾಡುತ್ತಿರುತ್ತಾನೆ. ಅವನಿಗೀಗ ಹದಿನೇಳು ವರ್ಷ. ಅವನ ಗೆಳೆಯರಾರೋ ಹೊಳೆಯಲಿ ಈಜಿದ್ರೆ ಉದ್ದ ಆಗ್ತಿ ಅಂತ ಹೇಳಿದ ಕಾರಣ, ಈಜಿನ ಹುಚ್ಚು ಹತ್ತಿಸಿಕೊಂಡಿದ್ದಾನೆ. ಅಷ್ಟೇ ಅಲ್ಲ ಅದರಿಂದ ಅಂವ ದಿನದಿಂದ ದಿನಕ್ಕೆ ಉದ್ದವಾಗುತ್ತಾ ಹೋಗಿದ್ದಾನಂತೆ. ( ಹಾಗಂತ ಅವನೇ ಹೇಳಿದ್ದು)


ನನ್ನ ತಮ್ಮ ತೀರಾ ಸಾಧಾರಣ ಹುಡುಗ. ಚಿಕ್ಕವನಿದ್ದಾಗ ತುಂಬ ಚಂದ ಇದಾನೆ ಅಂತ ಎಲ್ಲರ ಮುದ್ದಿನ ಮೂಟೆಯಾಗಿದ್ದ . ಸ್ವಲ್ಪ ದೊಡ್ಡವನಾದ ಮೇಲೆ ಇದೆಲ್ಲ ನಿಧಾನಕ್ಕೆ ಕರಗತೊಡಗಿತು. ಕಲಿಯುವುದರಲ್ಲಿ ಜಾಣ ಅಲ್ಲ. ಅವನಿಗಿಂತ ಮೊದಲು ಕಲಿತ ನಾನು ಸ್ವಲ್ಪ ಕ್ರಿಯೇಟಿವ್‌ ಆಗಿದ್ದ ಕಾರಣ, ಈ ಪುಟ್ಟು ಹುಡುಗ ಶಾಲೆಯಲ್ಲೂ ಟೀಚರ್ಸ್‌ ಮೂದಲಿಕೆಗೆ ತುತ್ತಾಗಿದ್ದ.
ಇಷ್ಟರಲ್ಲಾಗಲೇ ತಮ್ಮನ ಸ್ವರ ಒಡೆಯಲಾರಂಭಿಸಿತು. ಹರೆಯ ಹತ್ತಿರ ಬಂತು. ಸಿಕ್ಕಾಬಟ್ಟೆ ತಮಿಳು ಸಿನಿಮಾ ನೋಡುವ ಹುಚ್ಚು. ಅದರೆ ಜತೆಗೆ ತಾನು ಅವರ ಹಾಗಿಲ್ಲ ಅನ್ನುವ ಕೊರಗು. ಸಿನಿಮಾ ಹುಚ್ಚು ತಲೆಗೇರಿದಂತೆ ಡಿಪ್ರೆಶ್ಶನ್‌ ಕೂಡ ಏರತೊಡಗಿತು. ಸಂಪೂರ್ಣ ಅಸ್ವಸ್ಥ ಮನಃಸ್ಥಿತಿ. ಅಷ್ಟರಲ್ಲಾಗಲೇ ಎಸ್‌.ಎಸ್‌.ಎಲ್‌.ಸಿ. ಪಾಸಾಗಿತ್ತು. ಮುಂದೇನು ಅನ್ನುವ ಭೂತಾಕಾರದ ಪ್ರಶ್ನೆ. ಅಪ್ಪನಿಗೆ ಯಾರೋ ಮೆಕಾನಿಕಲ್‌ ಡಿಪ್ಲೋಮೊ ಮಾಡಿದ್ರೆ ಒಳ್ಳೆ ಸ್ಕೋಪ್‌ ಇದೆ ಅಂದ್ರಂತೆ. ಇವನಿಗೂ ಏನು ಮಾಡಬೇಕು ಅಂತ ಗೊತ್ತಾಗ್ಲಿಲ್ಲ. ಐವತ್ತು ಸಾವಿರ ಫೀಸ್‌ ಕಟ್ಟಿ ಕಾಲೇಜು ಸೇರಿಕೊಂಡ.




ಇವ ಅಷ್ಟರವರೆಗೆ ಓದಿದ್ದು ಕನ್ನಡ ಮೀಡಿಯಂನಲ್ಲಿ. ಅವನ ಕ್ಲಾಸಿನಲ್ಲಿರುವವರೆಲ್ಲ ಇಂಗ್ಲೀಶ್‌ ಮೀಡಿಯಂನಿಂದ ಬಂದವರು. ಜತೆಗೆ ಇವ ಹೋಗಿದ್ದು ಎಸ್‌.ಎಸ್‌.ಎಲ್‌.ಸಿ. ನಂತರ. ಆದರೆ ಕ್ಲಾಸಿನಲ್ಲಿರುವವರೆಲ್ಲ ಪಿಯೂಸಿ ಓದಿ ಬಂದವರು. ಅದರಲ್ಲೂ ತೀರಾ ಸಾಧಾರಣ ಬುದ್ಧಿಮತ್ತೆ ಹುಡುಗ. ಓದು ಹೇಗೆ ತಾನೇ ತಲೆಗೆ ಹತ್ತಬೇಕು? ಅರ್ಥಮಾಡಿಕೊಳ್ಳುವ ಮನಸ್ಸೂ ಇವನಿಗಿರಲಿಲ್ಲ.



ಮತ್ತೇನಾಗಲಿಲ್ಲ. ಡಿಪ್ಲೊಮಾ ಫಸ್ಟ್‌ ಸೆಮ್‌ನಲ್ಲಿ ೭ ಸಬ್ಜೆಕ್ಟ್‌ ಫೇಲ್‌ ಆದ. ಮನೇಲೇ ಕೂತ. ಕಂಪ್ಯೂಟರ್‌ ಕ್ಲಾಸಿಗೆ ಹೋಗ್ಲಿಕ್ಕೂಮನಸ್ಸಿಲ್ಲ, ಯಾಕೇಂದ್ರೆ ಇವನಿಗೆ ಇಂಗ್ಲಿಷ್‌ ಬರಲ್ಲ, ಅಲ್ಲಿ ಯಾರಾದ್ರೂ ಇಂಗ್ಲೀಶ್‌ ಮಾತಾಡಿ ಇನ್‌ಸಲ್ಟ್‌ ಮಾಡಿದ್ರೆ ಅಂತ....ಒಟ್ಟಾರೆ ಮೈ ಪರಚಿಕೊಳ್ಳೋ ಸ್ಥಿತಿ ಅಂತಾರಲ್ಲ ಹಾಗೆ. ಅಷ್ಟರಲ್ಲಾಗಲೇ ನನಗೆ ರಾಜಧಾನಿಯಲ್ಲಿ ಟಿ.ವಿ.ಚಾನೆಲ್‌ ನಲ್ಲಿ ಕೆಲಸ ಸಿಕ್ಕಿತ್ತು. ನಾನು ಬೆಂಗಳೂರಿನಲ್ಲಿದ್ದೆ.

ಸ್ವಲ್ಪವಾದ್ರೂ ಮನಸ್ಸು ಬಿಚ್ಚಿ ನನ್ನ ಹತ್ರ ಮಾತ್ರ ಮಾತನಾಡುತ್ತಿದ್ದ ತಮ್ಮ. ಆದ್ರೆ ನಂಗೆ ಮಾತಾಡ್ಲಿಕ್ಕೆ ಟೈಮೆಲ್ಲಿ? ನ್ಯೂಸ್‌, ಪ್ರೋಗ್ರಾಂ ಅಂತ ಕೆಲಸ ಹೊತ್ತು ಹೈರಾಣಾಗಿದ್ದೆ . ಈ ಪುಣ್ಯಾತ್ಮ ಕಾಲ್‌ ಮಾಡುವಾಗಲೆಲ್ಲ, ‘ಬಿಸಿ ಇದ್ದೆ, ಆಮೇಲೆ ಮಾಡು’ ಎಂಬ ಒಂದು ಲೈನ್‌ ಆನ್ಸರ್‌.


ಆದ್ರೆ ಆ ದಿನ ಫೋನ್‌ ಮಾಡಿದ ತಮ್ಮ ಸ್ವರ ಎಂದಿನಂತಿರಲಿಲ್ಲ. ಕುಸಿದು ಹೋದಂತಾಗಿತ್ತು. ಆಮೇಲೆ ಮಾಡು ಅಂತ ಹೇಳಲು ಹೋದವಳು ತಡೆದು, ಏನಾಯ್ತೋ ಅಂದೆ. ನಾನು ಸಾಯ್ತೀನಿ ಕಣೇ. ನಂಗೆ ಬದುಕಕ್ಕಾಗಲ್ಲ ಅನ್ನುವಷ್ಟರಲ್ಲಿ ಅಳು ಬಂದು ಬಿಡ್ತು. ನಾನು ಮತ್ತೇನೂ ಮಾತನಾಡಲಿಲ್ಲ. ನಾಳೆಯೇ ರಾತ್ರಿ ಹೊರಟು ನೀನಿಲ್ಲಿಗೆ ಬಾ. ಆಮೇಲೆ ನೋಡಿಕೊಳ್ಳೋಣ ಅಂದೆ.


ತಮ್ಮ ಆತ್ಮಹತ್ಯಾ ಪ್ರಯತ್ನವನ್ನು ಮುಂದೆ ಹಾಕಿ ಬಲು ಕಷ್ಟದಿಂದ ಬರಲೊಪ್ಪಿದ. ಬರಲಿಕ್ಕೇನೋ ಹೇಳಿಯಾಯಿತು. ಆದ್ರೆ ಬಂದ ಮೇಲೆ ಏನು ಮಾಡುವುದು. ಅದುವರೆಗೆ ಪುರುಸೊತ್ತಿಲ್ಲದ ಕೆಲಸದ ನಡುವೆ ಮರೆತೇ ಹೋದಂತಿದ್ದ ಗೆಳೆಯರನ್ನೆಲ್ಲ ಸಂಪರ್ಕಿಸಿದೆ. ನನ್ನ ಗೆಳತಿ ಹಿಂದೆ ಒಬ್ಬ ಸೈಕಾಲಜಿಸ್ಟ್‌ ಬಗ್ಗೆ ಹೇಳಿದ್ದಳು. ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದೆ.
ಬಲು ಕಷ್ಟದಲ್ಲಿ ಮಾತಿಗೆ ಸಿಕ್ಕ ಅವರು ತಮ್ಮನ ಮದುವೆಯ ತರಾತುರಿಯಲ್ಲಿದ್ದರು. ಒಬ್ಬನೇ ತಮ್ಮನ ಮದುವೆ ತಯಾರಿ ಬಿಟ್ಟು ನನ್ನ ತಮ್ಮನನ್ನು ರಿಪೇರಿ ಮಾಡ್ಲಿಕ್ಕೆ ಒಪ್ಪಿಕೊಂಡರು.

ಮರುದಿನ ಮುಂಜಾನೆ ಮನೆಗೆ ಬಂದಾಗ ತಮ್ಮನ ಕಣ್ಣ ಕೆಳಗೆ ಕಪ್ಪು ಕಲೆ. ಮುಖ ತಗ್ಗಿತ್ತು. ರೂಮೊಳಗೆ ಬಂದು ಕೂತ. ಮನಸ್ಸಿಲ್ಲದ ಮನಸ್ಸಿಂದ ತಿಂಡಿ ತಿಂದ, ಸ್ನಾನ ಮಾಡಿ ಬೆನ್ನು ಒರೆಸದೇ ಬಂದ.


ಮರುದಿನ ಅವನನ್ನು ಆ ಸೈಕಾಲಜಿಸ್ಟ್‌ ಬಳಿ ಕರೆದೊಯ್ದೆ. ಆಗಷ್ಟೇ ಮಿಂದು, ಒದ್ದೆ ಕೂದಲನ್ನು ಬೆನ್ನ ಮೇಲೆ ಹರಡಿದ ಮೂವತೈದರ ಚೆಲುವಾದ ಹೆಣ್ಮಗಳೊಬ್ಬಳು ನಮ್ಮನ್ನು ಮನೆಯೊಳಗೆ ಕರೆದೊಯ್ದರು. ಮನೆ ಮಹಡಿಯ ಮೇಲೆ ಕೂರಿಸಿ ತಿಂಡಿ ಬಗ್ಗೆ ವಿಚಾರಿಸಿ ಎಷ್ಟೇ ಹೇಳಿದರೂ ಕೇಳದೇ ತಿಂಡಿ ಕೊಟ್ಟು ಮಾತಿಗೆ ಕೂತರು. ನಮಗೆ ಆಶ್ಚರ್ಯ. ಸೈಕಾಲಜಿಸ್ಟ್‌ ಟಫ್‌ ಪರ್ಸನಾಲಿಟಿ ನಿರೀಕ್ಷಿಸಿದ್ದ ನಮಗೆ ಗೊಂದಲ, ತಬ್ಬಿಬ್ಬು.

ನನ್ನನ್ನು ಕೆಳಗೆ ಕೂರಲು ಹೇಳಿ, ತಮ್ಮನ ಜತೆಗೆ ಮಾತಿಗೆ ಹಚ್ಚಿದರು. ನಾನು ತಳ ಅಂತಸ್ತಿನ ರೂಮಿನಲ್ಲಿ ಕೂತು ಅರ್ಧ ಓದಿದ್ದ ದಾದಾಗಿರಿಯ ದಿನಗಳತ್ತ ಕಣ್ಣು ಹಾಯಿಸಿದೆ. ಏನೂ ತಲೆಗೆ ಹೋಗುತ್ತಿರಲಿಲ್ಲ. ಮೇಲಿನ ಮಾತುಗಳೂ ಕೇಳುತ್ತಿಲ್ಲ. ಸುಮ್ಮನೆ ಅಲ್ಲಿ ಇಲ್ಲಿ ಅಡ್ಡಾಡುತ್ತಾ ಮತ್ತೆ ಪುಸ್ತಕ ಹಿಡಿದೆ. ಹತ್ತು ಪುಟ ಓದಿ ಮುಗಿದಿರಬಹುದು.

ಮೇಲಿಂದ ಜೋರಾಗಿ ನಗುವ ಸದ್ದು. ತಡೆದು ಕಿವಿಕೊಟ್ಟೆ, ತಮ್ಮನದೇ ದನಿ. ಅವನನ್ನು ಆತ್ಮಹತ್ಯೆಯಿಂದ ಹೊರಗೆಳೆದು, ಸಮಾಧಾನಿಸಬೇಕು ಎಂದಷ್ಟೇ ಬಯಸ್ಸಿದ್ದ ನನಗೆ ಅವನ ಜೋರಾದ ನಗು ಕೇಳಿ ಆಶ್ಚರ್ಯ. ಒಳಗೊಳಗೇ ಸಮಾಧಾನ, ಮಂಕು ಬಡಿದಂತಾಗಿದ್ದ ಮನಸ್ಸು ತಹಬಂಧಿಗೆ ಬಂದಿತ್ತು. ಅಷ್ಟರಲ್ಲಾಗಲೇ ತಮ್ಮನ ಸ್ವರ ಏರಿತ್ತು, ಜೋರು ಜೋರಾಗಿ ಏನನ್ನೋ ವಿವರಿಸುತ್ತಿದ್ದ. ಅದೇನೆಂದು ಸ್ಪಷ್ಟವಾಗುತ್ತಿರಲಿಲ್ಲ.

ಸಧ್ಯ! ಅಂದುಕೊಂಡು ಓದನ್ನು ಮುಂದುವರಿಸಿದೆ. ಯಾಕೋ ಬೋರೆನಿಸತೊಡಗಿತು.
ಮೇಲಿಂದ ಅಸ್ಪಷ್ಟ ಮಾತು ಮುಂದುವರಿದಿತ್ತು. ಹೊರಬಂದು ರಸ್ತೆಯಲ್ಲೇ ಎರಡು ಸುತ್ತು ಹಾಕಿಬಂದೆ. ಇವರ ಮಾತು ನಿಂತಿರಲಿಲ್ಲ. ಅವರು ಮಾತಿಗೆ ತೊಡಗಿ ಆಗಲೇ ಮೂರು ಗಂಟೆಯಷ್ಟು ಹೊತ್ತಾಗಿತ್ತು.

ಅಲ್ಲೇ ಮಂಚಕ್ಕೊರಗಿದ್ದೆ. ತಮ್ಮ ಬಂದು ಎಚ್ಚರಿಸಿದಾಗಲೇ ಗೊತ್ತಾಗಿದ್ದು, ನಂಗೆ ನಿದ್ದೆ ಬಂದಿದೆ ಅಂತ. ನಗು ನಗುತ್ತಾ ಬಂದ ತಮ್ಮ, ಮೇಲೆ ಬಾ, ಅಕ್ಕ ಕರೀತಾರೆ ಅಂತಂದ. ಅವರಾಗಲೇ ಅವನಿಗೆ ಅಕ್ಕ ಆಗಿದ್ದರು, ಜತೆಗೆ ಬೆಸ್ಟ್‌ ಫ್ರೆಂಡೂ. ಆ ಕ್ಷಣಕ್ಕೆ ನಂಗೆ ಏನು ಹೇಳಬೇಕೋ ತಿಳಿಯಲಿಲ್ಲ. ತಮ್ಮನನ್ನು ಕರೆದುಕೊಂಡು ಹೊರಬಂದೆ. ಗೇಟಿನವರೆಗೆ ಬಂದು ಬಿಟ್ಟು ಹೋದರು.

ಅದೇ ದಿನ ರಾತ್ರಿ ಅವರಿಗೆ ಫೋನ್‌ ಮಾಡಿದಾಗ, ತಮ್ಮನ ಸಮಸ್ಯೆಯನ್ನು ವಿವರಿಸಿದರು. ತಮ್ಮನಿಗಾಗಿದ್ದು ಪ್ರೀತಿಯ ಕೊರತೆ. ಟೀಚರ್ಸ್‌ ಅವನನ್ನು ಎಷ್ಟು ಹಿಂಸಿಸಿದ್ದರೆಂದರೆ ಅವನಿಗೆ ಜೀವನವೇ ಬೇಡವಾಗುವಷ್ಟು. ಜತೆಗೆ ಮನೆಯಲ್ಲೂ ಇದೇ ಕಾರಣಕ್ಕೆ ಕಿರಿಕಿರಿ ಸುರುವಾದಾಗ ಅವನಿಗೆ ಓದಿನ ಮೇಲೇ ದ್ವೇಷ ಬಂದಿತ್ತು. ಜಗತ್ತೆಲ್ಲ ಅವನ ಶತ್ರುಗಳೇ ತುಂಬಿದಂತಾಗಿದ್ದರು. ಪ್ರತಿಭಟಿಸಲು ಬೇಕಾದ ಧೈರ್ಯವಿರಲಿಲ್ಲ. ಒಳಗೇ ನೋವು ತುಂಬಿ ಹೊರಬರಲಾಗದೇ ಅದರೊಂದಿಗೆ ಗಿಲ್ಟ್‌ ಸಹ ಸೇರಿ ಬದುಕೇ ಅಸಹನೀಯವಾಗತೊಡಗಿತ್ತು. ಆಗ ಅವನಿಗೆ ಕನಸು ಕಾಣುವ, ಭ್ರಮೆಯಲ್ಲೇ ಬದುಕುವ ಸ್ಥಿತಿ ಇಷ್ಟವಾಗತೊಡಗಿತು. ಈ ಸ್ಥಿತಿಗೆ ಎಷ್ಟರ ಮಟ್ಟಿಗೆ ಅಂಟಿಕೊಂಡ ಅಂದ್ರೆ, ಅದರಿಂದ ಹೊರಬರುವುದೂ ಸಮಸ್ಯೆಯಾಯಿತು. ಈ ಅಕ್ಕನ ಬಳಿ ತನ್ನ ನೋವನ್ನೆಲ್ಲ ಹೇಳಿ ಹಗುರಾದ ಮೇಲೆ ಅವನಿಗೂ ನಿರಾಳವೆನಿಸಿತು. ಜತೆಗೆ ಅವರ ಪ್ರೀತಿಯ ಮಾತು ಮತ್ತಷ್ಟು ಚೈತನ್ಯ ಮೂಡಿಸಿತು.

ಈಗ ಬದಲಾಗಿದಾನೆ, ತಾರೇ ಜಮೀನ್ ಪರ್‍ ನಲ್ಲಿ ಇಶಾನ್ಗೆ ಸಿಕ್ಕ ಅಮೀರ್‌ಖಾನ್‌ ಥರಾ ನನ್ನ ತಮ್ಮನಿಗೆ ಒಬ್ಬ ಹೊಸ ಅಕ್ಕ ಸಿಕ್ಕಿದ್ದಾರೆ. ಈ ಅಕ್ಕನಿಗಿಂತಲೂ ಹೆಚ್ಚು ಆ ಅಕ್ಕನನ್ನು ಕಂಡ್ರೇ ಅವನಿಗಿಷ್ಟ ಅಂದಾಗ ಸ್ವಲ್ಪ ಅಸೂಯೆಯಾಗುತ್ತದೆ. ಆದ್ರೂ ಮೊದಲು ಮೂಲೆಯಲ್ಲಿ ಕೂತು ಅಳುತ್ತಾ ರೇಗುತ್ತಾ ಇದ್ದ ತಮ್ಮನಿಗೆ ಈಗ ಹೊಳೆಯಲ್ಲಿ ಈಜೋದ್ರಿಂದ ಉದ್ದ ಆಗ್ತೀನಿ ಅನ್ನೋ ಕಾನ್ಫಿಡೆನ್ಸ್ ಬಂದಿದೆ. ಕಂಪ್ಯೂಟರ್‌ ಕ್ಲಾಸಿಗೆ ಸೇರ್‍ಕೊಂಡಿದಾನೆ. ಉಳಿದ ಟೈಂನಲ್ಲಿ ಅಪ್ಪನಿಗೆ ತೋಟದಲ್ಲಿ ಹೆಲ್ಪ್‌ ಮಾಡುತ್ತಾನೆ. ಆಗಾಗ ಹೊಸ ಅಕ್ಕನನ್ನು ಕಾಣಲು ಬೆಂಗಳೂರಿಗೆ ಬರುತ್ತಿರುತ್ತಾನೆ. ಈಗ ಅಂವ ಫೋನ್‌ ಮಾಡಿದ್ರೆ, ಅದೆಂಥಾ ತಲೆ ಹೋಗೋ ಕೆಲ್ಸ ಇದ್ರೂ ಬಿಟ್ಟು ಫೋನೆತ್ತುತ್ತೇನೆ. ಆದರೆ ಜೀವನೋತ್ಸಾಹ ತುಂಬ ಬೇಕಾದ ಶಿಕ್ಷಕರು ಜೀವ ತೆಗೆಯುವ ಸ್ಥಿತಿಗೆ ನೂಕಿದ್ದನ್ನು ಇನ್ನೂ ಜೀರ್ಣಿಸಲಾಗಿಲ್ಲ.

( ಇದನ್ನು ಬರಹ ರೂಪಕ್ಕಿಳಿಸಲು ತುಂಬ ಹೆಣಗಿದ್ದೇನೆ. ಒಂದೂವರೆ ತಿಂಗಳ ಹಿಂದೆ ಆರಂಭಿಸಿದ ಬರಹ ಇದು. ಬರವಣಿಗೆ ಅರ್ಧಕ್ಕೆ ಬರುವಾಗ ಇದು ಸರಿಯಾಗಿಲ್ಲ ಅಂತ ಅನಿಸಲು ಸುರು. ಆದ್ರೆ ಮುಗ್ಧ ಮಕ್ಕಳ ಮನಸ್ಸಿಗೆ ನೋವು ಮಾಡುವ ಶಿಕ್ಷಕರು ನಮ್ಮಲ್ಲಿ ಹೆಚ್ಚಾಗುತ್ತಿದ್ದಾರೆ, ಕಪಿಲಕ್ಕನಂತವರು ಕಡಿಮೆಯಾಗುತ್ತಿದ್ದಾರೆ ಅನ್ನುವುದು ಮಾತ್ರ ಸತ್ಯ ಅಂದುಕೊಂಡಿದ್ದೇನೆ, ಹೀಗಾಗದಿರಲಿ ಎಂಬ ತುಡಿತ ಇದ್ದೇ ಇದೆ.)

Tuesday, November 25, 2008

ನನ್ನ ಪ್ರೀತಿಯ ಕಂಗನಾ...



ಕತ್ತಲೆಯ ಪರದೆ ಸರಿದಾಗ ಕಣ್‌ ಕೋರೈಸುವ ಬೆಳಕು. ಅಲ್ಲೊಬ್ಬ ಸುಂದರಿ ಪ್ರತ್ಯಕ್ಷ. ನೀಳ ಕಾಯವನ್ನು ಬಳುಕಿಸುತ್ತಾ, ತುಂಬು ಗುಂಗುರು ಕೂದಲೊಳಗೇ ಮಾದಕ ಮುಖ ತೋರಿಸುತ್ತಾ ಮುಂದೆ ಬಂದು ಮಿಂಚು ನೋಟ ಬೀರಿ ಬೀರುತ್ತಾಳೆ. ಅಹ್‌, ಅದೆಂಥಾ ಚೂಪು, ನೇರ ದೃಷ್ಟಿ. ಕಂಗನಾ ರಾನಾವತ್ ಎಂಬ ಹುಚ್ಚು ಹುಡುಗಿ ಆ ಕ್ಷಣ ನಮ್ಮೊಳಗೆ ತುಂಬಿ ಹೋಗುತ್ತಾಳೆ. ‘ಫ್ಯಾಶನ್‌ ’ ಸಿನಿಮಾದಲ್ಲಿ ಫ್ಯಾಶನ್‌ ಪ್ರಪಂಚದ ಅಷ್ಟೂ ಅಧ್ವಾನಗಳನ್ನು ಮೈತುಂಬಿಕೊಂಡಂತೆ ಬರುವ ಪಾತ್ರ ಕಂಗನಾದು. ಚಿತ್ರದಲ್ಲಿ ಆಕೆ ಸೊನಾಲಿ. ಫ್ಯಾಶನ್‌ ಜಗತ್ತಿನ ದುರಂತಗಳಿಗೆ, ನೋವುಗಳಿಗೆ ಮುಖವಾಣಿಯಾಗುತ್ತಾ ಹೋಗುವ ಪಾತ್ರ ಆಕೆಯದು.

ಈ ಚಿತ್ರದ ನಾಯಕಿ ಮೇಘನಾ ಫ್ಯಾಶನ್‌ ಲೋಕಕ್ಕೆ ಹೆಜ್ಜೆ ಇಡುವ ಹೊತ್ತಿಗೆ, ಸೋನಾಲಿ(ಕಂಗನಾ) ಪ್ರತಿಷ್ಠಿತ ಬ್ರಾಂಡ್‌ನ ರೂಪದರ್ಶಿ. ಆ ಹೊತ್ತಿಗೆ ಈಕೆ ಬಲು ಎತ್ತರಕ್ಕೇರಿದ ಫ್ಯಾಶನ್‌ ಲೋಕದ ಅಧಿನಾಯಕಿಯಂತೆ ಅಹಂಕಾರದಿಂದ ಕನಲಿ ಮೈಮರೆಯುತ್ತಾಳೆ ಸೊನಾಲಿ. ಸದಾ ಡ್ರಕ್ಸ್‌ನಿಂದ ಅಮಲೇರಿದ ಕಣ್ಣುಗಳಲ್ಲಿ ಜಗತ್ತನ್ನು ನೋಡುತ್ತಾಳೆ.

ಇದಕ್ಕೂ ಮೊದಲಿನ ಒಂದು ದೃಶ್ಯ ಫ್ಯಾಶನ್‌ ಜಗತ್ತಿನ ಅಂತರಾಳಕ್ಕೆ ಕನ್ನಡಿ ಹಿಡಿಯುತ್ತದೆ. ಅದು ಮುಂಬಯಿನ ಪ್ರತಿಷ್ಟಿತ ಪಾರ್ಟಿ. ಅಲ್ಲಿ ಒಂದು ಕಡೆ ಪಾನ ಪಾರ್ಟಿ ರಂಗೇರುತ್ತಿದ್ದರೆ, ಇನ್ನೊಂದೆಡೆ ಮಾನಿನಿಯರ ಕೇಕೆಯೂ ಮುಗಿಲುಮುಟ್ಟುತ್ತದೆ. ದೊಡ್ಡ ಕಡಾಯಿಯಲ್ಲಿ ಕೊಳೆತ ದ್ರಾಕ್ಷಿ ತುಳಿ ತುಳಿಯುತ್ತಾ ಮಕ್ಕಳಾಟದಂತೆ ಅದರಲ್ಲಿ ಖುಷಿ ಪಡುತ್ತಿರುತ್ತಾರೆ ಈ ಮಂದಿ... ಮೂಲೆಯಲ್ಲಿ ಶೋಕಿಗೆಂದು ಕೈಯಲ್ಲಿ ವೈನ್‌ ತುಂಬಿದ ಗ್ಲಾಸ್‌ ಹಿಡಿದ ಹಿರಿಯ ಮಹಿಳೆಯೊಬ್ಬಳು ಅರ್ಥಗರ್ಭಿತವಾಗಿ ಅತ್ತ ನೋಡುತ್ತಾಳೆ. ಅದು
ಫ್ಯಾಶನ್ ಪ್ರಪಂಚವನ್ನು ಸಾಕ್ಷೀಕರಿಸುವ ಮಾರ್ಮಿಕ ದೃಶ್ಯ. ಆ ಜಗತ್ತಿನ ಮಂದಿಗೆ ತಾಜಾ ದ್ರಾಕ್ಷಿ ಬೇಡ. ಆದರೆ ದ್ರಾಕ್ಷಿಯನ್ನು ಕೊಳೆಸಿ ತುಳಿದು ವೈನ್‌ನ ರೂಪದಲ್ಲಿ ಜರಡಿಗೆ ಹಾಕಿದರೆ ಅದನ್ನು ಚಪ್ಪರಿಸಲು ಅದೆಷ್ಟು ಮಂದಿ...

ಇದನ್ನು ಸತ್ಯರೂಪದಲ್ಲಿ ಸಂಕೇತಿಸುವುದೇ ಸೊನಾಲಿ. ಜಗತ್ತೇ ತನ್ನ ಕೈಯಬುಗರಿ ಎಂದುಕೊಂಡಿದ್ದ ಸೊನಾಲಿಗೆ ಈ ಭ್ರಮೆ ಅರಿವಿಗೆ ಬರುವುದು ಕೆಲಸದಿಂದ ಹೊರತಳ್ಳಲ್ಪಟ್ಟಾಗಲೇ. ಅದುವರೆಗೆ ಕೋರೈಸುವ ಫ್ಯಾಶನ್‌ ಜಗತ್ತಿನ ಕತ್ತಲಮೂಲೆಯಲ್ಲಿ ಅವಿತಿದ್ದ ವಾಸ್ತವ ಇದ್ದಕ್ಕಿದ್ದ ಹಾಗೆ ಕಣ್ಮುಂದೆ ಬಂದಾಗ ಆಕೆ ತತ್ತರಿಸಿ ಹೋಗುತ್ತಾಳೆ. ಅವಳ ಸ್ಥಾನಕ್ಕೆ ಆ ಕಂಪೆನಿಯ ಮುಖವಾಣಿಯಾಗಿ ಬರುವವಳು ನಾಯಕಿ ಮೇಘನಾ ಮಾಥುರ್‌. ಮುಂದೆ ಈ ಸೊನಾಲಿ ದುರಂತ ನಾಯಕಿ ಅಥವಾ ಫ್ಯಾಶನ್‌ ಲೋಕದ ಕಮರಿದ ಹೂವು.

ಫ್ಯಾಶನ್‌ ಲೋಕದ ಹಲವು ದುರಂತಗಳಿಗೆ ಆಕೆ ಸಾಕ್ಷಿಯಾಗುತ್ತಾಳೆ. ಕೆಲ ವರ್ಷಗಳ ಹಿಂದೆ ಫ್ಯಾಶನ್‌ ಶೋವೊಂದರಲ್ಲಿ ಇದ್ದಕ್ಕಿದ್ದ ಹಾಗೆ ಬಟ್ಟೆ ಕಳಚಿಬಿದ್ದ ರೂಪದರ್ಶಿಯನ್ನು ಈಕೆ ಚಿತ್ರದಲ್ಲಿ ಪ್ರತಿನಿಧಿಸುತ್ತಾಳೆ. ಸುತ್ತಿ ಬರುವ ಅವಮಾನಗಳಲ್ಲಿ ದೊಡ್ಡ ಅಲೆ ಇದು. ಈ ಅಲೆ ಆಕೆಯನ್ನು ಕೊಚ್ಚಿಕೊಂಡೇ ಹೋಗುತ್ತದೆ. ಪ್ರವಾಹದ ವಿರುದ್ಧ ಈಜಲಾಗದ ಆಕೆ ಸರ್ವಸ್ವವನ್ನೂ ಕಳೆದುಕೊಂಡು ಹುಚ್ಚಿಯಾಗಿ ಬೀದಿಗೆ ಬೀಳುತ್ತಾಳೆ.
ಆಗ ಇತ್ತೀಚೆಗೆ ಮಾದಕ ವ್ಯಸನಿ ರೂಪದರ್ಶಿಯೊಬ್ಬಳು ಹುಚ್ಚಿಯಾಗಿ ಬೀದಿಯಲ್ಲಿ ಅಲೆದಾಡುತ್ತಿದ್ದ ಸುದ್ದಿಯಲ್ಲಿ ಕಥೆ ಕೇಂದ್ರೀಕೃತವಾಗುತ್ತದೆ. ಘಟನೆ, ಘಟನೆಗಳ ಮೂಲಕ ವಾಸ್ತವಕ್ಕೆ ಹತ್ತಿರವಾಗಿ, ಮನಸ್ಸಿನಾಳದಲ್ಲಿ ಊರಿ ಬಿಡುತ್ತದೆ ಈ ದೃಶ್ಯ.

ಬಹುಶಃ ಈಕೆಯ ಹಣೆಯಲ್ಲಿ ದುರಂತವೇ ಬರೆದಿರಬೇಕು. ಇದರ ನಡುವೆ ಈಕೆ ಕಳೆದುಕೊಂಡದ್ದನ್ನು ತಾನು ಮೈದುಂಬಿಕೊಳ್ಳುತ್ತಾ, ಕೊನೆಗೆ ಈಕೆಯಂತೇ ಹತಾಶೆಯ ಪ್ರಪಾತಕ್ಕೆ ಬೀಳುತ್ತಾಳೆ ಈ ಚಿತ್ರದ ನಾಯಕಿ ಮೇಘನಾ. ಆದರೆ ಒಂದು ಹಂತದಲ್ಲಿ ನಾಯಕಿ ಎಚ್ಚೆತ್ತ ಕಾರಣ ಪರಿಣಾಮ ಸ್ವಲ್ಪ ಹಗುರಾಗುತ್ತದೆ. ಬಳಿಕ ನಾಯಕಿ ತನ್ನ ಪಾಪಪ್ರಜ್ಞೆಯ ಪ್ರತಿರೂಪದಂತಿರುವ ಬಲು ಎಚ್ಚರಿಕೆಯಿಂದ ಕಾಯುತ್ತಾಳೆ.ಆದರೆ, ಹೇಳಿ ಕೇಳಿ ದುರ್ಭರ ಅಂತ್ಯ ಮೊದಲೇ ನಿರ್ಧರಿತವಾದ ಕಾರಣ ಅದಕ್ಕೆ ಪ್ರತಿಯಾಡದೇ ಶರಣಾಗಿ ಬಿಡುತ್ತಾಳೆ ಸೊನಾಲಿ.

ಮಧು ಭಂಡಾಕರ್‌ ಎಂಬ ಪ್ರತಿಭಾವಂತ ನಿರ್ದೇಶಕನ ಕೈಯಲ್ಲಿ ಅಕ್ಷರಶಃ ಸೊನಾಲಿಯೇ ಆಗಿಬಿಡುತ್ತಾಳೆ ಕಂಗನಾ. ಆ ಕೆಚ್ಚು, ವ್ಯಂಗ್ಯ, ಮಾದಕತೆ, ಕೊನೆಗೆ ದೈನ್ಯ...ಇದರ ಜತೆಗೆ ಪಾತ್ರವನ್ನು ಆವಾಹಿಸಿಕೊಂಡು ರೂಪದರ್ಶಿಗಳ ಮೂರ್ತರೂಪವೇ ಆಗಿಬಿಡುತ್ತಾಳೆ ಕಂಗನಾ. ಗುಂಗುರು ಕೂದಲಿನಡಿ ಮಿನುಗುವ ಆಕೆಯ ಬೆಕ್ಕಿನ ಕಣ್ಣು ಫ್ಯಾಶನ್‌ ಜಗತ್ತಿನ ನಗ್ನಸತ್ಯವನ್ನು ಸಾರಿ ಸಾರಿ ಹೇಳುವಂತಿದೆ.

Tuesday, November 4, 2008

ಒಂದು ಪುಟ್ಟು ಪ್ರೀತಿ

ನನಗಾಗ ತಾನೇ ಹನ್ನೆರಡು ತುಂಬಿ ಹದಿಮೂರು ಹಿಡಿದಿತ್ತು. ಮನಸ್ಸು ಮಾಯಾಜಿಂಕೆಯ ಬೆನ್ನು ಹತ್ತಿತ್ತು. ಮನೆಯಲ್ಲಿ ಅಷ್ಟು ಮುಕ್ತವಲ್ಲದ ವಾತಾವರಣ. ನನ್ನ ಕನವರಿಕೆಗಳನ್ನ ಯಾರ ಬಳಿ ತೋಡಿಕೊಳ್ಳುವುದು? ನನ್ನೊಳಗೇ ಅದುಮಿಹಿಡಿದಿದ್ದೆ. ನಾನು ಶಾಲೆಗೆ ಹೋಗುತ್ತಿದ್ದ ವಿಷ್ಣುಮೂರ್ತಿ ಬಸ್ಸಿನ ಕ್ಲೀನರ್‌, ಅವನ ಹೆಸರು ಸಾದಿಕ್‌ ಅಂತ. ಅರೆಗಡ್ಡ ಬಿಟ್ಟ ಬಿಳಿಯ ಚಂದದ ಹುಡುಗ. ಕ್ಲೀನರ್‌ ಕೆಲಸ ಮಾಡುತ್ತಲೇ ಬಸ್‌ ಡ್ರೈವಿಂಗ್‌‌‌‌ನ್ನೂ ಕಲಿಯುತ್ತಿದ್ದ.

ಬೆಳಗ್ಗೆ ಎಂಟೂ ಕಾಲಕ್ಕೆ ವಿಷ್ಣುಮೂರ್ತಿ ಬಸ್ ನಮ್ಮ ಸ್ಟಾಪ್ ಬಿಡುತ್ತಿತ್ತು. ಎಂಟು ಗಂಟೆಗೆ ಮನೆಬಿಟ್ಟು ಅರ್ಧಮೈಲು ನಡೆದು ಭರ್ತಿ ಎಂಟೂ ಕಾಲಕ್ಕೆ ಬಸ್ ಇನ್ನೇನು ಹೊರಡುತ್ತದೆ ಅನ್ನುವಾಗ, ಓಡಿಹೋಗಿ ಬಸ್‌ ಹತ್ತುತ್ತಿದ್ದೆ. ಸಾದಿಕ್‌ ಬಾಗಿಲ ಬದಿ ನಿಂತಿರುತ್ತಿದ್ದ. ನಾನು ಹತ್ತಿದ ಕೂಡಲೇ ಕಿವಿ ಹರಿದುಹೋಗುವಂತೆ ವಿಷಲ್ ಹೊಡೆಯುತ್ತಿದ್ದ. ಡ್ರೈವರ್‌ ಅವನ ಖಾಸಾ ಅಣ್ಣನೇ. ನಾನು ಹತ್ತಿ ಕೂತ ಮೇಲೆ ನನ್ನ ಸ್ಥಿತಿ ನೋಡಿ ನಗುತ್ತಾ ಬಸ್‌ ಓಡಿಸುತ್ತಿದ್ದ. ಬಾಗಿಲ ಬಳಿ ಅವನನ್ನು ದಾಟಿ ಬರುವಾಗ ಅದೇಕೋ ಒಂಥರಾ ಅನಿಸುತ್ತಿತ್ತು. ಮತ್ತೆ ಕಿಟಕಿ ಹತ್ತಿರ ಕೂತು ಆಗಾಗ ಅವನ ಮುಖ ನೋಡುತ್ತಿದ್ದೆ. ಆ ಪುಣ್ಯಾತ್ಮ ಬಾಗಿಲ ಬಳಿ ನಿಂತು ಬಸ್ಸಿನ ಗಾಳಿಗೆ ಮುಖವೊಡ್ಡಿ ಚೊಂಪೆ ಕೂದಲನ್ನು ಹಾರಿಸುತ್ತಾ ಸ್ಟೈಲ್ ಹೊಡೆಯುತ್ತಿದ್ದ. ಆತ ನನ್ನತ್ತ ನೋಡುತ್ತಿಲ್ಲ, ಅನ್ನುವುದು ತಿಳಿದು ಒಳಗೊಳಗೇ ಬೇಜಾರಾಗಿ, ‘ನಾನೆಷ್ಟು ಪಾಪ’ ಅಂತ ನನ್ನ ಬಗೆಗೇ ಮರುಕಪಡುತ್ತಿದ್ದೆ.

ನಾನೊಬ್ಬಳು ಅಂತಲ್ಲ, ನಮ್ಮ ಬಸ್ಸಿನಲ್ಲಿ ಹೋಗುವ ಎಲ್ಲಾ ಹುಡುಗಿಯರೂ ಅವನನ್ನು ಇಷ್ಟಪಡುತ್ತಿದ್ದರು. ಒಳಗೇ ಮುಚ್ಚಿಡಲಿಕ್ಕಾಗದೇ ಆಗಾಗ ಅದು ಹೊರ ಬರುತ್ತಿತ್ತು.

ಆಮೇಲೆ ಒಂದು ದಿನ ಅವನು ಈ ಬಸ್ಸಿನ ಕ್ಲೀನರ್‍ ಕೆಲಸ ಬಿಟ್ಟ. ಅದು ನನಗೆ ಗೊತ್ತಾದದ್ದು ತಡವಾಗಿ. ಅಲ್ಲಿಯವರೆಗೆ ನಾನು ಬಸ್ ಅಷ್ಟು ದೂರದಲ್ಲಿರುವಾಗಲೇ ಬಾಗಿಲ ಹತ್ತಿರ ಅವನನ್ನು ಹುಡುಕುತ್ತಿದ್ದೆ. ಆಮೇಲೆ ಗೊತ್ತಾಯಿತು ಅವನು ವಿಶಾಲ್‌ ಬಸ್ಸಿನಲ್ಲಿ ಡ್ರೈವರ್‌ ಆಗಿ ಸೇರಿಕೊಂಡ ವಿಷಯ.

ನಾನು ಕೆಲವೊಮ್ಮೆ ಸಂಜೆ ಸ್ಕೂಲ್ ಮುಗಿಸಿ ಬರುವಾಗ ಅವನ ಬಸ್ಸು ಬರುತ್ತಿತ್ತು. ಆಗಲೂ ಕದ್ದು ಕದ್ದು ಅವನನ್ನ ನೋಡುತ್ತಿದ್ದೆ. ಅವರು ಎಂದಿನಂತೆ ಚೊಂಪೆ ಕೂದಲು ಹಾರಿಸುತ್ತಾ ಫೋಸು ಕೊಡುತ್ತಿದ್ದ.
ಈಗ ಡ್ರೈವರ್‌ ಆದ ಕಾರಣ ಅವನ ಮುಖದಲ್ಲಿ ಒಂಥರಾ ಗತ್ತೂ ಕಾಣುತ್ತಿತ್ತು.

ಮುಂದೆ ಕಾಲೇಜು ಸೇರಿದ ಮೇಲೆ ನಾನು ಹಾಸ್ಟೆಲ್ ಸೇರಿದ ಕಾರಣ ನಿಧಾನಕ್ಕೆ ಅವನ ನೆನಪು ಮರೆಯಾಯಿತು.

ಬಹುಶಃ ಅದಾದ ಮೇಲೆ ಅವನು ನನಗೆ ಸಿಕ್ಕಿದ್ದು ತಿಂಗಳ ಹಿಂದೆ ಊರಿಗೆ ಹೋದಾಗ. ನೀನಾಸಂ ಶಿಬಿರದಿಂದ ಅರ್ಧಕ್ಕೇ ಹೊರನಡೆದವಳು ಸೀದಾ ಹೋದದ್ದು ಮನೆಗೆ. ಆಗ ಕಾರ್ಕಳದಲ್ಲಿ ವಿಶಾಲ್ ಬಸ್‌ ನಿಂತಿತ್ತು. ನಾನು ಅತ್ತ ನೋಡುತ್ತಾ ನಿಂತಾಗ ಬಾಯಿತುಂಬಾ ಪಾನ್‌ ತುಂಬಿಕೊಂಬಿಕೊಂಡು ಘಂ ಅನ್ನುವ ವಾಸನೆಯೊಂದಿಗೆ ಬಂದು ಜೋರಾಗಿ ಬಾಗಿಲೆಳೆದು ಬಸ್ ಸ್ಟಾರ್ಟ್‌ ಮಾಡಿದ.

ಆ ಬಸ್‌ ಕೆರ್ವಾಶೆಗೆ ಹೊರಟಿದ್ದರೂ ನಾನು ಆ ಬಸ್ಸಿಗೆ ಹತ್ತಲಿಲ್ಲ. ಬೇರೊಂದು ಬಸ್ಸಿಗೆ ಕಾಯುತ್ತಾ ಕುಳಿತೆ. ಬಸ್‌ ಹೋದ ಮೇಲೆ, ಛೇ!ಅದೇ ಬಸ್‌ ಹಿಡಿಯಬೇಕಿತ್ತು ಅಂತನಿಸಿತು. ಸ್ವಲ್ಪ ಹೊತ್ತಾದ ಮೇಲೆ ಮತ್ತೊಂದು ಬಸ್‌ ಬಂತು. ಹತ್ತಿದೆ. ಸ್ವಲ್ಪ ದೂರ ಹೋಗಿರಬೇಕಷ್ಟೇ ನಮ್ಮ ಬಸ್‌ ಅವನಿದ್ದ ಬಸ್‌ನ್ನು ಓವರ್‌ಟೇಕ್ ಮಾಡಿ ಹೋಯಿತು. ನಾನತ್ತ ತಿರುಗಿದೆ. ಆತ ಗಾಳಿಗೆ ಮುಖವೊಡ್ಡಿ ಚೊಂಪೆಗೂದಲು ಹಾರಿಸುತ್ತಾ ನನ್ನತ್ತ ಕಣ್ ಮಿಟುಕಿಸಿದ!

Tuesday, October 14, 2008

ಮಂಜಿನ ಹಾದಿಯ ಬೆತ್ತಲ ಜೀವ

ಬೆಳಗ್ಗಿನ ಆರು ಗಂಟೆಯ ಸಮಯ. ಮಲೆನಾಡು ಇನ್ನೂ ಕತ್ತಲಲ್ಲಿತ್ತು. ಹಾಸಿಗೆ ಬಿಟ್ಟೇಳಲಾಗದ ಹಸಿ ಚಳಿ. ಅಕ್ಕ ಪಕ್ಕದ ಬೆಡ್ಡಿನ ಮೇಲಿದ್ದವರು ಕನಸಿನ ಹೊದಿಕೆಯನ್ನಿನ್ನೂ ಸರಿಸಿರಲಿಲ್ಲ. ಆದರೆ ಆಗಲೇ ಹಂಡೆಯಲ್ಲಿ ಬಿಸಿ ನೀರು ಕಾಯುತ್ತಿತ್ತು. ನೀರು ಮುಖಕ್ಕೆ ಬಿದ್ದಾಗ ಅದೊಂಥರಾ ಸುಖ. ಆದರೂ ಬಿಡದ ಚಳಿಯ ಮೋಹ. ಸ್ವೆಟರನ್ನೂ ಹಾಕದೇ ಎದ್ದು ಹೊರನಡೆದೆ. ಆಗಲೇ ನಾಟಕ ಕಲಾವಿದರು ಎದ್ದು ಬೆಳಗ್ಗಿನ ರಿಹರ್ಸಲ್‌ನಲ್ಲಿ ಬೆವರಿಳಿಸುತ್ತಿದ್ದರು. ಉಳಿದಂತೆ ನೀನಾಸಂ ತಣ್ಣಗಿತ್ತು.

ಆಗಲೇ ನಸು ಬೆಳಕು. ಅಡಿಗೆ ಮನೆಯಿಂದ ಹೊರಟ ಘಮಟು ಹೊಗೆ ಮಂಜಿನೊಂದಿಗೆ ಸೇರಿ ವಿಶಿಷ್ಟ ಘಮ ಗಾಳಿಯಲ್ಲಿ ಬೆರೆತಿತ್ತು. ದಟ್ಟ ಹಬ್ಬಿದ ಮಂಜಿನಲ್ಲಿ ನಡೆದು ಹೋಗುವಾಗ ಮನಸ್ಸಿಗೆ ಸುಮ್ಮ ಸುಮ್ಮನೇ ಸಂಭ್ರಮ. ನೀನಾಸಂ ದಾಟಿ ಹೊರಬಂದು ಬೀದಿಗಿಳಿದೆ. ಟಷ್ಟರಲ್ಲಿ ನೈಟಿ ಹಾಕಿಕೊಂಡು ತಲೆಗಿಡೀ ಮಫ್ಲರ್‍ ಸುತ್ತಿಕೊಂಡು ವೈದೇಹಿ ಪ್ರತ್ಯಕ್ಷ. ವಿಪರೀತ ಮಂಜಿದೆಯಲ್ವಾ ಅಂತ ಅಮ್ಮನಂತಾ ನಗೆ ನಕ್ಕು ಮುಂದೆ ನಡೆದರು, ನಾನು ಹೂಂ ಅನ್ನಲಿಲ್ಲ. ಸುಮ್ಮನೇ ನಕ್ಕೆ. ಆಮೇಲೆ ನಾನ್ಯಾಕೆ ಹಾಗೆ ಮಾಡಿದೆ ಅಂತ ನನಗೇ ಬೈಕೊಂಡೆ.

ಹಿಮ ಅಂದ್ರೆ ಅದೆಂಥಾ ಹಿಮ, ನಮ್ಮೆದುರು ಏನು ಬರುತ್ತಿದೆ ಅಂತಾನೇ ಗೊತ್ತಾಗುತ್ತಿರಲಿಲ್ಲ. ಮಾರ್ಗದ ಮಧ್ಯೆ ಗೂಳಿಯಂತೆ ಹೋಗುತ್ತಿದ್ದ ನನಗೆ ಪಕ್ಕದಲ್ಲೇ ಸೈಕಲ್ಲೊಂದು ಮೈಗೆ ತಾಗುವಂತೆ ಹಾದುಹೋದಾಗ ಗಾಭರಿ. ಕ್ಷಣದಲ್ಲಿ ಒಂಥರಾ ಹುಚ್ಚು ಹುರುಪು, ಮಂಜಿಂದ ನೆನೆದ ಬಲೆಯೊಂದು ಮುಖಕ್ಕೆ ಅಂಟಿಕೊಂಡಿತು. ಅದನ್ನು ತೆಗೆಯುತ್ತಾ ಮುಂದೆ ನಡೆದೆ. ಅಲ್ಲೊಬ್ಬ ಹೆಣ್ಣು ಮಗಳು ಹುಲ್ಲಿನ ಹೊರೆಯನ್ನು ಸೈಕಲ್‌ ಹಿಂದೆ ಕಟ್ಟಿ ಸೈಕಲ್ ತುಳಿಯುತ್ತಾ ಬರುತ್ತಿದ್ದಳು. ನಿಜಕ್ಕೂ ಹೆಗ್ಗೋಡು ಸುಧಾರಿಸಿದೆ ಅಂದುಕೊಂಡೆ. ಯಾಕೆಂದರೆ ನಮ್ಮ ಊರಲ್ಲಿ ನಮ್ಮ ಪ್ರಾಯದ ಹುಡುಗಿಯರೂ ಸೈಕಲ್ ತುಳಿಯಲು ಹಿಂಜರಿಯುತ್ತಾರೆ. ಆದರೆ ಇಲ್ಲಿ ನಮ್ಮ ಅಮ್ಮನಷ್ಟು ಪ್ರಾಯದ ಹೆಂಗಸು ಸೈಕಲ್‌ನ್ನು ಲೀಲಾಜಾಲವಾಗಿ ತುಳಿಯುತ್ತಾ ಹೋಗುವುದನ್ನು ನೋಡಿ ಒಳಗೊಳಗೇ ಖುಷಿ.

ಡೇಲಿಯಾ, ಗುಲಾಬಿ, ಬಣ್ಣಬಣ್ಣದ ದಾಸವಾಳಗಳ ಅಂಗಳಗಳು ಕಾಣಸಿಕ್ಕವು. ಮನೆಗಳಲ್ಲಿ ಬೆಳಗಿನ ತಿಂಡಿ ತಯಾರಾಗುತ್ತಿತ್ತು. ಆಗಷ್ಟೇ ಎದ್ದ ಎಳೇ ಮಗುವೊಂದು ಮುಸು ಮುಸು ಅಳುತ್ತಾ ಅಮ್ಮನಿಂದ ಬಯಿಸಿಕೊಳ್ಳುತ್ತಿತ್ತು. ‘ ಈ ಬಾರಿ ನೀನಾಸಂಗೆ ಜನ ಕಡಿಮೆ ಅಂತೆ’ , ಹಾಲು ಕ್ಯಾನ್‌ ಕಟ್ಟಿಕೊಂಡು ಸೈಕಲ್ ಹೊಡೆಯುತ್ತಿದ್ದ ಮೂರ್‌ ನಾಲು ಜನ ತಮ್ಮ ಪಾಡಿಗೆ ಮಾತಾಡಿಕೊಳ್ಳುತ್ತಾ ಹೋಗುತ್ತಿದ್ದರು. ಅವರನ್ನು ನನ್ನನ್ನು ನೋಡಿಯೇ ಹೀಗೆ ಹೇಳಿದ್ದಿರಬಹುದಾ ಅಂದುಕೊಂಡೆ.

ನನ್ನೆದುರು ಎರಡು ದಾರಿ. ಒಂದು ಭೀಮನ ಕೋಣೆಗೆ ಹೋಗುತ್ತಿತ್ತು. ಇನ್ನೊಂದು ಕಾಡು ಹಾದಿ. ಆದದ್ದಾಗಲಿ, ಅಂತ ಕಾಡು ಹಾದಿಯಲ್ಲೇ ಹೆಜ್ಜೆ ಹಾಕಿದೆ. ಬೆಳಕು ಗಾಢವಾಗುತ್ತಿರುವಂತೇ ಮಂಜು ನಿಧಾನಕ್ಕೆ ಕರಗುತ್ತಿತ್ತು. ಮೂಗಿನಲ್ಲಿ ನಸು ನವೆ, ದೂರದಲ್ಲಿ ಮನೆಯೊಂದರಿಂದ ಹೊಗೆ ಹೋಗುತ್ತಿತ್ತು. ಆಮೇಲೆ ಅಂತಹಾ ಮನೆ ಕಾಣಲೂ ಇಲ್ಲ. ತಣ್ಣನೆಯ ಹವೆಯಲ್ಲಿ ತಲೆಗೊಂದು ಶಾಲೂ ಹಾಕದೇ ಬಂದಿದ್ದೆ. ಕಾಡಿನೊಳಗೆ ಇಳಿದಿದ್ದೇ ಚಳಿ ಚಳಿ ಸುರು. ಹಕ್ಕಿಗಳ ಅದೇನೋ ತಮಗೆ ತಾವೇ ಗುಟ್ಟು ಹೇಳಿಕೊಳ್ಳುವಂತೆ ಪಿಸಿ ಪಿಸಿ ಮಾತನಾಡುತ್ತಿದ್ದವು. ಬೆಳಗಿಂದ ಸಂಜೆಯವರೆಗೆ ಮಾತಾಡಿದ್ರೂ ನಿಮ್ದು ಮಾತಾಡಿ ಮುಗಿಯುವುದಿಲ್ಲವಲ್ಲ ಮಾರಾಯ್ರೆ ಅಂತ ಹೇಳಬೇಕು ಅನಿಸಿತು. ಯೋಗ್ಯತೆ ಇಲ್ಲದವರು ಜಾಸ್ತಿ ಮಾತಾಡಬಾರದು ಅಂದುಕೊಂಡು ಸುಮ್ಮನಾದೆ. ಮಂಗಗಳು ಗುಂಪು ಅಲ್ಲೇ ಓಡಾಡುತ್ತಿತ್ತು. ದೊಡ್ಡ ಮಂಗನ ಹೊಟ್ಟೆಯನ್ನು ಗಟ್ಟಿ ಹಿಡಿದ ಪುಟ್ಟು ಮಂಗನ ಮರಿ ಪಿಳಿ ಪಿಳಿ ಕಣ್ಣು ಬಿಡುತ್ತಿತ್ತು. ಅದನ್ನು ನೋಡಿ ಮುದ್ದುಕ್ಕಿತು. ಅದೇನೆನೆಸಿತೋ ಆ ಅಮ್ಮ ಮಂಗ ನನ್ನತ್ತಲೇ ನೋಡುತ್ತಾ ಗುರ್‍..ಅನ್ನುತ್ತಾ ಕೊಂಬೆಯಿಂದ ಕೆಳಗಿಳಿಯತೊಡಗಿತು. ಒಳಗೊಳಗೇ ಹೆದರಿಕೆಯಾಗಿ ಅಲ್ಲಿಂದ ಮೆಲ್ಲನೆ ಜಾರಿಕೊಂಡು ಹಿಂತಿರುಗಿ ನಡೆದೆ.

ಸ್ವಲ್ಪ ಮುಂದೆ ಬಂದಿರಬೇಕು. ಹಾದಿಯ ಮತ್ತೊಂದು ಬದಿಯ ಕಾಡಿನತ್ತ ತಿರುಗಿ ನೋಡಿದೆ. ಮರಗಳ ಮರೆಯಲ್ಲಿ ಯಾವುದೋ ಆಕೃತಿ ತುಸು ಅಲುಗಾಡಿದಂತೆ ಕಂಡಿತು. ಕುತೂಹಲದಿಂದ ಅತ್ತ ನಡೆದೆ. ಮರೆಯಾಗಿದ್ದ ಮರವ ಹತ್ತಿರ ಹೋಗಿ ಇಣುಕಿದಾಗ, ಆ ಕ್ಷಣ ಬಾಯಿಯ ಪಸೆಯಾರಿತ್ತು!

ವ್ಯಕ್ತಿಯೊಬ್ಬ ಬೆತ್ತಲಾಗಿ ಅಲುಗಾಡದಂತೆ ನಿಂತಿದ್ದ. ಎತ್ತಲೋ ದೃಷ್ಟಿ ನಟ್ಟಿತ್ತು. ಕಳೆದುಹೋದವನಂತೆ ಕಾಣುತ್ತಿದ್ದ. ಕಡು ಕಪ್ಪು ಬಣ್ಣದ ಎತ್ತರದ ಧಡೂತಿ ದೇಹ, ರೋಮವೇ ಮೈಯಾದಂತಾ ದೇಹ. ಒಂದು ಬದಿಯಷ್ಟೇ ಕಾಣುತ್ತಿದ್ದ ಕಾರಣ ಆತನ ಮುಖಭಾವ ಸ್ಪಷ್ಟವಾಗುತ್ತಿರಲಿಲ್ಲ. ಮೈ ಮೇಲೆ ಒಂದು ತುಣುಕೂ ಬಟ್ಟೆಯಿಲ್ಲದೆ ನಿಂತದ್ದ. ಆ ಚಳಿಯೂ ಅವನಿಗೆ ಸಹಜವೇ ಆದಂತಿತ್ತು. ಅವನೂ ತೀರಾ ಸಹಜವಾಗಿ ಮಾಮೂಲಿನಂತಿದ್ದ.

ಆತ ಪ್ರಕೃತಿಯ ಭಾಗವೇ ಆಗಿ ಹೋಗಿದ್ದ. ನಿಸರ್ಗದ ನಗ್ನತೆಯೊಳಗೆ ಸೇರಿ ಹೋಗಿದ್ದ. ಹೌದು, ಇಲ್ಲಿ ಎಲ್ಲವೂ ಬೆತ್ತಲು. ಸರ್ವವೂ ಸರಳ, ಸಹಜ. ನಾನೊಬ್ಬಳು ಇಲ್ಲಿಯವಳಲ್ಲ ಅನಿಸತೊಡಗಿತು. ಮೌನವಾಗಿ ತಿರುಗಿ ನಡೆದು ರೂಮು ಸೇರಿಕೊಂಡೆ. ಯಾಕೋ ಎಲ್ಲಾ ಅಪರಿಚಿತ ಅನಿಸತೊಡಗಿತು. ಮನೆ ಪದೇ ಪದೇ ನೆನಪಾಯಿತು. ಮರುದಿನ ಬೆಳಗ್ಗೆಯೇ ಊರಿಗೆ ಹೊರಟು ನಿಂತೆ.

Sunday, September 28, 2008

ಸ್ಪೋಟ

ನಾಯಿ ಬಾಲಕ್ಕೆ ಪಟಾಕಿ ಕಟ್ಟಿ
ಅದು ಸಿಡಿಯುವುದನ್ನೇ
ಕಾಯುವ ಪೋಲಿ ಹುಡುಗ
ತುಟಿ ಕಚ್ಚಿ ಕಿವಿ ನಿಮಿರಿಸಿ
ನಾಯಿ ಕುಂಞ ಎಂದರಚುತ್ತಾ
ಓಡುವುದನ್ನೇ ನೆನೆಸುವಾಗ
ಅದೆಂಥಾ ಮೋಜು..

ಪಟಾಕಿ ಯಾವಾಗ ಸಿಡಿದು ಬಿಡುತ್ತದೋ
ಹುಡುಗನಿಗೆ ಕ್ಷಣ ಅನಂತ
ಪಕ್ಕದ ಐಸ್‌ಕ್ಯಾಂಡಿ ಹಾರ್ನ್ ಸಹ
ಕಿವಿಗೆ ದೂರ

ಎದೆ ನಡುಗಿಸುವ ಸದ್ದಿಗೆ
ಕಿವಿ ತಯಾರು
ತುಂಟ ಕಣ್ಣಲ್ಲಿ ಇನ್ನಿಲ್ಲದ ಕಾತರ

ಆ ಕ್ಷಣ ಕಣ್ಣು ಎವೆ ಮುಚ್ಚಲಿಲ್ಲ
ಎದೆ ಬಡಿತ ಏರಿತ್ತು
ದೇಹವ್ಯಾಪಿ ಉದ್ವಿಗ್ನತೆ
ಅವನು ಅವನನ್ನೇ ಮೀರುವುದರಲ್ಲಿದ್ದ

ನಾಯಿ ನಾಲಗೆ ಚಾಚಿ
ಹುಡುಗನನ್ನು ಸಮೀಪಿಸಿತು.
ಅವನ ಕಾಲು ನೆಕ್ಕಿ ಬಾಲ ಅಲ್ಲಾಡಿಸಿತು
ಅಲ್ಲಿ ಸ್ಪೋಟವೊಂದು ಕಾದುಕುಳಿತಿತ್ತು.

Friday, August 29, 2008

ನಮ್ಮಪ್ಪ ತೋಟ ಮಾರ್‌ತಾರಂತೆ

ಮೊನ್ನೆ ತಾನೇ ಮನೆಗೆ ಹೋಗಿದ್ದೆ. ಬಸ್ಸಿಂದ ಸಂಕದ ಬಳಿ ಇಳಿದಿದ್ದೇ ಜೋರು ಮಳೆ . ಲಗ್ಗೇಜು, ಬಟ್ಟೆ, ನಾನು ಎಲ್ಲ ಒದ್ದೆ ಮುದ್ದೆ. ಹಾಗೇ ಮನೆಯತ್ತ ಕಾಲು ಹಾಕಿದೆ. ಅದು ಗುಡ್ಡದ ದಾರಿ. ಮಳೆ ಬಂತೆಂದರೆ, ಭೂಮಿಯೊಳಗೆ ಒರತೆಯೆದ್ದು, ನೆಲ ಒದ್ದೆಯಾಗಿರುತ್ತದೆ. ಅಷ್ಟೇ ಅಲ್ಲ, ಅದರ ಮೇಲೆ ಕಾಲಿಟ್ಟರೆ, ಕಾಲು ಹೂತುಹೋಗುತ್ತದೆ. ಮತ್ತೆ ಕಷ್ಟದಿಂದ ಕಾಲನ್ನು ಹೊರತೆಗೆದರೆ, ಚಪ್ಪಲಿ ಮಾಯ..ಅದ್ಯಾವುದೋ ಮಾಯದಲ್ಲಿ ಅದು ನೆಲದೊಳಕ್ಕೇ ಇಳಿದಿರುತ್ತದೆ. ದಿನವಿಡೀ ಮಣ್ಣೊಳಗೆ ಕೈ ಹಾಕಿದರೂ ಚಪ್ಪಲಿ ಸಿಗುವುದಿಲ್ಲ. ಶಾಲೆಗೆ ಹೋಗುತ್ತಿದ್ದಾಗ, ನಮ್ಮ ಅದೆಷ್ಟೋ ಚಪ್ಪಲಿಗಳು ಇಲ್ಲಿ ಕಳೆದುಹೋಗಿದ್ದವು. ಅದಕ್ಕೇ ಮಳೆಗಾಲ ಮುಗಿಯುವವರೆಗೆ ಅಪ್ಪ ಚಪ್ಪಲಿ ತೆಗೆದುಕೊಡುತ್ತಿರಲಿಲ್ಲ.

ಹೀಗೆ ಗಟ್ಟಿನೆಲದ ಮೇಲೇ ಕಾಲಿಡುತ್ತಾ, ಕಲ್ಲಿಂದ ಕಲ್ಲಿಗೆ ಹಾರುತ್ತಾ ಮುಂದೆ ಹೋದರೆ ಅಲ್ಲಿ ತೋಡೊಂದು (ಹಳ್ಳ) ಕೆಂಪು ನೀರಿಂದ ತುಂಬಿ ಹರಿಯುತ್ತಿತ್ತು. ಅಲ್ಲಿಯವರೆಗೆ ಹೇಗೋ ಸರ್ಕಸ್‌ ಮಾಡಿ ಚಪ್ಪಲಿ ಒದ್ದೆಯಾಗದಂತೆ ನಡೆದದ್ದೇ ಬಂತು. ಸರಿ, ಆದದ್ದಾಗಲಿ, ಅಂತ ಚಪ್ಪಲಿಯನ್ನು ಕೈಯಲ್ಲಿ ಹಿಡಿದುಕೊಂಡು ತೋಡುದಾಟಿದೆ.


ಮುಂದೆ ಕಾಡುದಾರಿ.ಹಿಂದೆ, ಅಲ್ಲಿ ದಟ್ಟ ಕಾಡಿತ್ತು. ಈಗ ಅದು ರಬ್ಬರ್‌ಕಾಡಾಗಿ ಬದಲಾಗಿದೆ. ದೂರದ ಕೇರಳದಿಂದ ಬಂದ ಕೊಚ್ಚಿ ಕ್ರಿಶ್ಚಿಯನ್ನರು ಇಲ್ಲಿ ಖಾಲಿ ಜಾಗವನ್ನು ಕೊಂಡು ಅಲ್ಲಿ ರಬ್ಬರ್‌ ಹಾಕುವ ದಂಧೆ ಮಾಡುತ್ತಿದ್ದಾರೆ. ಇದು ಸತತ ಹತ್ತು ಹದಿನೈದು ವರ್ಷಗಳಿಂದ ನಮ್ಮೂರಲ್ಲಿ ಅವ್ಯಾಹತವಾಗಿ ನಡೆದುಕೊಂಡು ಬಂದಿದೆ. ದುಪ್ಪಟ್ಟು ಹಣಕೊಟ್ಟು ಆಸ್ತಿ ಖರೀದಿಸುವ ಕಾರಣ ಊರವರಾರೂ ಈ ಬಗ್ಗೆ ಚಕಾರವೆತ್ತಯವುದಿಲ್ಲ. ನಮ್ಮೂರಲ್ಲಿ ನಿಧಾನವಾಗಿ ಭತ್ತದ ಗದ್ದೆಗಳು ಮಾಯವಾಗುತ್ತಿವೆ. ಅಲ್ಲೆಲ್ಲ ಅಡಿಕೆ ಗಿಡಗಳು ತಲೆಯೆತ್ತಿವೆ. ಕಾಡಿದ್ದ ಜಾಗವನ್ನೆಲ್ಲ ರಬ್ಬರ್‌ ಆಕ್ರಮಿಸಿದೆ.



ಹಾಗೇ ಮುಂದೆನಡೆದೆ..ಅಲ್ಲಿ ಮತ್ತೊಂದು ತೋಡು. ಅವನು ಮೊದಲ ಬಾರಿ ನನ್ನ ಮನೆಗೆ ಬಂದಾಗ ಈ ಹಳ್ಳ ನೋಡಿ, ‘ಏಳು ಸಮುದ್ರ ದಾಟಿ ರಾಜಕುಮಾರಿಯನ್ನು ನೋಡಲು ಬಂದ ಹಾಗಾಯಿತು’ ಅಂದಿದ್ದ.

ಗೇಟಿನ ಹತ್ತಿರ ಬಂದಾಗ ಡಿಂಗ (ನಾಯಿ) ಆ ಮಳೆಯಲ್ಲೂ ಓಡಿ ಬಂದ. ಅಷ್ಟೆತ್ತರ ಹಾರಿ ಕುಣಿದು ನನ್ನ ವೇಲ್‌ ಎಳೆದುಕೊಂಡೇ ಹೋದ. ಈ ಡಿಂಗ ಪುಟಾಣಿ ಮರಿಯಾಗಿ ಮನೆಗೆ ಬಂದಿದ್ದ. ಆಗ ಅವನಿಗೆ ಬೊಗಳುವ ಹುರುಪು, ಅದೇ ಉತ್ಸಾಹದಲ್ಲಿ ಪಕ್ಕದ ಮನೆ ನಾಯಿಗೂ ಬೊಗಳಲು ಹೋಗಿ ಅದರ ಕೈಯಲ್ಲಿ ಕಚ್ಚಿಸಿಕೊಂಡಿದ್ದ. ಕಾಲು ಮುರಿದೇ ಹೋಯಿತು ಅಂದು ಕೊಂಡಿದ್ದೆವು. ಆದರೆ, ನಿಧಾನಕ್ಕೆ ಚೇತರಿಸಿಕೊಂಡ ಡಿಂಗ ತಿಂಗಳು ಕಳೆಯುವುದರೊಳಗೆ ಜಿಗಿ ಜಿಗಿದು ಓಡತೊಡಗಿದ್ದ. ಈಗ ಮುದುಕನಾಗುತ್ತಾ ಬಂದಿದ್ದಾನೆ, ಹಿಂದಿನ ಉತ್ಸಾಹ ಈಗ ಉಳಿದಿಲ್ಲ. ಆದ್ರೆ ಬಟ್ಟೆ ಎಳೆಯುವ ಕೆಟ್ಟ ಬುದ್ಧಿ ಮಾತ್ರ ಬಿಟ್ಟಿಲ್ಲ.



ಮನೆಯೊಳಗೆ ಕಾಲಿಟ್ಟರೆ ಅಡಿಕೆಯ ಮಕ್ಕು(ಧೂಳು)..ಅಮ್ಮ ಪತ್ರೊಡೆಗೆ ಅಕ್ಕಿ ಅರೆಯುತ್ತಿದ್ದಳು. ಅಮ್ಮನ ಮುಖ ನೋಡಿದ್ದೇ ಒಮ್ಮೆ ರಿಫ್ರೆಶ್‌ ಆದ ಅನುಭವ. ಆದರೂ ಮನೆಗೆ ಬಂದಾಗ ಹಲವು ಬಗೆಯ ನೋವುಗಳು ಒಮ್ಮೆಗೆ ಉದ್ಭವಿಸಿ ಬಿಡುತ್ತವೆ. ಬೇರೇನಕ್ಕೂ ಅಲ್ಲ, ಅಲ್ಲಿ ನೋವು ಇಲ್ಲಿ ನೋವು ಅಂದರೆ ಅಮ್ಮನ ಕಾಳಜಿಯೂ ಜಾಸ್ತಿಯಾಗುತ್ತದೆ. ಅವಳ ಕಣ್ಣಲ್ಲಿ ವಿಚಿತ್ರ ಪ್ರೀತಿ ಇಣುಕುತ್ತದೆ. ಒಂದು ಬಗೆಯ ತುಡಿತ ಮನಸ್ಸನ್ನಾವರಿಸುತ್ತದೆ. ಕಾಲಿಗೆ ತಲೆಗೆ ಎಣ್ಣೆ ತಿಕ್ಕಿ, ಬೇಗ ಗುಣ ಆಗತ್ತೆ, ಅಂದಾಗ ನನಗೆ ಕಳ್ಳ ಖುಷಿ.
‘ ಇಲ್ಲಿಗೆ ಬಂದ ಕೂಡ್ಲೆ ಎಲ್ಲ ನೋವೂ ಶುರುವಾಗಿ ಬಿಡತ್ತೆ ಅವಳಿಗೆ ’ ತಮ್ಮನ ಮೂದಲಿಕೆ.



ಅಪ್ಪ ಡೈರಿಗೆ ಹೋದವರು ಇನ್ನೂ ಬಂದಿರಲಿಲ್ಲ. ಅವರು ಬಂದಾಗ ಗಂಟೆ ಒಂಭತ್ತು. ಹಿಂದಿನ ಸೆಕ್ರೆಟರಿ ಡೈರಿಯ ಹಣ ತಿಂದ ಕಾರಣ, ಡೈರಿ ಲೆಕ್ಕ ಅಪ್ಪನ ತಲೆಗೆ ಬಿದ್ದಿತ್ತು. ಮುಗಿಯದ ತೋಟದ ಕೆಲಸದ ನಡುವೆಯೂ ದಾಕ್ಷಿಣ್ಯಕ್ಕೆ ಅಪ್ಪ ಈ ಕೆಲಸ ಒಪ್ಪಿದ್ದರು. ಮನೆಗೆ ಬಂದವರೇ ಸ್ನಾನ ಪೂಜೆ ಮುಗಿಸಿ ಮತ್ತೆ ಲೆಕ್ಕದಲ್ಲಿ ಮುಳುಗಿದ್ದರು. ರಾತ್ರಿ ತುಂಬ ಹೊತ್ತಿನವರೆಗೆ ಲೆಕ್ಕ ಮುಂದುವರಿದಿತ್ತು. ಅದರ ನಡು ನಡುವೆ ನನ್ನೊಡನೆ ಮಾತು. ಒಮ್ಮೆ,‘ ನಾನು ಈ ಜಾಗ ಮಾರ್‍ತೀನಿ’ ಅಂದರು. ಈ ಮಾತನ್ನು ಅವರು ಆವಾಗವಾಗ ಹೇಳುತ್ತಿದ್ದ ಕಾರಣ ನಾನು, ‘ ಹ್ಞುಂ’ ಅಂದು ಸುಮ್ಮನಾದೆ.

ಆದರೆ, ಅಪ್ಪ ನಿರ್ಧರಿಸಿದಂತಿತ್ತು.

‘ ಕಾರ್ಕಳದಲ್ಲಿ ಎಲ್ಲಾದರೂ ಹಿತ್ತಲು ಮನೆ ಇದೆಯಾ ಅಂತ ವಿಚಾರಿಸ್ತಾ ಇದೀನಿ. ಈ ಜಾಗ ಸೇಲಾದ ಕೂಡ್ಲೇ, ಪೇಟೆಯಲ್ಲಿ ಸಣ್ಣ ಮನೆ ಮಾಡಿ, ಜಾಗ ಮಾರಿದ ಹಣದಿಂದ ಬರುವ ಬಡ್ಡಿಯಲ್ಲಿ ಜೀವನ ಮಾಡೋದು. ’ ಅಂದರು.



ನಮ್ಮದು ಮುನ್ನೂರ ಅರುವತ್ತೈದು ದಿನಗಳೂ ಸಮೃದ್ಧ ನೀರಿರುವ, ಕಾಡು ಪ್ರಾಣಿಗಳ ಕಾಟ ಬಿಟ್ಟರೆ ಅಷ್ಟೇನೂ ತೊಂದರೆ ಇಲ್ಲದ ಜಾಗ. ಆದರೆ ಇಲ್ಲಿ ಗ್ರಾಮಕ್ಕೊಂದರಂತೆ ಗೇರು ಬೀಜ (ಗೋಡಂಬಿ) ಕಾರ್ಖಾನೆಗಳು ಎದ್ದಿರುವ ಕಾರಣ ಕೂಲಿಯವರೆಲ್ಲ ಆ ಕೆಲಸಕ್ಕೇ ಹೋಗುತ್ತಿದ್ದಾರೆ. ಅಲ್ಲಿ ಕೂಲಿಯವರಿಗೆ ಅಪ್ಪ ಕೊಡುವಷ್ಟು ಸಂಬಳ ಸಿಗದಿದ್ದರೂ ಅದು ಶ್ರಮ ಬೇಡುವ ಕೆಲಸವಲ್ಲ. ಕೂತು ಗೇರು ಬೀಜದ ಸಿಪ್ಪೆ ತೆಗೆಯುವ ಕೆಲಸ. ಹಾಗಾಗಿ ಇಷ್ಟ ಪಟ್ಟು ಹೋಗುತ್ತಿದ್ದರು. ಇಲ್ಲವಾದರೆ ಅವರು ಕೆಲಸಕ್ಕೆ ಹೋಗುತ್ತಿದ್ದದ್ದು ರಬ್ಬರ್‍ ತೋಟ ಮಾಡುವ ಕೊಚ್ಚಿ ಕ್ರಿಶ್ಷಿಯನ್ನರ ಮನೆಗೆ. ಯಾಕೆಂದರೆ ಅವರು ಮಾಂಸ, ಹೆಂಡ ಕೊಡ್ತಾರೆ. ನಮ್ಮಪ್ಪ ಬ್ರಾಹ್ಮಣರಾದ ಕಾರಣ ಅದೆಲ್ಲ ಕೊಡಿಸುವುದು ಹೇಗೆ?

ಆದರೂ ಆಗಾಗ ಯಶೋಧಾ ಕೆಲಸಕ್ಕೆ ಬರುತ್ತಿರುತ್ತಾಳೆ. ಗಂಡಾಳಿಗಿಂತ ಏನೂ ಕಡಿಮೆಯಿಲ್ಲದಂತೆ ದುಡಿಯುತ್ತಿದ್ದರೂ ಅವಳಿಗೆ ಮಾತ್ರ ಕಡಿಮೆ ಸಂಬಳ. ಅವಳಿಗಿಂತ ಎಷ್ಟೋ ಕಡಿಮೆ ಕೆಲಸ ಮಾಡುವ ಗಂಡಾಳಿಗೂ ಅವಳಿಗಿಂತ ಹೆಚ್ಚು ಕೂಲಿ. ಅದು ಅವಳ ಗಮನ ಬರುತ್ತಿರಲಿಲ್ಲ ಅಂತಲ್ಲ, ಆದರೂ ಏನೂ ಮಾತಾಡದೇ ಸುಮ್ಮನಾಗುತ್ತಿದ್ದಳು.



ಯಶೋದಾ ಮತ್ತು ಅಪ್ಪ ಸೇರಿಕೊಂಡು ಇಡೀ ತೋಟಕ್ಕೆ ಮದ್ದು ಬಿಡುತ್ತಾರೆ. ಹತ್ತಿರತ್ತಿರ ಹತ್ತೆಕರೆ ತೋಟಕ್ಕೆ ಮದ್ದು ಬಿಟ್ಟು ಮುಗಿಸುವಾಗ ಅಪ್ಪ ಹಿಂಡಿ ಹಿಪ್ಪೆಯಾದಂತಾಗುತ್ತಾರೆ. ಇನ್ನು ಅಡಿಕೆ ಕೊಯಿಲಿನ ಸಮಯ ಬಂತೆಂದರೆ ಆ ಕೆಲಸವನ್ನೂ ಅಪ್ಪ, ಯಶೋಧಾ ಸೇರಿಕೊಂಡೇ ಮಾಡುತ್ತಾರೆ.



ಅಪ್ಪನ ಪ್ರಾಯವೀಗ ಐವತ್ತೈದರ ಹತ್ತಿರ. ಕೃಷಿಯ ಬಗೆಗೆ ಅವರಿಗೆ ಮೊದಲಿದ್ದ ಆಸಕ್ತಿ ಕುಂದಿ ಹೋಗಿದೆ. ಮನಸ್ಸು ವಿಶ್ರಾಂತಿ ಬಯಸುತ್ತಿದೆ. ಸಹಾಯ ಮಾಡೋಣವೆಂದರೆ ನಾನು ಬೆಂಗಳೂರಿನಲ್ಲಿದ್ದೇನೆ. ಕೆಲಸ ಬಿಟ್ಟು ಬರುತ್ತೇನೆಂದರೆ ಅಪ್ಪ ಕೇಳುವುದಿಲ್ಲ, ‘ ನೀನು ಇಲ್ಲಿ ಬಂದರೂ ಮಾಡುವುದು ಇಷ್ಟೇ ಇದೆ. ಸುಮ್ಮನೆ ಏನೆಲ್ಲ ತಲೆಗೆ ಹಚ್ಚಿಕೊಳ್ಳಬೇಡ. ನಾವು ಹೇಗೋ ಸುಧಾರಿಸ್ತೇವೆ’ ಅಂತಾರೆ. ತಮ್ಮ ಇನ್ನೂ ಚಿಕ್ಕವನು, ಈಗಷ್ಟೇ ಹತ್ತನೇ ಕ್ಲಾಸು ಮುಗಿಸಿ ಕಾಲೇಜು ಸೇರಿಕೊಂಡಿದ್ದಾನೆ.



ಅಪ್ಪನತ್ರ ಅಷ್ಟು ಒಳ್ಳೆ ಜಾಗ ಮಾರಬೇಡ ಅಂತ ಅನ್ನೋಣ ಅನಿಸುತ್ತದೆ. ಆದರೆ, ಅದು ಹೇಗೆ?ಜಗುಲಿಯ ಕಟ್ಟೆಯೇರಿದರೆ ಕಾಣುವ ಪಶ್ಷಿಮ ಘಟ್ಟದ ಸಾಲು, ತೋಟದ ಪಕ್ಕ ಸಶಬ್ಧವಾಗಿ ಹರಿವ ಸ್ವರ್ಣೆ, ನಮ್ಮ ಬಾಲ್ಯಕ್ಕೆ ಬೆಳವಣಿಗೆಗೆ ಸಾಕ್ಷಿಯಾಗಿ ನಿಲ್ಲುವ ತೋಟ, ಎತ್ತರ ಮಹಡಿಯ ಪುಟ್ಟಮನೆ ಚಿತ್ರ ಕಣ್ಣೆದುರು ಬರುತ್ತದೆ. ಜಾಗ ಮಾರಿದರೆ ಇದೆಲ್ಲ ಬಾಲ್ಯದಂತೆ ಒಂದು ನೆನಪು ಮಾತ್ರ.

ಬೆಂಗಳೂರಿನ ಎ.ಸಿ ರೂಮಿನಲ್ಲಿ ಕೂತು ಇದೆಲ್ಲ ಬರೆಯುವ ಹೊತ್ತಿಗೆ ಅಪ್ಪ ದನದ ಕೊಟ್ಟಿಗೆ ಪಕ್ಕದ ಕೋಣೆಯಲ್ಲಿ ಕೂತು ಅಡಿಕೆ ಸುಲಿಯುತ್ತಿರುತ್ತಾರೆ. ಅಡಿಕೆ ಸಿಪ್ಪೆಯ ಮೇಲೆ ಸುತ್ತಿಕೋಂಡು ಮಲಗಿ ಬೆಚ್ಚನೆಯೊಳಗೆ ಸೇರಿ ಹೋಗಿರುತ್ತಾನೆ ಡಿಂಗ.

Friday, August 22, 2008

ಇಳೆಯ ಕನವರಿಕೆ

ಉಲ್ಲಾಸ, ಉತ್ಸಾಹ, ಒಳಗಿಂದೊಳಗೇ ಉಕ್ಕುವ ಖುಷಿ
ಹಾಗೆ ತಣ್ಣಗೆ ಆವರಿಸಿ, ಹೂ ಮುತ್ತನಿತ್ತು ಅವಧರಿಸಿ
ಒಳಗೊಳಗೆ ಗುಡುಗು, ಮಿಂಚು, ಒತ್ತರಿಸಿ ಬರುವ ಉನ್ಮಾದ

ಹಾಗೇ ಒರಗಿದ್ದು, ಮೇಲೆರಗಿಯೇ ಬಿಡಬೇಕೆ?
ಅಲ್ಲೂ ಬಿರುಸು ಚಲನೆ, ಗಂಟಲಲ್ಲಿ ಪಸೆಯಾರಿದ ಅನುಭವ...
ಹೆಚ್ಚಿದ ಆವೇಗ, ಕೊನೆಗೂ ಶರಣು ಶರಣು
ಅದೋ, ದೋ ಎಂದು ಸುರಿದೇ ಬಿಟ್ಟಿತು ವರ್ಷಧಾರೆ


ತುಸು ಬಳಲಿಕೆ, ಸಂತೃಪ್ತ ಮನಸ್ಸು
ಒಳಗೊಳಗೇ ಹೊಸ ಚೈತನ್ಯದ ಹರಿವು
ಮೌನ, ತಲ್ಲೀನ ಇಳೆ, ಭೋರ್ಗರೆದ ಮಳೆಗೆ ಬಾಗಿದ ಮನ

ಹಾಗೇ ನಸು ಮಂಪರು, ಆವರಿಸಿದ ನಿದ್ರೆ
ಅಲುಗಾಟ ಹೊರಳಾಟ ಇಲ್ಲ
ಯೋಗನಿದ್ರೆಯಂತೆ ಧ್ಯಾನಸ್ಥ
ಹಾ, ನಸು ಕದಲಿಕೆ, ತುಟಿಯಂಚಿನಲ್ಲಿ ನಸು ನಗು

ತೊರೆಯ ಮೇಲೆ ಇಳಿಬಿಟ್ಟ ಕಾಲ್ಗಳನ್ನು
ಹಾಗೇ ಮೇಲೆಳೆದುಕೊಂಡೆ.
ಸದ್ದಿಲ್ಲದೆ ಎದ್ದೆ, ಹಾಗೆ ಸರಿದೆ
ಸ್ವಲ್ಪ ದೂರ, ಹಿಂತಿರುಗಿ ನೋಡಿದೆ
ಸದ್ಯ ಎಚ್ಚರವಾಗಲಿಲ್ಲ...

Saturday, August 9, 2008

ಶೀತಲ ಭಾವಗಳ ಜಯಕಾಂತನ್‌


ಆ ವಿಶಾಲವಾದ ಜನಸಂದಣಿ ಇಲ್ಲದ ಪ್ರದೇಶದಲ್ಲಿ ಆ ಹುಡುಗಿ ಏಕಾಕಿಯಾಗಿ ನಿಂತಿದ್ದಳು. ಅವಳ ಜತೆಗೆ ಆ ವೃದ್ಧ ಪಶುವೂ ನಿಂತಿತ್ತು. ದೂರದಲ್ಲಿ ಎದುರುಗಡೆ ಕಾಲೇಜಿನ ಹೊರಾಂಗಣದಲ್ಲಿ ಆಗೀಗ ಯಾರಾದರೊಬ್ಬರು ನಡೆದಾಡುವುದು ಮಾತ್ರ ಕಾಣಿಸುತ್ತಿತ್ತು. ಥಟ್ಟನೆ ತೆರೆಯಿಳಿದಂತೆ ಕತ್ತಲು ಕವಿಯಿತು. ಅದರ ಹಿಂದೆಯೇ ಬಿರುಗಾಳಿ ಬೀಸಿ ಅಲ್ಲಿನ ಮರ ಗಿಡಗಳ ಎಲೆಗಳ ಮೇಲಿಂದ ನೀರು ಹನಿಗಳು ಪಟಪಟನೆ ಉದುರಿದವು. ಅವಳು ಮರಕ್ಕೆ ಒರಗಿ ನಿಂತಳು. ಸ್ವಲ್ಪ ನಿಂತಿದ್ದ ಆ ಮಳೆ ಇದ್ದಕ್ಕಿದ್ದಂತೆ ಹೆಚ್ಚಿತು. ಅಡ್ಡವಾಗಿ ದಾರಿಯಾಚೆ ಇದ್ದ ಕಾಲೇಜಿನೊಳಕ್ಕೆ ಪುನಃ ಹೋಗಲೆಂದು ಅವಳು ರಸ್ತೆಯ ಎರಡೂ ಕಡೆ ನೋಡಿದಳು. ದೊಡ್ಡ ಕಾರೊಂದು ದಾರಿಗಡ್ಡವಾಗಿ ಬಂದು ಅವಳ ಮುಂದೆ ಥಟ್ಟನೆ ನಿಂತಿತು. ಅದು ನಿಂತ ವೇಗಕ್ಕೆ ಸುಂದರವಾಗಿ ಅಲುಗಾಡಿತು.

....ಇದು ಜಯಕಾಂತನ್‌ ಕತೆಯೊಂದರ ತುಣುಕು. ಬೆಂಗಳೂರಿನ ಎಚ್ಚರದ ರಾತ್ರಿಯೊಂದರಲ್ಲಿ ಜಯಕಾಂತನ್‌ ಕಥೆಗಳ ಗುಂಗಿನಲ್ಲಿದ್ದೆ. ಅಲ್ಲಿ ಪದೇ ಪದೇ ಬಂದು ಹೋಗುವ ಅಮಾಯಕ ಗುಣ ಮತ್ತೆ ಮತ್ತೆ ನೆನಪಾಗುತ್ತಿತ್ತು. ಅದು ಜಯಕಾಂತನ್‌ ಅವರ ಅಗ್ನಿ ಪ್ರವೇಶ ಅನ್ನುವ ಸಣ್ಣ ಕಥೆ.

ಆಕೆ ಆಗಷ್ಟೇ ಹರೆಯಕ್ಕೆ ಕಾಲಿಟ್ಟ, ಬುದ್ಧಿಯಿಲ್ಲೂ ಬಲಿಯದ ಪುಟ್ಟ ಹುಡುಗಿ. ಕಾಲೇಜಿಗೆ ಆಗಷ್ಟೇ ಸೇರಿಕೊಂಡಿರಬೇಕು. ಅಂಜಿಕೆ, ಅಳುಕು ಅದನ್ನು ತೋರಿಸುತ್ತಿತ್ತು. ಆಗ ಜೋರಾಗಿ ಹೊಡೆದ ಮಳೆಗೆ ಮತ್ತುಷ್ಟು ಆತಂಕ ಪಡುತ್ತಾಳೆ. ಅಷ್ಟೊತ್ತಿಗೆ ಸುಂದರ ಕಾರು ಅವಳ ಪಕ್ಕ ನಿಲ್ಲುತ್ತದೆ. ಮುಂದಿನವು ಕನಸಿನಂತೆ ಚಲಿಸಿಹೋಗುವ ಕ್ಷಣಗಳು. ಕ್ಷಣದ ಸಂಕೋಚ, ದಾಕ್ಷಿಣ್ಯಕ್ಕೆ ಸಿಕ್ಕಿ ಆಕೆ ಕಾರು ಹತ್ತಿ ಬಿಡುತ್ತಾಳೆ. ಪುಟ್ಟ ಪುಟ್ಟದಕ್ಕೂ ಅಚ್ಚರಿ ಪಡುತ್ತಾ, ಆ ಸುಂದರ ಶ್ರೀಮಂತ ಹುಡುಗನ ನಗೆಗೆ ಒಳಗೊಳಗೇ ಸುಖಿಸುತ್ತಾ, ಕಾರಿನೊಳಗಿನ ಜಗತ್ತಿಗೆ ಬೆರಗಾಗುತ್ತಾಳೆ.
ಹೀಗೆ ಸಣ್ಣ ಸಣ್ಣ ಘಟನೆಗಳನ್ನೂ ಸೂಕ್ಷ್ಮವಾಗಿ ನೂಲುತ್ತಾರೆ ಜಯಕಾಂತನ್. ಅವರ ಜತೆಗೆ ಪುಟ್ಟ ಹುಡುಗಿಯ ಮನಸ್ಸನ್ನೂ ಅದೇ ಅಮಾಯಕತೆಯಿಂದ ವಿವರಿಸುತ್ತಾರೆ. ಕಣ್ಣೆದುರಿನ ಜಗತ್ತಿನಿಂದ ಬೇರೆಯಾಗಿ ನಿಲ್ಲುತ್ತಾ, ನಮ್ಮ ಮನಸ್ಸನ್ನೂ ಅದಕ್ಕೊಪ್ಪಿಸುತ್ತಾ ಹೋಗುತ್ತದೆ ಈ ಕಥೆ.

ಜಯಕಾಂತನ್‌ ತಮಿಳಿನ ಜ್ಞಾನಪೀಠ ಪುರಸ್ಕೃತ ಸಾಹಿತಿ. ಅವರದು ಹೋರಾಟದ ಹಾದಿ. ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಸ್ವಭಾವ. ‘ ಓರ್ವ ಲೇಖಕನೆಂಬ ಆಧಾರದಿಂದ ನನ್ನ ಹಕ್ಕುಗಳನ್ನು ಮುಂದಿಟ್ಟುಕೊಂಡು ಹೋರಾಡಲು ನನಗೆ ನಾಚಿಕೆ ಎನಿಸುತ್ತದೆ. ಯಾಕೆಂದರೆ, ಈ ಅಧಿಕಾರ ಅಂತರಾತ್ಮದಲ್ಲಿ ತಪ್ಪು ಎಸಗಿದ ಭಾವವನ್ನುಂಟು ಮಾಡುತ್ತದೆ.’ ಅನ್ನುವ ಅವರ ಮಾತುಗಳು ನೇರತನವನ್ನು ತೋರಿಸುತ್ತವೆ.
ಅದಿರಲಿ, ಅವರ ‘ ಹೊಸ ಚಪ್ಪಲಿ ಕಚ್ಚುತ್ತದೆ’ ಅನ್ನುವ ಕಥೆ ಮೇಲೆ ಹೇಳಿದ ಕತೆಗಿಂತ ಭಿನ್ನ. ವಿಭಿನ್ನ ಯೋಚನಾ ಲಹರಿ, ಹೊಸ ಹೊಸ ಹೊಳಹುಗಳು ಇಲ್ಲಿ ಬಹಳಾ ತಟ್ಟುತ್ತವೆ.

‘ ಹೋದವಾರ ಹೊಸ ಚಪ್ಪಲಿ ಕೊಂಡುಕೊಂಡೆ. ಕಚ್ಚಿದೇರಿ...ಹೊಲಿಯುವಾಗ ಬೆರಳುಗಳು ಆಡುವುದರಿಂದ ಬೇಗ ವಾಸಿಯಾಗುವುದಿಲ್ಲ’ ಅಂತ ಹೇಳುತ್ತಿದ್ದವಳು, ತಲೆಎತ್ತಿ ಅವನ ಮುಖ ನೋಡಿ ನಕ್ಕಳು. ‘ ನೋಡಿದಿರೇನ್ರಿ, ಚಪ್ಪಲಿ ಕೂಡ, ಹೊಸದಾಗಿದ್ದರೆ ಕಚ್ಚುತ್ತೇರಿ. ಅದಕ್ಕಾಗಿ ಹಳೆಯ ಚಪ್ಪಲಿಗಳನ್ನು ಯಾರಾದ್ರೂ ಕೊಂಡುಕೊಳ್ಳುತ್ತಾರೇನ್ರಿ...?’ ಅವಳು ನಗುತ್ತಾ ಹೇಳಿದಳು. ಅವನು ಅವಳ ಕರಗಳನ್ನು ಹಿಡಿದುಕೊಂಡು ಅತ್ತುಬಿಟ್ಟ.
ಇಂತಹ ಹಲವು ಚಿಂತನೆಗಳು ಇಲ್ಲಿ ಕಾಣಸಿಗುತ್ತವೆ.
ಹೀಗೆ ಆ ರಾತ್ರಿ ಓದಿದ ಕಥೆಗಳು ಕೆಲವೊಮ್ಮೆ ಅಚಾನಕ್‌ ಆಗಿ ನೆನಪಾಗುತ್ತವೆ. ತುಸು ಯೋಚಿಸಿ ನಕ್ಕು ಸುಮ್ಮನಾಗುತ್ತೇನೆ.

Sunday, August 3, 2008

ನನ್ನಮ್ಮ ನನ್ನಮ್ಮ ಆಗುವ ಮೊದಲು

ಆಗ ಅವಳು ಕಾಲೇಜಿಗೆ ಹೋಗ್ತಾ ಇದ್ಳು. ವಿಟ್ಲದ ಕಾರಿಂಜ ಹತ್ತಿರದ ಅವಳ ಅಜ್ಜನ ಮನೆಯಿಂದ...ಅವಳಿಗೆ ಆಟ ಅಂದರೆ ಯಕ್ಷಗಾನದ ಹುಚ್ಚು ವಿಪರೀತ. ಅದಕ್ಕಾಗಿ ಅವತ್ತು ಅಜ್ಜನಮನೆಯಲ್ಲಿ ಜಗಳ ಮಾಡಿ ಪುತ್ತೂರಿಗೆ ಹೊರಟಿದ್ದಳು. ಅಲ್ಲೇ ಅವಳ ಗೆಳತಿಯ ಮನೆಯಿದ್ದ ಕಾರಣ ಇನ್ನೂ ಅನುಕೂಲವಾಗಿತ್ತು.ಅದು ಸಾಲಿಗ್ರಾಮ ಮೇಳದ ಕಾಡ ಮಲ್ಲಿಗೆ ಪ್ರಸಂಗ, ಕಾಳಿಂಗರಾಯರೇ ಭಾಗವತರು. ಆ ಕಾಲದ ಘಟಾನುಘಟಿಗಳೆಲ್ಲ ದೊಡ್ಡ ದೊಡ್ಡ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಬಣ್ಣದ ವೇಷದ ಖದರೇ ಬೇರೆ.ಅವಳು ರಾತ್ರಿಯಿಡೀ ಕಣ್ಣ್ ಮಿಟುಕಿಸದಂತೆ ಯಕ್ಷಗಾನ ನೋಡಿದಳು. ಬೆಳಗ್ಗೆ ಗೆಳತಿ ಮನೆ ಕಡೆ ಹೊರಟಳು.ಅಲ್ಲಿಗೆ ತಲುಪುದರೊಳಗಾಗಿ ಅವಳ ಸೋದರ ಮಾವ ಅಲ್ಲಿ ಕಾಯ್ತಾ ಇದ್ರು.ಅವಸರವಸರದಲ್ಲಿ ಅವರಿಗೆ ಶಾಪ ಹಾಕುತ್ತಾ ಕಾರು ಹತ್ತಿದಳು. ಕಾರು ಅಜ್ಜನ ಮನೆ ಕಡೆ ಹೋಗದೇ ಅವಳ ಮನೆ ದಾರಿ ಹಿಡಿಯಿತು.
ಅವಳಿಗೆ ಕಸಿವಿಸಿ..ನಿನ್ನೆ ತಾನೇ ಜಗಳ ಮಾಡಿ ಮಾವನ ಹತ್ತಿರ ಕೋಪ ಮಾಡಿಕೊಂಡ ಕಾರಣ ಈಗ ಮಾವನಲ್ಲಿ, ಯಾಕೆ ಮನೆ ಕಡೆ ಕರ್‍ಕೊಂಡು ಹೋಗ್ತಾ ಇದ್ದೀರಾ? ಅಂತ ಕೇಳಲೂ ಮುಜುಗರ. ಹಸಿವು ಬೇರೆ. ಮಾವ ನಿನ್ನೆ ಜಗಳದ ಬಗ್ಗೆ ಅಪ್ಪನ ಹತ್ರ ಚಾಡಿ ಹೇಳವುದಕ್ಕೆ ಪ್ಲಾನ್‌ ಮಾಡ್ತಿದ್ದಾನಾ? ಅಂತ ಸಂಶಯ, ಒಳಗೊಳಗೇ ಭಯ.
ಈ ಟೆನ್ಶನ್‌ನಲ್ಲಿ ಸುಮ್ಮನೆ ಕೂರುವುದೂ ಕಷ್ಟವಾಗಿ ಮಿಸುಕಾಡುತ್ತಿದ್ದಳು. ಮಾವ ಮೌನವಾಗಿದ್ದ.
ಕುಡ್ತಮೊಗೇರು ಬರುವ ಹೊತ್ತಿಗೆ ಕಾರಿನ ಟಯರ್‌ ಪಂಕ್ಚರ್‍. ಅಲ್ಲೆಲ್ಲೂ ಗ್ಯಾರೇಜಿಲ್ಲ. ಮಾವನತ್ರ ಎಕ್ಟ್ರಾ ಟಯರೂ ಇಲ್ಲ... ಕೊನೆಗೆ ಇದು ಇವತ್ತು ರಿಪೇರಿ ಆಗುವುದಿಲ್ಲ ಅಂದು ಕೊಂಡು ಕಾರನ್ನು ಪಕ್ಕಕ್ಕೆ ಹಾಕಿಯಾಯಿತು. ಅವಸರವಸರವಾಗಿ ನಡೆದುಕೊಂಡೇ ಹೋಗೋಣ, ಬೇಗ ನಡಿ ಅಂದ ಮಾವ. ಇವಳಿಗಿನ್ನೂ ಸಂಶಯ, ರಾತ್ರಿ ನಿದ್ದೆ ಕೆಟ್ಟದ್ದಕ್ಕೆ ಹೊಟ್ಟೆಯಲ್ಲಿ ಸಂಕಟ. ಅವಳು ಒಳಗೇ ಕೋಪದಿಂದ ಕುದಿಯುತ್ತಿದ್ದಳು...ಸಿಟ್ಟಿನಲ್ಲೇ ಮಾವನ ಜತೆಗೆ ಹೆಜ್ಜೆ ಹಾಕತೊಡಗಿದಳು.
ಕುಡ್ತಮೊಗೇರಿನಿಂದ ಅಜ್ಜನ ಮನೆಗೆ ೫ ಮೈಲಿ ದೂರ...ನಡೆಯುವಾಗ ಕಾಲು ಜೋಮು ಹಿಡಿದಂತಾಗುತ್ತಿತ್ತು. ತಲೆ ಸಿಡಿತ ಬೇರೆ ಸುರುವಾಗಿತ್ತು. ಪೂವಕ್ಕು ಮನೆಯ ಹತ್ತಿರ ಬರುವಾಗ ತಲೆತಿರುಗಿ ಬಿದ್ದೇ ಬಿಟ್ಟಳು. ಮಾವನಿಗೆ ಏನು ಮಾಡುವುದೆಂದೇ ತಿಳಿಯಲಿಲ್ಲ...ಆಗ ಅವನಿಗಿನ್ನೂ ಇಪ್ಪತೈದರ ಪ್ರಾಯ.ಮದುವೆ ಆಗಿರಲಿಲ್ಲ. ದೇವರ ದಯೆದಿಂದ ಅದೇ ಸಮಯಕ್ಕೆ ಪೂವಕ್ಕು ಆ ದಾರಿಯಾಗಿ ಬರುತ್ತಿದ್ದಳು...ಮೂರ್ಛೆ ಹೋಗಿರುವ ಅವಳನ್ನೂ, ಬೆಪ್ಪನಂತೆ ನಿಂತಿರುವ ಮಾವನನ್ನೂ ಕಂಡು ವಿಷಯ ಏನೆಂದು ಕೇಳಿದಳು? ಮಾವ ಪೆದ್ದು ಪೆದ್ದಾಗಿ ಎಲ್ಲವನ್ನೂ ಹೇಳಿದ.
ಅವಳಿಗೆ ಕಾಫಿಯನ್ನೂ ಕುಡಿಸದೇ ಹಾಗೇ ಕರೆದುಕೊಂಡು ಬಂದ ಮಾವನಿಗೆ ಅವಳಿಂದ ಸರಿಯಾಗಿಯೇ ಪೂಜೆಯಾಯಿತು. ನಂತರ ಪೂವಕ್ಕು ಮನೆಯಿಂದ ನೀರು ತಂದು ಅವಳ ಮುಖಕ್ಕೆ ನೀರು ಹಾಕಿದಾಗ ಆಕೆಗೆ ಜ್ಞಾನ ಬಂದಂತಾಯಿತು. ಬೇಡ ಬೇಡವೆಂದರೂ ಕೇಳದೇ ತಿಂಡಿ, ಕಣ್ಣ ಚಾ ( ಹಾಲಿಲ್ಲದ ಚಹ) ಕುಡಿಸಿದ ಮೇಲೆ ಆಕೆ ಸ್ವಲ್ಪ ಸುಧಾರಿಸಿದಳು. ಮಾವನಿಗೆ ಬುದ್ಧಿ ಹೇಳಿ ಅವಳನ್ನು ಮಾವನೊಂದಿಗೆ ಕಳುಹಿಸಿದಳು ಪೂವಕ್ಕು.
ಅಂತೂ ಇಂತೂ ಮನೆಗೆ ಬಂದಾಗ ಅವಳು ಮನೆಗೆ ಬಂದು ಮುಟ್ಟಿದಾಗ ಮುಖ ನೊಡುವುದಕ್ಕೇ ಆಗುತ್ತಿರಲಿಲ್ಲ. ಆದರೇನು ಮಾಡುವುದು ಅವಳು ಸ್ವಲ್ಪ ರೆಸ್ಟ್‌ ತೆಗೆದುಕೊಳ್ಳುವ ಹೊತ್ತಿಗೇ ಅವಳಮ್ಮ ಅವಳನ್ನು ಬಚ್ಚಲಿಗೆ ಕರೆದೊಯ್ದು, ತಲೆ ತಿಕ್ಕಿ , ಬೇಗ ಬೇಗ ಸ್ನಾನ ಮುಗಿಸಲು ಹೇಳಿದಳು..ಇವಳಿಗೆ ಇನ್ನೂ ಗೊಂದಲ..ಇವರೆಲ್ಲ ಯಾಕೆ ಹೀಗೆ ಮಾಡುತ್ತಾರೆ?, ಎಲ್ಲ ಒಗಟಿನಂತಿತ್ತು. ಸ್ನಾನ ಮುಗಿಸಿ ಬಂದವಳಿಗೆ, ಅಪ್ಪ ಅಮ್ಮ ಯಾರದೋ ದಾರಿ ನೋಡುತ್ತಿದ್ದದ್ದನ್ನು ಕಂಡು ಮತ್ತಷ್ಟು ಗೋಜಲು..ಇದೆಲ್ಲ ಎಂತಮ್ಮಾ? ಅಂತ ಕೇಳಿದರೆ, ಏನೂ ಇಲ್ಲ, ನೀನು ಹೆದರಬೇಡ, ಎಂತದ್ದೂ ಆಗುವುದಿಲ್ಲ ಅನ್ನುವ ಉತ್ತರ. ಮನೆಯಲ್ಲಿ ಹಾಕುವ ಉದ್ದ ಲಂಗ ಹಾಕಿ ಬಂದಾಗ, ‘ಸೀರೆ ಸುತ್ತು ಕೂಸೇ ...’ ಅವಳಪ್ಪ ಹೇಳಿದ್ರು...ಕಕ್ಕಾ ಬಿಕ್ಕಿಯಾಗಿ ಏನರಿಯದೇ ಮಿಕಿ ಮಿಕಿ ನೋಡಿದ್ಲು...ಅಪ್ಪ ಕಣ್ಣು ದೊಡ್ಡ ಮಾಡಿ ನೊಡಿದಾಗ, ವಿಧಿಯಿಲ್ಲದೇ ಹಳೇ ಸೀರೆಯುಟ್ಟು ಬಂದಳು.
ಸ್ವಲ್ಪ ಹೊತ್ತಿನಲ್ಲೇ ಮನೆಗೆ ಅಪರಿಚಿತರ ಆಗಮನ. ಇದ್ಯಾರಪ್ಪ ನಂಗೆ ಗೊತ್ತಿಲ್ಲದ ನೆಂಟರು? ಅಂತ ಅವಳು, ಹಾಗೇ ನೋಡುತ್ತಿದ್ದಾಗ ಅಮ್ಮ ಅವಸರದಲ್ಲಿ ಬಂದು ಹೋಗಿ ಕಾಫಿ ಕೊಟ್ಟು ಬಾ ಅಂತ ಪ್ಲೇಟಿನ ಮೇಲೆ ಕಾಫಿ ಲೋಟವಿಟ್ಟು ಕಳುಹಿಸಿದಳು. ಆಮೇಲೆ ಏನಾಯಿತು ಅಂತ ಹೇಳಲಿಕ್ಕೆ ಅವಳಿಗೆ ನಾಚಿಕೆ. ಅಷ್ಟೊತ್ತಿಗೆ ಅವಳಮ್ಮ ನಗುತ್ತಾ ಹೇಳಿದಳು, ‘ಆಮೇಲೆ 2 ವರ್ಷ ಆಗುವ ಮೊದಲೇ ನೀನು ಹುಟ್ಟಿದೆ...

ಹನಿ ಹನಿ ಕಹಾನಿ

ನಮ್ಮ ಮನೆಯ ಮೇಲಿನ ಗುಡ್ಡೆಯ ಪುಟ್ಟ ದಿಣ್ಣೆ ಹತ್ತಿ ಕೂತಿದ್ದೆವು. ಈಗಷ್ಟೇ ಹನಿದರೂ ನೀಲಿ ಮೋಡಕ್ಕೆ ದಣಿವಿಲ್ಲ. ಆತ ಮೆಲ್ಲ ಗುನುಗುತ್ತಿದ್ದ. ಯಾವುದೋ ಘಜಲ್ ಸಾಲುಗಳು...ನಮ್ಮ ಎದುರಿಗಿದ್ದದ್ದು ಮೊದಲು ದಟ್ಟ ಕಾಡಾಗಿದ್ದ ಈಗ ರಬ್ಬರ್‌ ತೋಟವಾಗಿರುವ ಎತ್ತರ ತಗ್ಗಿನ ಭೂಮಿ. ಆಗ ಸಂಜೆ ಆರರ ಹೊತ್ತು, ಮಳೆಯ ಕಾರಣ ಇನ್ನೂ ಕತ್ತಲಾದಂತೆ ಕಾಣುತ್ತಿತ್ತು. ‘ ಈಗ ಜೋರು ಮಳೆ ಬಂದ್ರೆ ಕಷ್ಟ ಅಲ್ವಾ? ’ ನಾನಂದೆ. ಹೂಂ..ಅಂದ. ಗುನುಗುತ್ತಿದ್ದ ಘಜಲ್‌, ಒಮ್ಮೆ ನಿಂತು ಮತ್ತೆ ಸಣ್ಣ ಶಿಳ್ಳೆಯೊಂದಿಗೆ ಮುಂದುವರಿಯಿತು. ‘ ನಾವು ಇಂತದ್ದೇ ಜಾಗ ನೋಡಿ ಇಲ್ಲೇ ಮೂಡಬಿದ್ರೆ ಹತ್ರ ಒಂದು ಜಾಗ ಮಾಡಿದ್ರೆ ಹೇಗೆ? ’ ಮತ್ತೆ ಘಜಲ್‌ಗೆ ಅರ್ಧವಿರಾಮ. ಅವ ಉತ್ತರಿಸಲಿಲ್ಲ. ಗುನುಗು ಮುಂದುವರಿಯಿತು. ಒಂಥರಾ ಮುಖ ಮಾಡಿ ಹೇಳಿದ,‘ ಈಗೀಗ ಬರವಣಿಗೆ ಯಾಕೋ ಕೈ ಹಿಡೀತಾ ಇಲ್ಲ’. ಮತ್ತೆ ಹಾಡು ಮುಂದುವರಿಯಲಿಲ್ಲ. ‘ ಹೌದು, ರಸವೇ ಇಲ್ಲದೆ ಒಣಗಿದ ಹಾಗಿರುತ್ತದೆ’ ನಾನಂದೆ. ಆತ ಮತ್ತೆ ಮೌನವಾದ. ಆಯ್, ತಲೆ ಮೇಲೆ ದಪ್ಪ ಹನಿ ಬಿತ್ತು. ದೂರದಲ್ಲಿ ನವಿಲಿನ ಕೇಕೆ, ‘ಇಲ್ಲೇ ಎಲ್ಲೋ ನವಿಲಿರ್‍ಬೇಕು, ಬಾ ಮರದಡಿಗೆ ನಿಂತರೆ ಕಾಣಬಹುದು. ನವಿಲು ಕುಣಿಯುವುದು ಭಾರೀ ಚಂದ. ನಾನಿದುವರೆಗೆ ನೋಡಿಲ್ಲ’ ಅಂದ . ನಾನು ಹಿಂಬಾಲಿಸಿದೆ. ಮರದಡಿ ನಿಂತೆವು. ಅಷ್ಟರಲ್ಲಿ ಬರಾ..ಅಂತ ಸುರಿದ ಮಳೆಗೆ ನಾನು ಪೂರಾ ಒದ್ದೆ. ಅವನತ್ತ ನೋಡಿದೆ, ಅವ ಕಾಡ ಕಡೆಗೇ ನೋಡುತ್ತಿದ್ದ. ಮೈಯಿಂದ ನೀರಿಳಿಯುತ್ತಿತ್ತು. ಆ ರಾತ್ರಿ ಯಾಕೋ ಅವ ಮೌನವಾಗಿದ್ದ.....